ಬೆಂಗಳೂರು, ಆಗಸ್ಟ್ 18: ಟಿ20 ವಿಶ್ವಕಪ್ನ ಆರಂಭಕ್ಕೆ ಇನ್ನು ಎರಡು ತಿಂಗಳು ಮಾತ್ರವೇ ಬಾಕಿಯಿದೆ. ಎಲ್ಲಾ ತಂಡಗಳು ಕೂಡ ಈ ಮಹತ್ವದ ಟೂರ್ನಿಯಲ್ಲಿ ತಮ್ಮ ತಂಡದ ಪರವಾಗಿ ಅತ್ಯುತ್ತಮ ಆಟಗಾರರ ಬಳಗವನ್ನು ಕಳುಹಿಸಲು ಸಿದ್ಧತೆ ನಡೆಸುತ್ತಿದೆ. ಈ ಮಹತ್ವದ ಟೂರ್ನಿಯನ್ನು ಗೆದ್ದು ಚುಟುಕು ಕ್ರಿಕೆಟ್ನ ಚಾಂಪಿಯನ್ ಪಟ್ಟಕ್ಕೇರಲು ಎಲ್ಲಾ ತಂಡಗಳು ಕೂಡ ಸಜ್ಜಾಗುತ್ತಿದೆ. ಈ ಸಂದರ್ಭದಲ್ಲಿ ಹಿರಿಯ ಆಟಗಾರ ಹಾಗೂ ಕಾಮೆಂಟೇಟರ್ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾದ ಓರ್ವ ಆಟಗಾರನ ಬಗ್ಗೆ ವಿಶೇಷ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಚುಟುಕು ಕ್ರಿಕೆಟ್ನ ವಿಶ್ವಕಪ್ನಲ್ಲಿ ಈತ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಮಹತ್ವದ ಪಾತ್ರವಹಿಸುತ್ತಾರೆ ಎಂದಿದ್ದಾರೆ.
ಅನುಭವಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೀಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದು ಟೀಮ್ ಇಂಡಿಯಾ ಆಟಗಾರ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮೇಲೆ. ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಭಾರತ ತಂಡಕ್ಕೆ ಅತ್ಯಂತ ಮೌಲ್ಯಯುತ ಆಟಗಾರನಾಗಿರಲಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಅಂಗಳದಲ್ಲಿ ಸೋತರೂ ಟೀಮ್ ಇಂಡಿಯಾ ಎಂದರೆ ಭಯವಿಲ್ಲ ಎಂದ ಸಿಲ್ವರ್ವುಡ್!
"ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ. ಆ ಕ್ರಮಾಂಕದಲ್ಲಿದ್ದಾಗ ಅವರು ಯಾವಾಗಲೂ ತಂಡದ ಗೆಲುವಿಗೆ ನಿರ್ಣಾಯಕ ಪಾತ್ರವಹಿಸುತ್ತಾರೆ. ಆತ ಉಸಿರು ಬಿಗಿಹಿಡಿದುಕೊಳ್ಳುವ ರೀತಿಯಲ್ಲಿ ಪಂದ್ಯವನ್ನು ಎದುರಾಳಿ ಕಡೆಯಿಂದ ತನ್ನತ್ತ ಸೆಳೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಂತಾ ಅದ್ಭುತವಾದ ಆಟಗಾರ ಆತ" ಎಂದು ದಿನೇಶ್ ಕಾರ್ತಿಕ್ ಹೇಳಿಕೆ ನೀಡಿದ್ದಾರೆ.
ಇನ್ನು ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಸಾಮರ್ಥ್ಯದ ಬಗ್ಗೆಯೂ ದಿನೇಶ್ ಕಾರ್ತಿಕ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಚೆಂಡಿನ ಮೂಲಕವೂ ಆತನೋರ್ವ ಅದ್ಭುತವಾದ ಆಟಗಾರನಾಗಿದ್ದಾರೆ. ಆತ ವಿಕೆಟ್ ಪಡೆಯಬಲ್ಲ ಬೌಲರ್ ಆಗಿದ್ದು 85-87 ಮೈಲು ವೇಗದಲ್ಲಿ ಚೆಂಡೆಸೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ ಸಂದರ್ಭಕ್ಕೆ ತಕ್ಕನಾಗಿ ನಿಧಾನಗತಿಯ ಎಸೆತಗಳನ್ನು ಕೂಡ ಎಸೆಯುತ್ತಾರೆ" ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಪ್ರಬಲ ತಂಡ ಎಂಬ ಅಭಿಪ್ರಾಯವನ್ನು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಹದಿನಾಲ್ಕು ಆವೃತ್ತಿಯ ಐಪಿಎಲ್ ಪಂದ್ಯಗಳು ನಡೆದಿದೆ. ಇಂತಾ ಸಂದರ್ಭದಲ್ಲಿ ನಮ್ಮ ತಂಡದಲ್ಲಿ ಸಾಕಷ್ಟು ಮಂದಿ ಟಿ20 ಕ್ರಿಕೆಟ್ನ ಅಪಾರ ಅನುಭವವನ್ನು ಹೊಂದಿದವರಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
"ಪ್ರತಿಯೊಬ್ಬ ಆಟಗಾರ ಕೂಡ 150-200 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಅಂದರೆ ಮಹತ್ವದ ಘಟ್ಟದ ಸಂದರ್ಭದಲ್ಲಿ ಇಂತಾ ಅನುಭವಗಳು ನಿಮಗೆ ಸಾಕಷ್ಟು ಸಹಕಾರಿಯಾಗುತ್ತದೆ. ಮಹತ್ವದ ಘಟ್ಟವನ್ನು ದಿಟ್ಟವಾಗಿ ಎದುರಿಸಲು ಇಂತಾ ಅನುಭವಗಳು ಅಗತ್ಯವಾಗಿದೆ. ಹೀಗಾಗಿ ಈ ಬಾರಿಯ ಭಾರತೀಯ ತಂಡ ಕನಿಷ್ಠ ಸೆಮಿಫೈನಲ್ ಹಂತಕ್ಕೆ ತಲುಪುವುದರಲ್ಲಿ ನನಗೆ ಯಾವುದೇ ಅನುಮಾನಗಳು ಇಲ್ಲ" ಎಂದು ದಿನೇಶ್ ಕಾರ್ತಿಕ್ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ ಅಕ್ಟೋಬರ್ 17ರಿಂದ ಯುಎಇ ಹಾಗೂ ಒಮಾನ್ನಲ್ಲಿ ನಡೆಯಲಿದೆ. ಬಿಸಿಸಿಐ ಆಯೋಜಿಸುತ್ತಿರುವ ಈ ಚುಟುಕು ಕ್ರಿಕೆಟ್ನ ಮಹಾ ಸಮರ ಕೊರೊನಾವೈರಸ್ನ ಕಾರಣದಿಂದಾಗಿ ಭಾರತದಿಂದ ಹೊರಗಡೆ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಗಳ ನಡುವಿನ ಸೆಣೆಸಾಟ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. 2016ರಲ್ಲಿ ನಡೆದ ಟಿ20 ವಿಶ್ವಕಪ್ನ ಬಳಿಕ ಇದೇ ಮೊದಲ ಬಾರಿಗೆ ಚುಟುಕು ಕ್ರಿಕೆಟ್ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ಹೀಗಾಗಿ ಈ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಬಾರಿಯ ಟಿ20 ವಿಶ್ವಕಪ್ನ ಸೆಣೆಸಾಟ ಅಕ್ಟೋಬರ್ 24ರಂದು ದುಬೈನಲ್ಲಿರುವ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.