ಜಡೇಜಾ ವಿಶ್ವಾಸಾರ್ಹ ಆಲ್ರೌಂಡರ್
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಹಿನ್ನಡೆಯನ್ನು ಅನುಭವಿಸಿದ ಭಾರತ ತಂಡಕ್ಕೆ ನಂಬಿಕಾರ್ಹ ಆಲ್ರೌಂಡರ್ ಅಗತ್ಯವಿತ್ತು. ಸದ್ಯಕ್ಕೆ ರವೀಂದ್ರ ಜಡೇಜಾ ಅವರಿಗಿಂತ ಉತ್ತಮ ಆಟಗಾರ ಆರನೇ ಕ್ರಮಾಂಕಕ್ಕೆ ಬೇರೆ ಯಾರೂ ಇಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ರವೀಂದ್ರ ಜಡೇಜಾ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ರನ್ ಗಳಿಸುತ್ತಿದ್ದಾರೆ ಮತ್ತು ಕಳೆದ ಕೆಲವು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಫಿನಿಶರ್ ಪಾತ್ರವನ್ನು ಕೂಡ ನಿರ್ವಹಿಸಿಕೊಂಡು ಬಂದಿದ್ದಾರೆ. ಅದರಲ್ಲೂ ಐಪಿಎಲ್ನಲ್ಲಿ ರವೀಂದ್ರ ಜಡೇಜಾ ಮೇಲಿನ ಕ್ರಮಾಂಕದಲ್ಲಿ ಕಣಕ್ಕಿಳಿದು ತಂಡ ತನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದಾರೆ.
ವಿಫಲವಾದ ವೆಂಕಟೇಶ್ ಐಯ್ಯರ್ ಪ್ರಯೋಗ
ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ಆರನೇ ಕ್ರಮಾಂಕದಲ್ಲಿ ವೆಂಕಟೇಶ್ ಐಯ್ಯರ್ಗೆ ಅವಕಾಶ ನೀಡುವ ಮೂಲಕ ಪ್ರಯೇಗವನ್ನು ನಡೆಸಿತು. ಆದರೆ ಏಕದಿನ ಸರಣಿಯ ಮೊದಲ ಎರಡು ಪಂದ್ಯದಲ್ಲಿಯೂ ವೆಂಕಟೇಶ್ ಐಯ್ಯರ್ ಉತ್ತಮ ಪ್ರದರ್ಶನ ನೀಡಲು ವಿಫಲವಾದರು. ಹೀಗಾಗಿ ವೆಸ್ಟ್ ಇಮಡೀಸ್ ವಿರುದ್ಧದ ಏಕದಿನ ಸರಣಿಯಿಂದ ಐಯ್ಯರ್ ಅವರನ್ನು ಕೈಬಿಡಲಾಗಿದೆ. ಈ ಮಧ್ಯೆ ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ರವೀಂದ್ರ ಜಡೇಜ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದಾರೆ. ಆದರೆ ದೀಪಕ್ ಹೂಡಾಗೆ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ.
ಜಡೇಜಾ ಬಳಿ ಆರನೇ ಕ್ರಮಾಂಕದಲ್ಲಿ ಆಡಲು ಬೇಕಾದ ಪ್ರಬುದ್ಧತೆಯಿದೆ
ಇನ್ನು ಭಾರತದ ಆರನೇ ಕ್ರಮಾಂಕದ ಬ್ಯಾಟರ್ನ ಸಮಸ್ಯೆಗೆ ರವೀಂದ್ರ ಜಡೇಜಾ ಉತ್ತಮ ಪರಿಹಾರವಾಗಬಲ್ಲರು ಎಂಬ ಮಾತನ್ನು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಅಲ್ಲದೆ ಜಡೇಜಾಗೆ ಸಾಕಷ್ಟು ಪಂದ್ಯಗಳನ್ನು ಆಡಿದ ಅನುಭವ ಕೂಡ ಇರುವುದರಿಂದಾಗಿ ಆರನೇ ಕ್ರಮಾಂಕವನ್ನು ಸಮರ್ಥವಾಗಿ ನಿರ್ವಹಿಸುವ ಪ್ರಬುದ್ಧತೆ ಕೂಡ ಅವರಲ್ಲಿದೆ ಎಂದಿದ್ದಾರೆ ದಿನೇಶ್ ಕಾರ್ತಿಕ್. "ರವೀಂದ್ರ ಜಡೇಜಾ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಸಿದ್ಧವಿರುವ ಆಟಗಾರನಾಗಿದ್ದಾರೆ. ಅಲ್ಲದೆ ಅವರು ಐದನೇ ಕ್ರಮಾಂಕದಲ್ಲಿ ಆಡಲೂ ಸಿದ್ಧರಿದ್ದಾರೆ. ಅವರು ಬುದ್ಧಿವಂತಿಕೆಯಿಂದ ಆಡಬಲ್ಲವರಾಗಿದ್ದಾರೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.
ಬ್ಯಾಟಿಂಗ್ ಮೂಲಕ ಗೆಲ್ಲಿಸಬಲ್ಲ ಆಟಗಾರ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ದಿನೇಶ್ ಕಾರ್ತಿಕ್ ಕ್ರಿಕ್ ಬಜ್ ಜೊತೆಗೆ ಮಾತನಾಡುತ್ತಾ ರವೀಂದ್ರ ಜಡೇಜಾ ಅವರ ಸಾಮರ್ಥ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ರವೀಂದ್ರ ಜಡೇಜಾ ಬಳಿ ಕೇವಲ ಬ್ಯಾಟಿಂಗ್ನಲ್ಲಿಯೇ ತಂಡವನ್ನು ಗೆಲ್ಲಿಸುವಂತಾ ಸಾಮರ್ಥ್ಯವಿದೆ. ಅದರಲ್ಲೂ ವೈಟ್ಬಾಲ್ ಕ್ರಿಕೆಟ್ನಲ್ಲಿ ರವೀಂದ್ರ ಜಡೇಜಾ ಅವರ ಪ್ರಮುಖ ಅಸ್ತ್ರವೇ ಅವರ ಬ್ಯಾಟಿಂಗ್ ಸಾಮರ್ಥ್ಯ" ಎಂದು ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ.