ಲೀಡ್ಸ್, ಆಗಸ್ಟ್ 26: ಹೆಡಿಂಗ್ಲೆ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭಾರೀ ಆಘಾತಕ್ಕೆ ಒಳಗಾಗಿದ್ದು ಪಂದ್ಯದಲ್ಲಿ ತನ್ನ ನಿಯಂತ್ರಣವನ್ನು ಕಳೆದುಕೊಂಡಿದೆ. ಇಂಗ್ಲೆಂಡ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ವೇಗಿ ಜಹೀರ್ ಖಾನ್ ಭಾರತ ತಂಡಕ್ಕೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತೆ ಹಿಡಿತವನ್ನು ಸಾಧಿಸಬೇಕಾದರೆ ತಂಡ ಮೊದಲ ಇನ್ನಿಂಗ್ಸ್ನ ಹಿನ್ನೆಡೆಯನ್ನು ಮರೆಯಬೇಕಿದೆ ಎಂದು ಜಹೀರ್ ಖಾನ್ ಹೇಳಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಮೊದಲ ಇನ್ನಿಂಗ್ಸ್ನ ಆಟದಿಂದ ಎಷ್ಟು ಶೀಘ್ರವಾಗಿ ಹೊರಗೆ ಬರುತ್ತಾರೋ ತಂಡಕ್ಕೆ ಅಷ್ಟು ಉತ್ತಮ. ಆಟಗಾರರು ಭಿನ್ನ ಮನಸ್ಥಿತಿಯಲ್ಲಿ ಕಣಕ್ಕಿಳಿಯುವ ಅಗತ್ಯವಿದೆ ಎಂದಿದ್ದಾರೆ ತಂಡದ ಮಾಜಿ ವೇಗದ ಬೌಲರ್.
"ಅವರು ಆದಷ್ಟು ಶೀಘ್ರವಾಗಿ ಇದರಿಂದ ಹೊರಗೆ ಬರಲು ದಾರಿಯನ್ನು ಕಂಡುಕೊಳ್ಳಬೇಕಿದೆ. ಅವರು ವಿಭಿನ್ನವಾಗಿ ಏನಾದರೂ ಮಾಡಲೇ ಬೇಕಿದೆ. ವಿಭಿನ್ನವಾಗಿ ಎಂದರೆ ನಾನು ತಾಂತ್ರಿಕವಾಗಿ ಹೇಳುತ್ತಿಲ್ಲ. ಅವರು ವಿಭಿನ್ನ ಮನಸ್ಥಿತಿತಿಯೊಂದಿಗೆ ಕಣಕ್ಕಿಳಿಯಬೇಕಿದೆ. ಅವರು ಮೊದಲ ದಿನದ ಆಟದ ಬಗ್ಗೆ ಎಷ್ಟು ಸಮಯ ನೆನಪಿಸಿಕೊಳ್ಳುತ್ತಾರೋ ಅವರಿಗೆ ಮುನ್ನುಗ್ಗಲು ಅದು ಕಠಿಣವಾಗುತ್ತಲೇ ಸಾಗುತ್ತದೆ" ಎಂದಿದ್ದಾರೆ ಜಹೀರ್ ಖಾನ್. ಈ ದಿನವನ್ನು ಮರೆಯುವುದು ಟೀಮ್ ಇಂಡಿಯಾ ಪಾಲಿಗೆ ಬಹಳ ಮುಖ್ಯವಾಗಿದೆ. ಈ ದಿನ ಯಾವುದು ಕೂಡ ಅವರ ಪರವಾಗಿ ಇರಲಿಲ್ಲ. ಅದು ಬ್ಯಾಟಿಂಗ್ ಆಗಿರಬಹುದು ಅಥವಾ ಬೌಲಿಂಗ್ ಆಗಿರಬಹುದು ಎಂದು ಜಹೀರ್ ಖಾನ್ ಕ್ರಿಕ್ ಬಜ್ಗೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್
ಮೊದಲ ದಿನ ನಡೆದ ಬೆಳವಣಿಗೆಯನ್ನು ಆಟಗಾರರು ಆದಷ್ಟು ಶೀಘ್ರವಾಗಿ ಮರೆಯುವ ಪ್ರಯತ್ನವನ್ನು ನಡೆಸಬೇಕಿದೆ. ಹಾಗಿದ್ದರೆ ಮಾತ್ರ ಎರಡನೇ ದಿನದ ಆಟದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗಲಿದೆ ಎಂದು ಜಹೀರ್ ಖಾನ್ ಹೇಳಿಕೆ ನೀಡಿದ್ದಾರೆ. " ಸಾಧ್ಯವಾದಷ್ಟು ಬೇಗ ಟೀಮ್ ಇಂಡಿಯಾ ಅದನ್ನು ಮರೆಯುವ ಪ್ರಯತ್ನ ಮಾಡಬೇಕು. ದುರದೃಷ್ಟವಶಾತ್ ನೀವು ಅದರಲ್ಲಿಂದ ಹೊರಬರಲು ಸಾಧ್ಯವಾಗದಿದ್ದರೆ ಮುಂದಿನ ದಿನದ ಪಂದ್ಯಗಳಲ್ಲಿ ಅದರ ಪರಿಣಾಮ ತಂಡದ ಪ್ರದರ್ಶನದ ಮೇಲೆ ಬೀಳಲಿದೆ. ಇಂತಾ ದಿನಗಳು ಎದುರಾದಾಗ ಅವುಗಳನ್ನು ಮರೆತು ಹೊರಬರುವುದು ಸುಲಭ ಸಾಧ್ಯವಿಲ್ಲ" ಎಂದು ಜಹೀರ್ ಖಾನ್ ವಿವರಿಸಿದ್ದಾರೆ.
ಇಂಗ್ಲೆಂಡ್ ತಂಡ ಎರಡನೇ ದಿನದಾಟದಲ್ಲಿಯೂ ತನ್ನ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದೆ. ತಂಡದ ಅಗ್ರ ನಾಲ್ವರು ಆಟಗಾರರು ಅರ್ಧ ಶತಕವನ್ನು ಗಳಿಸಿದ್ದಾರೆ. ಎರಡನೇ ದಿನದ ಎರಡನೇ ಸೆಶನ್ನಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಹಾಗೂ ಟೇವಿಡ್ ಮಲನ್ ಅರ್ಧ ಶತಕ ಗಳಿಸಿ ಬ್ಯಾಟಿಂಗ್ ಮುಂದುವರಿಸುತ್ತಿದ್ದಾರೆ. ಈ ಮೂಲಕ ಇಂಗ್ಲೆಂಡ್ ಈಗಾಗಲೇ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 200ಕ್ಕೂ ಅಧಿಕ ಮುನ್ನಡೆಯನ್ನು ಸಾಧಿಸಿದ್ದು ಬೃಹತ್ ಮುನ್ನಡೆಯನ್ನು ಪಡೆಯುವುದು ಖಚಿತವಾಗಿದೆ. ಈ ಮೂಲಕ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಟೀಮ್ ಇಂಡಿಯಾ ಆಡುವ ಬಳಗ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್
ಇಂಗ್ಲೆಂಡ್ ಆಡುವ ಬಳಗ: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಹಸೀಬ್ ಹಮೀದ್, ಡೇವಿಡ್ ಮಲನ್, ಜಾನಿ ಬೈರ್ಸ್ಟೊವ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಸ್ಯಾಮ್ ಕರನ್, ಒಲ್ಲಿ ರಾಬಿನ್ಸನ್, ಕ್ರೇಗ್ ಓವರ್ಟನ್, ಜೇಮ್ಸ್ ಆಂಡರ್ಸನ್