ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಮಿಂಚಿನ ಬ್ಯಾಟಿಂಗ್ ನಡೆಸಿದ ತಮಿಳುನಾಡು ಬ್ಯಾಟ್ಸ್ಮನ್ ಶಾರೂಖ್ ಖಾನ್ ಸಿಕ್ಸರ್ ಸಿಡಿಸಿ ಐತಿಹಾಸಿಕ ಗೆಲುವನ್ನ ತಂದುಕೊಟ್ಟರು. ಶಾರೂಖ್ರ ಎಪಿಕ್ ರನ್ ಚೇಸ್ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಫಿನಿಷಿಂಗ್ ಸ್ಟೈಲ್ ನೆನಪಿಸುವಂತಿತ್ತು.
15 ಎಸೆತಗಳಲ್ಲಿ 33 ರನ್ ಸಿಡಿಸಿದ ಶಾರೂಕ್ ಖಾನ್ ಕೊನೆಯ ಎಸೆತವನ್ನ ಸಿಕ್ಸರ್ಗೆ ಅಟ್ಟುವ ಮೂಲಕ ತಂಡಕ್ಕೆ ಗೆಲುವನ್ನ ತಂದುಕೊಟ್ರು. ಅಂತಿಮ ಓವರ್ನಲ್ಲಿ 16 ರನ್ ತಲುಪುವಲ್ಲಿ ತಮಿಳುನಾಡು ಯಶಸ್ವಿಯಾಯಿತು. ಅದ್ರಲ್ಲೂ ಕೊನೆಯ ಎಸೆತದಲ್ಲಿ 5ರನ್ಗಳ ಒತ್ತಡವನ್ನ ಮೆಟ್ಟಿ ನಿಂತು ಶಾರೂಕ್ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ರು. ಜೊತೆಗೆ ತಮಿಳುನಾಡು ಮೂರನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯನ್ನ ಮುಡಿಗೇರಿಸಿಕೊಂಡಿತು.
ಶಾರುಖ್ ಕ್ರೀಸ್ಗೆ ಬಂದಾಗ, 152 ರನ್ಗಳ ಗುರಿಯನ್ನು ಬೆನ್ನಟ್ಟಿದ ತಮಿಳುನಾಡು ಗುರಿ ತಲುಪುವುದು ತುಂಬಾ ಕಷ್ಟಸಾಧ್ಯವಾಗಿತ್ತು. ಆದ್ರೆ ಶಾರುಖ್ ಧೋನಿಯವರ ಸಲಹೆಯನ್ನು ನೆನಪಿಸಿಕೊಂಡರು ಮತ್ತು ಅದನ್ನು ಕ್ರೀಸ್ನಲ್ಲಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದ್ರು.
"ನಾನು ಬ್ಯಾಟಿಂಗ್ಗೆ ಹೊರಟಾಗ ನಮಗೆ ಸುಮಾರು 50 ರಿಂದ 55 ರನ್ಗಳು ಬೇಕಾಗಿತ್ತು. ನಾನು ಕೇವಲ ಒಂದೆರಡು ಚೆಂಡುಗಳನ್ನ ಡಿಫೆಂಡ್ ಮಾಡಲು ಬಯಸುತ್ತೇನೆ. ವೇಗದ ಬೌಲರ್ಗಳಿಗೆ ಕೆಲವು ಓವರ್ಗಳು ಉಳಿದಿವೆ ಎಂದು ನನಗೆ ತಿಳಿದಿತ್ತು. ಲೆಕ್ಕಾಚಾರವು ಸ್ವಲ್ಪಮಟ್ಟಿಗೆ ಕೈ ಮೀರಿದೆ ಎಂದು ನನಗೆ ತಿಳಿದಿತ್ತು. ಏನೇ ಬ್ಯಾಟಿಂಗ್ ಮಾಡಿದರೂ ನಾವು ಅದನ್ನು ಸಾಧ್ಯವಾದಷ್ಟು ಆಳವಾಗಿ ತೆಗೆದುಕೊಳ್ಳುತ್ತೇವೆ ಎಂದು ನಾನು ಹೇಳಿದ್ದೇನೆ ಎಂದು ಶಾರುಖ್ ಖಾನ್ ಸ್ಫೋರ್ಟ್ಸ್ ಕ್ರೀಡಾಗೆ ತಿಳಿಸಿದ್ದಾರೆ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ರೀತಿಯ ಸಂದರ್ಭದಲ್ಲಿ ಸುಲಭವಾಗಿ ಎದುರಾಳಿ ಬೌಲರ್ಗಳನ್ನ ಮಣಿಸಿ ಟೀಂ ಇಂಡಿಯಾಗೆ ಗೆಲುವು ತಂದುಕೊಟ್ಟಿದ್ದಾರೆ. ಅದೇ ಆಲೋಚನೆಗಳನ್ನು ಕಾರ್ಯಗತಗೊಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶಾರೂಖ್ 15 ಎಸೆತಗಳಲ್ಲಿ 33 ರನ್ ಗಳಿಸಿ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
'' ಎಂ.ಎಸ್ ಧೋನಿ ನನ್ನನ್ನು ನಾನು ಮೊದಲು ನಂಬುವಂತೆ ಹೇಳಿದ್ದರು. ನಾನು ಏನು ಮಾಡಿದರೂ ಅದು ಸರಿ ಎಂದು ಅವರು ನನಗೆ ಹೇಳಿದರು, ಏಕೆಂದರೆ ಯಾವುದು ಸರಿ ಎಂದು ನನಗೆ ಮಾತ್ರ ತಿಳಿದಿದೆ. ಮತ್ತು ನನ್ನ ರೀತಿಯಲ್ಲಿ ಆಟ ಆಡುವಾಗ ಏನಾದರೂ ತಪ್ಪು ಸಂಭವಿಸಿದರೆ, ಹಾಗೆಯೇ ಆಗಲಿ'' ಎಂದು ಶಾರುಖ್ ಬಹಿರಂಗಪಡಿಸಿದ್ದಾರೆ.
ಅಂತಿಮ ಕ್ಷಣದಲ್ಲಿ ಶಾರೂಕ್ ಖಾನ್ ಸಿಂಗಲ್ ತೆಗೆದುಕೊಳ್ಳುವ ಸಂದರ್ಭ ಎದುರಾದಾಗ ನಿರಾಕರಿಸಿದರು. ಗೆಲ್ಲಲು 5 ರನ್ಗಳ ಅಗತ್ಯವಿದ್ದಾಗ ಪಂದ್ಯದ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡಿಗೆ ಪ್ರಶಸ್ತಿಯನ್ನು ಮುಡಿಗೇರಿಸಿದರು.
SMAT 2021 ಫೈನಲ್: ತಮಿಳುನಾಡು ಮುಡಿಗೆ ಟ್ರೋಫಿ, ಕರ್ನಾಟಕಕ್ಕೆ ವಿರೋಚಿತ ಸೋಲು
ಪಂದ್ಯದ ನಂತರದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ತಮಿಳುನಾಡು ಆಟಗಾರ ತಮ್ಮ ಮೇಲೆ ವಿಶ್ವಾಸವಿಟ್ಟ ತಂಡದ ಹಿರಿಯ ಆಟಗಾರರಿಗೆ ಧನ್ಯವಾದ ಅರ್ಪಿಸಿದರು. ಅಂತಿಮ ಎಸೆತದ ಸಿಕ್ಸರ್ಗೆ ಸಂಬಂಧಿಸಿದಂತೆ, ಶಾರೂಖ್ ಅವರು ಈ ಸಾಧನೆಯನ್ನು ದೀರ್ಘಕಾಲದವರೆಗೆ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.
ತಮಿಳುನಾಡು ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಶಾರೂಖ್ ಖಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ್ರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಸೀಸನ್ನಲ್ಲಿ ಶಾರುಖ್ ಅಭಿಮಾನಿಗಳ ಗಮನ ಸೆಳೆದಿದ್ದರು, ಪಂದ್ಯಾವಳಿಯ ಅವಧಿಯಲ್ಲಿ ಪಂಜಾಬ್ ಕಿಂಗ್ಸ್ಗಾಗಿ ಕೆಲವು ಉತ್ತಮ ಪ್ರದರ್ಶನ ತೋರಿದ್ದಾರೆ. ಒಂದು ವೇಳೆ ಇವರನ್ನ ರೀಟೇನ್ ಮಾಡಿಕೊಳ್ಳದೆ ಪಂಜಾಬ್ ಹರಾಜಿಗೆ ಬಿಟ್ಟರೆ, ಭಾರೀ ಬೆಲೆಗೆ ಬಿಡ್ ಆಗಲಿದ್ದಾರೆ.