ಬೆಂಗಳೂರು, ಆಗಸ್ಟ್ 24: ಅದು 2013-14ರ ರಣಜಿ ಆವೃತ್ತಿ. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ರಣಜಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿತ್ತು. ವಿನಯ್ ಕುಮಾರ್ ನೇತೃತ್ವದ ತಂಡದಲ್ಲಿ ಎಸ್ ಅರವಿಂದ್, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಅವರಂತಾ ಪ್ರತಿಭಾವಂತ ವೇಗಿಗಳು ತುಂಬಿದ್ದರು. ಇದೇ ತಂಡದಲ್ಲಿದ್ದ ಮತ್ತೋರ್ವ ಯುವ ಪ್ರತಿಭೆಯೇ ಹೆಚ್ಎಸ್ ಶರತ್. ಇಂಥಾ ಖ್ಯಾತ ಆಟಗಾರರ ಮಧ್ಯೆಯೂ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಶರತ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಅದರಲ್ಲೂ ಆ ಆವೃತ್ತಿಯ ಲೀಗ್ ಪಂದ್ಯದಲ್ಲಿ ಶರತ್ ಬಲಿಷ್ಠ ಮುಂಬೈ ತಂಡದ ವಿರುದ್ಧ 89 ರನ್ಗಳನ್ನು ನೀಡಿ 6 ವಿಕೆಟ್ ಕಬಳಿಸುವ ಮೂಲಕ ಅಮೋಘ ಗೆಲುವಿಗೆ ಕಾರಣವಾಗಿದ್ದರು.
2013-14ರ ಆವೃತ್ತಿಯ ರಣಜಿ ಟೂರ್ನಿಯಲ್ಲಿ ಕರ್ನಾಟಕ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಹೆಚ್ಎಸ್ ಶರತ್ ನೀಡಿದ ಕೊಡುಗೆಯೂ ಬಹಳ ಮುಖ್ಯ ಪಾತ್ರವಹಿಸಿತ್ತು. ಈ ಆವೃತ್ತಿಯಲ್ಲಿ ಆಡಿದ 7 ಆವೃತ್ತಿಯಲ್ಲಿ ಶರತ್ ಬರೊಬ್ಬರಿ 31 ವಿಕೆಟ್ಗಳನ್ನು ಪಡೆದಿದ್ದರು. ಈ ಮೂಲಕ ತನ್ನ ಸಾಮರ್ಥ್ಯವನ್ನು ಜಗಜ್ಜಾಹೀರುಗೊಳಿಸಿದ್ದರು. ಹೆಚ್ಎಸ್ ಶರತ್ ಅವರ ಈ ಪ್ರದರ್ಶನ ಮುಂದಿನ ಆವೃತ್ತಿಯಲ್ಲೂ ಮುಂದುವರಿದಿತ್ತು. ಹೀಗಾಗಿ ಸಹಜವಾಗಿಯೇ ಶರತ್ ಮೇಲೆ ಕನ್ನಡಿಗ ಕ್ರಿಕೆಟ್ ಅಭಿಮಾನಿಗಳ ಭರವಸೆ ಹೆಚ್ಚಿತ್ತು. ಶರತ್ ಕೂಡ ಟೀಮ್ ಇಂಡಿಯಾಗೆ ಆಡುವ ಕನಸು ಹೊತ್ತು ತಮ್ಮ ಪರಿಶ್ರಮವನ್ನು ಮುಂದುವರಿಸಿದ್ದರು.
ಆದರೆ ಉತ್ತಮ ಪ್ರದರ್ಶನ ನೀಡುತ್ತಾ ಭರವಸೆ ಹೆಚ್ಚಿಸುತ್ತಿದ್ದ ಈ ಆಟಗಾರನಿಗೆ 2015-16ನೇ ರಣಜಿ ಆವೃತ್ತಿಯ ಬಳಿಕ ಅವಕಾಶಗಳೇ ದೊರೆಯಲಿಲ್ಲ. 2015-16ರ ಆವೃತ್ತಿಯಲ್ಲಿ ಮುಂಬೈ ವಿರುದ್ಧ ಆಡಿದ ಪಂದ್ಯದ ಬಳಿಕ ಕರ್ನಾಟಕ ತಂಡದಿಂದ ಹೊರಬಿದ್ದರು. ನಂತರ ಶರತ್ ಹೆಚ್ಎಸ್ಗೆ ಕನಿಷ್ಠ ಒಂದು ಅವಕಾಶವೂ ದೊರೆಯದಿರುವುದು ಮಾತ್ರ ಬೇಸರದ ಸಂಗತಿ. ಆದರೆ ಶರತ್ ತನ್ನ ತಾಳ್ಮೆಯನ್ನು ಕಳೆದುಕೊಳ್ಳಲೇ ಇಲ್ಲ. ಸತತ ಪ್ರಯತ್ನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಬಾರಿಯ ಕೆಎಸ್ಸಿಎಯ ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್ ಗ್ರೂಫ್ 1 ಡಿವಿಶನ್ 1 ಲೀಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ ಹೆಚ್ಎಸ್ ಶರತ್. ಇದರಲ್ಲಿ ರಾಜಾಜಿನಗರ್ ಕ್ರಿಕೆಟರ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಿದ್ದು ತಂಡದ ಈ ಪ್ರದರ್ಶನಕ್ಕೆ ಶರತ್ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯುವ ಹೊಸ್ತಿಲಲ್ಲಿದ್ದಾರೆ.
ರಣಜಿ ಟೂರ್ನಿಯ ಆಯ್ಕೆಗೆ ಮಾನದಂಡವೆಂದೇ ಗುರುತಿಸುವ ಸರ್ ಮಿರ್ಜಾ ಇಸ್ಮಾಯಿಲ್ ಶೀಲ್ಡ್ ಗ್ರೂಫ್ 1 ಡಿವಿಶನ್ 1 ಲೀಗ್ನಲ್ಲಿ ಶರತ್ ಈ ಬಾರಿ ಆಡಿದ 10 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮೂರನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ ಶರತ್. ಹೀಗಾಗಿ ಈ ಬಾರಿ ಕರ್ನಾಟಕ ರಣಜಿ ತಂಡದ ಆಯ್ಕೆದಾರರು ನನ್ನ ಪ್ರದರ್ಶನವನ್ನು ಖಂಡಿತಾ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಹೆಚ್ಎಸ್ ಶರತ್.
ಮಂಡ್ಯದ ಗ್ರಾಮೀಣ ಭಾಗದಿಂದ ಬಂದ ಶರತ್ ಅಕ್ಷರಶಃ ತಮ್ಮ ಸ್ವಂತ ಸಾಮರ್ಥ್ಯದ ಮೂಲಕ ಕ್ರಿಕೆಟ್ನಲ್ಲಿ ಅವಕಾಶ ಸೃಷ್ಟಿಸುತ್ತಾ ಬೆಳೆದಿದ್ದಾರೆ. ಆದರೆ ದೊಡ್ಡ ಕನಸು ಹೊತ್ತ ಈ ಪ್ರತಿಭೆಗೆ ಬೆಂಬಲದ ಅಗತ್ಯವೂ ಇದೆ. "ಪ್ರತಿ ವರ್ಷವೂ ನನ್ನ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಲೇ ಬಂದಿದ್ದೇನೆ. ಈ ಬಾರಿಯೂ ಅದೇ ರೀತಿಯ ಆಟವನ್ನು ಆಡಿದ್ದೇನೆ. ಅವಕಾಶ ದೊರೆಯದಿದ್ದರೂ ನನ್ನ ಪ್ರಯತ್ನದಲ್ಲಿ ಹಿಂದಕ್ಕೆ ಸರಿಯುವ ಮನಸ್ಸು ಮಾಡಿಲ್ಲ. ಈ ಬಾರಿ ಫಿಟ್ನೆಸ್ ಬಗ್ಗೆಯೂ ಹೆಚ್ಚಿನ ಗಮನ ಹರಿಸಿದ್ದೆ. ಇದು ನನ್ನ ಪ್ರದರ್ಶನಕ್ಕೆ ಮತ್ತಷ್ಟು ಸಹಕಾರಿಯಾಗಿದೆ. ಹೀಗಾಗಿ ರಣಜಿ ತಂಡದಲ್ಲಿ ಸ್ಥಾನವನ್ನು ಪಡೆಯುವ ನಿರೀಕ್ಷೆಯಲ್ಲಿದ್ದೇನೆ" ಎಂದು 'ಮೈಖೇಲ್ ಕನ್ನಡ' ಜೊತೆಗೆ ಮಾತನಾಡಿದ ಹೆಚ್ಎಸ್ ಶರತ್ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.