10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6ರಲ್ಲಿ ಜಯ ಕಂಡಿತ್ತು
ಲಾಲ್ ಚಂದ್ ಕೋಚ್ ಆಗಿದ್ದ ವೇಳೆ ಅಫ್ಘಾನಿಸ್ತಾನ ತಂಡ ಸೀಮಿತ ಓವರ್ಗಳ 10 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6ರಲ್ಲಿ ಜಯ ಕಂಡಿತ್ತು. ಅಷ್ಟೇ ಅಲ್ಲ, ಟೆಸ್ಟ್ ಕ್ರಿಕೆಟ್ನಲ್ಲೂ ಅಫ್ಘಾನ್ ತನ್ನ ಸ್ಟೇಟಸ್ ಗಳಿಸಿಕೊಳ್ಳತೊಡಗಿತ್ತು. ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಲಾಲ್ಚಂದ್ ಅವರನ್ನು ಕಾಬೂಲ್ನಲ್ಲೇ ನೆಲೆಸುವಂತೆ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ (ಎಸಿಬಿ) ಕೇಳಿಕೊಂಡಿತ್ತು. ಇದರ ಬೆನ್ನಲ್ಲೇ ರಜಪೂತ್ ತನ್ನ ಸ್ಥಾನದಿಂದ ಕೆಳಗಿಳಿದಿದ್ದರು. ಕಳೆದ ಮೂರು ವರ್ಷಗಳಿಂದ ರಜಪೂತ್ ಅವರು ಜಿಂಬಾಬ್ವೆ ರಾಷ್ಟ್ರೀಯ ತಂಡಕ್ಕೆ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಫ್ಘಾನಿಗರಿಗೆ ಕ್ರಿಕೆಟ್ ಹೆಚ್ಚು ಖುಷಿ ನೀಡುತ್ತಿದೆ
"ಏನೆಲ್ಲಾ ನಡೆದಿದೆಯೇ ಅದೆಲ್ಲಾ ಒಳ್ಳೆಯದಕ್ಕೇ ಆಗಿದೆ ಅಂದುಕೊಳ್ಳುತ್ತೇನೆ. ನಾನು ಅಫ್ಘಾನಿಸ್ತಾನದಿಂದ ಈಚೆ ಬಂದುಬಿಟ್ಟೆ. ಅಫ್ಘಾನಿಸ್ತಾನ ತಂಡದ ಜೊತೆಗೆ ಕೆಲಸ ನಿಲ್ಲಿಸಿದಾಗಿನಿಂದ ನಾನು ಜಿಂಬಾಬ್ವೆ ಕ್ರಿಕೆಟ್ ಜೊತೆಗಿದ್ದೇನೆ ಅನ್ನೋದಕ್ಕೆ ಖುಷಿಯಾಗುತ್ತದೆ. ನನಗೆ ಭರಸೆಯಿದೆ, ತಾಲಿಬಾನ್ಗಳು ಕ್ರಿಕೆಟ್ಗೆ ಬೆಂಬಲಿಸುತ್ತಾರೆ. ತಾಲಿಬಾನ್ಗಳಿಂದ ಕ್ರಿಕೆಟ್ಗೆ ಏನೂ ತೊಂದರೆಯಾಗೋಲ್ಲ. ಯಾಕೆಂದರೆ ಕ್ರಿಕೆಟ್ ಅಫ್ಘಾನಿಸ್ತಾನದ ದೊಡ್ಡ ಕ್ರೀಡೆಯಾಗಿದೆ. ಕ್ರಿಕೆಟ್ ಆಟ ಅಫ್ಘಾನಿಸ್ತಾನ ಜನರ ಬದುಕಿಗೆ ಬಹಳ ಸಂತೋಷ ನೀಡುತ್ತಿದೆ. ಅಲ್ಲಿನ ಬಹಳಷ್ಟು ಆಟಗಾರರ ಜೊತೆ ನಾನು ಸಂಪರ್ಕದಲ್ಲಿದ್ದೇನೆ. ಇವತ್ತೂ ಕೂಡ ನಾನು ಅವರ ಜೊತೆ ಮಾತನಾಡಿದ್ದೇನೆ. ಕ್ರಿಕೆಟ್ಗೆ ಏನೂ ತೊಂದರೆಯಾಗೋಲ್ಲ ಎಂಬ ಬಗ್ಗೆ ಅವರಿಗೂ ಭರವಸೆಯಿದೆ," ಎಂದು ಲಾಲ್ಚಂದ್ ಹೇಳಿದ್ದಾರೆ. ರಜಪೂತ್ ಮೂಲತಃ ಮುಂಬೈಯವರು.
ಹಮಿದ್ ಶಿನ್ವಾರಿ ಕೂಡ ಇದೇ ಮಾತು
ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ನ (ಎಸಿಬಿ) ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಮಿದ್ ಶಿನ್ವಾರಿ ಕೂಡ ಇದೇ ಮಾತು ಹೇಳಿದ್ದರು. ತಾಲಿಬಾನ್ಗಳಿಂದ ಅಫ್ಘಾನಿಸ್ತಾನದಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದರೂ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರಿಗೆ ಮತ್ತು ಅವರ ಕುಟುಂಬಸ್ಥರಿಗೆ ತೊಂದರೆಯೇನಿಲ್ಲ. ಅವರೆಲ್ಲ ಸುರಕ್ಷಿತವಾಗಿದ್ದಾರೆ. ತಾಲಿಬಾನ್ಗಳು ಕ್ರಿಕೆಟ್ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಿಗೆ ಅಡ್ಡಿಪಡಿಸಲಾರರು ಎಂದು ಹಮಿದ್ ಶಿನ್ವಾರಿ ವಿಶ್ವಾಸ ವ್ಯಕ್ತಪಡಿಸಿದ್ದರು. 'ತಾಲಿಬಾನ್ಗಳೂ ಕೂಡ ಕ್ರಿಕೆಟ್ ಪ್ರೀತಿಸುತ್ತಾರೆ. ಆರಂಭದಿಂದಲೂ ಅವರು ಕ್ರಿಕೆಟ್ಗೆ ಬೆಂಬಲಿಸುತ್ತಿದ್ದಾರೆ. ಅವರು ಯಾವತ್ತಿಗೂ ಕ್ರಿಕೆಟ್ ಸಂಬಂಧಿ ಚಟುವಟಿಕೆಗಳಲ್ಲಿ ಮಧ್ಯಪ್ರವೇಶಿಸುವುದಿಲ್ಲ," ಎಂದು ಸೋಮವಾರವಷ್ಟೇ ಶಿನ್ವಾರಿ ಹೇಳಿಕೆ ನೀಡಿದ್ದರು.