ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ಒಡಿಐ ಪಂದ್ಯವನ್ನಾಡಿದ ಭಾರತದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ಗೆ ಒಂದೇ ಒಂದು ಓವರ್ ಬೌಲಿಂಗ್ ಕೊಡದೇ ಇರುವುದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆ.ಎಲ್ ರಾಹುಲ್ ನಾಯಕತ್ವದಲ್ಲಿ ಮೊದಲ ಬಾರಿಗೆ ಮುನ್ನಡೆಯುತ್ತಿರುವ ಭಾರತ ತಂಡದಲ್ಲಿ ಯುವ ಆಲ್ರೌಂಡರ್ ಸಾಮರ್ಥ್ಯವನ್ನ ಸರಿಯಾಗಿ ಬಳಸಿಕೊಳ್ಳದೇ ಇರುವುದಕ್ಕೆ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಆಕಾಶ್ ಚೋಪ್ರಾ ಕಿಡಿಕಾರಿದ್ದಾರೆ.
ನಾನೀಗ ನಾಯಕನಲ್ಲ, ಯಾರಿಗೂ ಹೆದರುವುದೂ ಇಲ್ಲ: ಆ ಆಟಗಾರನ ವಿರುದ್ಧ ಮೈದಾನದಲ್ಲೇ ಕೊಹ್ಲಿ ಕಿಡಿ!
ವೆಂಕಟೇಶ್ ಅಯ್ಯರ್ನನ್ನ ಓರ್ವ ಆಲ್ರೌಂಡರ್ ಆಗಿ ತಂಡ ನೋಡುವಂತೆ ಕಾಣುತ್ತಿಲ್ಲ. ಬದಲಾಗಿ ಆತನನ್ನ ಕೇವಲ ಬ್ಯಾಟ್ಸ್ಮನ್ ಆಗಿ ಟೀಮ್ ನೋಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್ನಲ್ಲಿ ಕೆಕೆಆರ್ ಪರ ಆಡುವ ವೆಂಕಟೇಶ್ ಅಯ್ಯರ್ ತಮ್ಮ ಆಲ್ರೌಂಡ್ ಸಾಮರ್ಥ್ಯದ ಮೂಲಕ ಮಿಂಚಿದ್ದಾರೆ.
"ನೀವು ಅವರಿಗೆ 5-6 ಓವರ್ಗಳನ್ನು ನೀಡಬಹುದಿತ್ತು ಮತ್ತು ಅವರು ಹೇಗೆ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದನ್ನು ನೋಡಬಹುದು. ಏಕೆಂದರೆ ನೀವು ಅವರನ್ನು ಆಲ್ರೌಂಡರ್ ಆಗಿ ನೋಡುತ್ತಿದ್ದೀರಿ" ಎಂದು ಗಂಭೀರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಚೋಪ್ರಾ, "ನನಗೆ ಗೊತ್ತಿಲ್ಲ, ನೀವು ಮತ್ತು ನಾನು ಮಾತ್ರ ಅವನನ್ನು ಆಲ್ರೌಂಡರ್ನಂತೆ ನೋಡುತ್ತಿರುವಂತೆ ತೋರುತ್ತಿದೆ" ಎಂದು ಹೇಳಿದರು.
ವೆಂಕಟೇಶ್ ಅಯ್ಯರ್ ಕಳೆದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಚುಟುಕು ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ರು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆದ ಆ ಪಂದ್ಯಗಳಲ್ಲೂ ಕೂಡ ವೆಂಕಟೇಶ್ ಅಯ್ಯರ್ಗೆ ಬೌಲಿಂಗ್ ನೀಡಲಿಲ್ಲ.
''ಏಕೆಂದರೆ (ನ್ಯೂಜಿಲೆಂಡ್ ವಿರುದ್ಧ) ಟಿ20 ಪಂದ್ಯಗಳು ಇದ್ದಾಗ, ರೋಹಿತ್ ಶರ್ಮಾ ನಾಯಕರಾಗಿದ್ದರು. ಇದು ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯಾಗಿತ್ತು ಮತ್ತು ಮೊದಲ ಎರಡು ಪಂದ್ಯಗಳಲ್ಲಿ ಕೂಡ ಆತನಿಗೆ ಚೆಂಡನ್ನು ನೀಡಲಿಲ್ಲ'' ಎಂದು ಚೋಪ್ರಾ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತು. ಅದ್ರಲ್ಲೂ ದಕ್ಷಿಣ ಆಫ್ರಿಕಾ ಪರ ಟೆಂಬಾ ಬವುಮಾ ಮತ್ತು ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ನಾಲ್ಕನೇ ವಿಕೆಟ್ಗೆ ದ್ವಿಶಕದ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು. ಈ ಹಂತದಲ್ಲೂ ವೆಂಕಟೇಶ್ ಅಯ್ಯರ್ಗೆ ಬೌಲಿಂಗ್ ಕೊಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.