ಮೊಹಮ್ಮದ್ ಇರ್ಫಾನ್ ಹೇಳಿಕೆ
2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ನ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಗಂಭೀರ್ 97 ರನ್ ಕೊಡುಗೆಯಿಂದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಆದರೆ ಶ್ರೇಷ್ಠ ಕ್ರಿಕೆಟಿಗ ಗಂಭೀರ್ ವೃತ್ತಿ ಬದುಕು ಕೊನೆಗೊಳ್ಳಲು ತಾನು ಕಾರಣ ಎಂದು ಪಾಕಿಸ್ತಾನ ವೇಗಿ ಮುಹಮ್ಮದ್ ಇರ್ಫಾನ್ ಹೇಳಿಕೊಂಡಿದ್ದಾರೆ.
4 ಬಾರಿ ಗಂಭೀರ್ ಔಟ್
ಸಂದರ್ಶನವೊಂದರಲ್ಲಿ ಮಾತನಾಡಿದ ಇರ್ಫಾನ್, 2012ರ ದ್ವಿಪಕ್ಷೀಯ ಸರಣಿಯಲ್ಲಿ ತನ್ನ ಬೌಲಿಂಗ್ಗೆ ಗಂಭೀರ್ ಅವರಿಗೆ ಆಡಲಾಗುತ್ತಿರಲಿಲ್ಲ. ಹೀಗಾಗಿಯೇ ಗಂಭೀರ್ ನಿಯಮಿತ ಓವರ್ಗಳ ಕ್ರಿಕೆಟ್ ಬದುಕನ್ನು ನಿಲ್ಲಿಸಿದರು ಎಂದಿದ್ದಾರೆ. 7 ಅಡಿ 1 ಇಂಚು ಎತ್ತರವಿದ್ದ ಇರ್ಫಾನ್, ಆ ದ್ವಿಪಕ್ಷೀಯ ಸರಣಿಯಲ್ಲಿ (ಟಿ20 ಮತ್ತು ಏಕದಿನ) 4 ಬಾರಿ ಗಂಭೀರ್ ಅವರನ್ನು ಔಟ್ ಮಾಡಿದ್ದರು.
ಬ್ಯಾಟಿಂಗ್ ಮಾಡಲಾಗುತ್ತಿರಲಿಲ್ಲ
'ನಾನು ಭಾರತದ ವಿರುದ್ಧ ಆಡುವಾಗ ಅವರಿಗೆ ನನ್ನೆದುರು ಸರಿಯಾಗಿ ಬ್ಯಾಟಿಂಗ್ ಮಾಡಲಾಗುತ್ತಿರಲಿಲ್ಲ. ನಾನು ಎತ್ತರವಾಗಿದ್ದರಿಂದ ನನ್ನ ಎಸೆತವನ್ನು ಅಂದಾಜಿಲಾಗುತ್ತಿಲ್ಲ, ನನ್ನ ಎಸೆತದ ವೇಗವನ್ನು ಗುರುತಿಸಲಾಗುತ್ತಿಲ್ಲ ಎಂದು 2012ರ ಸರಣಿ ವೇಳೆ ಭಾರತದ ಕೆಲ ಆಟಗಾರರು ನನ್ನಲ್ಲಿ ಹೇಳಿಕೊಂಡಿದ್ದರು,' ಎಂದು ಸಮಾ ಚಾನೆಲ್ ಜೊತೆ ಮಾತನಾಡುತ್ತ ಇರ್ಫಾನ್ ಹೇಳಿದ್ದಾರೆ.
ಆತ ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದ
'ಪಂದ್ಯ ಅಥವಾ ಅಭ್ಯಾಸದ ವೇಳೆ ಆತ (ಗಂಭೀರ್) ನನ್ನನ್ನು ಎದುರುಗೊಳ್ಳಲು ಇಷ್ಟಪಡುತ್ತಿರಲಿಲ್ಲ. ಮುಖ ಮುಖ ನೋಡಿ ಮಾತನಾಡಲೂ ಆತ ತಪ್ಪಿಸಿಕೊಳ್ಳುತ್ತಿದ್ದ. 2012ರ ನಿಯಮಿತ ಓವರ್ಗಳ ಸರಣಿಯಲ್ಲಿ ನಾನು ಗಂಭೀರ್ನನ್ನು 4 ಬಾರಿ ಔಟ್ ಮಾಡಿದ್ದನ್ನು ನೆನಪಿಸಿಕೊಳ್ಳಬಲ್ಲೆ,' ಎಂದು ಮುಹಮ್ಮದ್ ವಿವರಿಸಿದ್ದಾರೆ. ಗಂಭೀರ್ ಅದೇ ಸರಣಿಯಲ್ಲಿ ಪಾಕ್ ವಿರುದ್ಧ ಕೊನೇ ಟಿ20 ಪಂದ್ಯವನ್ನಾಡಿದ್ದರು.