ಜಾನಿ ಬೇರ್ಸ್ಟೋ ವಿಕೆಟ್ ಪಡೆದು ವಿಭಿನ್ನವಾಗಿ ಸಂಭ್ರಮಿಸಿದ್ಧ ಮೊಹಮ್ಮದ್ ಸಿರಾಜ್
ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡ ಮೊಹಮ್ಮದ್ ಸಿರಾಜ್ 3 ವಿಕೆಟ್ಗಳನ್ನು ಪಡೆದರು. ಮೊದಲನೇ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆದಿದ್ದ ಮೊಹಮ್ಮದ್ ಸಿರಾಜ್ ಎರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ಗಳನ್ನು ಪಡೆದರು. ರೋರಿ ಬರ್ನ್ ಮತ್ತು ಜಾನಿ ಬೇರ್ಸ್ಟೋ ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ಜಾನಿ ಬೇರ್ಸ್ಟೋ ವಿಕೆಟ್ ಪಡೆದ ಸಂದರ್ಭದಲ್ಲಿ 'ಶ್...' ಎಂದು ಬೇರ್ಸ್ಟೋ ಮುಂದೆ ಹೋಗಿ ಸಂಭ್ರಮಾಚರಣೆಯನ್ನು ಮಾಡಿದ್ದರು.
ಮೊಹಮ್ಮದ್ ಸಿರಾಜ್ ಸಂಭ್ರಮಿಸಿದ್ದು ಅನಗತ್ಯ
ಮೊಹಮ್ಮದ್ ಸಿರಾಜ್ ಮಾಡಿದ ಈ ಸಂಭ್ರಮಾಚರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದೀಗ ಸಿರಾಜ್ ಮಾಡಿದ ಈ ಸಂಭ್ರಮಾಚರಣೆಯ ಕುರಿತು ಮಾತನಾಡಿರುವ ದಿನೇಶ್ ಕಾರ್ತಿಕ್ ಸಿರಾಜ್ ಮಾಡಿದ ಸಂಭ್ರಮಾಚರಣೆ ಅನಗತ್ಯವಾದದ್ದು ಎಂದು ಟೀಕಿಸಿದ್ದಾರೆ. 'ಜಾನಿ ಬೇರ್ಸ್ಟೋ ವಿಕೆಟ್ ಪಡೆದ ನಂತರ ಮೊಹಮ್ಮದ್ ಸಿರಾಜ್ ಮಾಡಿದ ಸಂಭ್ರಮಾಚರಣೆ ಅನಗತ್ಯವಾದದ್ದು, ವಿಕೆಟ್ ತೆಗೆದ ಕೂಡಲೇ ಬ್ಯಾಟ್ಸ್ಮನ್ ವಿರುದ್ಧ ಆ ಬೌಲರ್ ಗೆದ್ದಂತೆ ಹೀಗಾಗಿ ವಿಕೆಟ್ ತೆಗೆದ ನಂತರವೂ ಅನಗತ್ಯವಾಗಿ ಸಂಭ್ರಮಿಸುವುದು ಸರಿಯಲ್ಲ' ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಈಗಿನ ಟೀಮ್ ಇಂಡಿಯಾ ಆಟಗಾರರು ಎದುರಾಳಿಗಳಿಗೆ ಹೆದರುವುದಿಲ್ಲ
ಇನ್ನೂ ಮುಂದುವರೆದು ಮಾತನಾಡಿರುವ ದಿನೇಶ್ ಕಾರ್ತಿಕ್ ಈಗಿನ ಟೀಮ್ ಇಂಡಿಯಾದ ಆಟಗಾರರು ಎದುರಾಳಿ ಕ್ರಿಕೆಟಿಗರಿಗೆ ಹೆದರುವುದಿಲ್ಲ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಟೀಮ್ ಇಂಡಿಯಾದ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ಮೊಹಮ್ಮದ್ ಸಿರಾಜ್ ಮೈದಾನದಲ್ಲಿ ಕೋಪಗೊಂಡ ನಿದರ್ಶನಗಳು ಮುಂದಿವೆ. ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ತಮ್ಮ ಕೋಪವನ್ನು ಎದುರಾಳಿಗಳ ಮುಂದೆ ಹೊರಹಾಕುವುದಿಲ್ಲ, ಆದರೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಮತ್ತು ಕೆಎಲ್ ರಾಹುಲ್ ಎದುರಾಳಿಗಳ ಮುಂದೆಯೇ ತಮ್ಮ ಕೋಪವನ್ನು ಹೊರಹಾಕಿದ್ದಾರೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಹಾಗಂತ ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ಕೋಪ ಬರುವುದಿಲ್ಲ ಎಂದಲ್ಲ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.