ಈ ಬಾರಿಯ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳಿದ್ದಾಗ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ ಐಪಿಎಲ್ನಿಂದ ಹೊರಗುಳಿದಿದ್ದರು. ಬಳಿಕ ಶ್ರೇಯಸ್ ಐಯ್ಯರ್ ಬದಲಿಗೆ ರಿಷಭ್ ಪಂತ್ಗೆ ಡೆಲ್ಲಿ ನಾಯಕತ್ವದ ಜವಾಬ್ಧಾರಿಯನ್ನು ನೀಡಲಾಗಿತ್ತು. ಆದರೆ ಕೊರೊನಾವೈರಸ್ನ ಕಾರಣದಿಂದಾಗಿ ಐಪಿಎಲ್ ಅರ್ಧಕ್ಕೆ ಸ್ಥಗಿತವಾಗಿದ್ದು ಮತ್ತೆ ಟೂರ್ನಿಯ ಆರಂಭಕ್ಕೆ ಸಿದ್ಧತೆಗಳು ನಡೆಯುತ್ತಿದೆ.
ಈ ಮಧ್ಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಶ್ರೇಯಸ್ ಐಯ್ಯರ್ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಅವರು ಐಪಿಎಲ್ನ ಮುಂದಿನ ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ. ಈ ಬಗ್ಗೆ ಸ್ವತಃ ಶ್ರೇಯಸ್ ಐಯ್ಯರ್ ಪ್ರತಿಕ್ರಿಯೆ ನೀಡಿದ್ದಾರೆ. ತಂಡದಲ್ಲಿ ತಾನು ಆಡುವುದನ್ನು ಖಚಿತಪಡಿಸಿರುವ ಶ್ರೇಯಸ್ ನಾಯಕತ್ವದ ಬಗ್ಗೆ ತನಗೆ ತಿಳಿದಿಲ್ಲ ಎಂದಿದ್ದಾರೆ.
ದ್ವಿತೀಯ ದರ್ಜೆಯ ತಂಡ ಎಂದ ಅರ್ಜುನ್ ರಣತುಂಗಾಗೆ ಆಕಾಶ್ ಚೋಪ್ರ ತಿರುಗೇಟು
"ನನ್ನ ಭುಜದ ನೋವು ಶಮನವಾಗಿದೆ. ಈಗ ನಾನು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಂತಿಮ ಹಂತದ ಪ್ರಯತ್ನಗಳನ್ನು ನಡೆಸುತ್ತಿದ್ದೇನೆ. ಇದು ಒಂದು ತಿಂಗಳುಗಳ ಕಾಲ ನಡೆಯಲಿದೆ. ಇದೇ ಸಂದರ್ಭದಲ್ಲಿ ತರಬೇತಿಯೂ ನಡೆಯುತ್ತಿದೆ. ಐಪಿಎಲ್ನ ಉಳಿದ ಪಂದ್ಯಗಳಿಗೆ ನಾನು ಲಭ್ಯವಾಗಲಿದ್ದೇನೆ" ಎಂದು ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
"ಆದರೆ ನನಗೆ ನಾಯಕತ್ವದ ಬಗ್ಗೆ ಮಾಹಿತಿಗಳು ಇಲ್ಲ. ಅದು ಮಾಲೀಕರಿಗೆ ಬಿಟ್ಟಿರುವ ವಿಚಾರ. ಆದರೆ ತಂಡ ಈಗಾಗಲೇ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ನಾನು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದೇವೆ. ನನಗೆ ಅದುವೇ ನಿಜಕ್ಕೂ ದೊಡ್ಡ ಸಂಗತಿಯಾಗಿದೆ. ನನ್ನ ಮುಖ್ಯ ಗುರಿ ಐಪಿಎಲ್ ಟ್ರೋಫಿಯನ್ನು ಡೆಲ್ಲಿ ಗೆಲ್ಲುವುದಾಗಿದೆ" ಎಂದು ಶ್ರೇಯಸ್ ಐಯ್ಯರ್ ಹೇಳಿದ್ದಾರೆ.
ಐಪಿಎಲ್ನ ಉಳಿದ ಪಂದ್ಯಗಳನ್ನು ಯುಎಇನಲ್ಲಿ ಆಯೋಜನೆ ಮಾಡಲು ಬಿಸಿಸಿಐ ಯೋಜನೆ ರೂಪಿಸಿದೆ. ಸೆಪ್ಟೆಂಬರ್ 19ರಿಂದ ಆರಂಭವಾಗಿ ಅಕ್ಟೋಬರ್ 15ರವರೆಗೆ ಐಪಿಎಲ್ನ ಉಳಿದ ಪಂದ್ಯಗಳನ್ನು ನಡೆಸಲಾಗುತ್ತದೆ.