ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 4-0 ಅಂತರದ ಹೀನಾಯ ಸೋಲು ಅನುಭವಿಸಿದ ಬಳಿಕ ತಂಡದಲ್ಲಿ ಭಾರೀ ಬದಲಾವಣೆ ಮಾಡಿಕೊಂಡಿದೆ. ತಂಡದ ಕೆಲ ಪ್ರಮುಖ ಆಟಗಾರರನ್ನು ಮುಂದಿನ ವೆಸ್ಟ್ ಇಂಡಿಸ್ ಪ್ರವಾಸದಿಂದ ಹೊರಗಿಟ್ಟು ತಂಡವನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡದ ಅನುಭವಿ ವೇಗಿ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಕೂಡ ಒಬ್ಬರು.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿತಿಂದ ಹೊರಬಿದ್ದಿರುವ ಜೇಮ್ಸ್ ಆಂಡರ್ಸನ್ ತಮ್ಮನ್ನು ತಂಡದಿಂದ ಹೊರಗಿಟ್ಟಿರುವ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅನುಭವಿ ವೇಗಿ ಆಂಡರ್ಸನ್ ಮತ್ತೆ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಇಂಗ್ಲೆಂಡ್ ಮಂಡಳಿ ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ತಮ್ಮನ್ನು ಹೊರಗಿಡುತ್ತಿರುವ ವಿಚವಾರವನ್ನು ತಿಳಿಸಿದ ಸಂದರ್ಭದಲ್ಲಿ ಅನುಭವಿಸಿದ ಹತಾಶೆಯನ್ನು ಕೂಡ ಹೇಳಿಕೊಂಡಿದ್ದಾರೆ.
ಐಪಿಎಲ್ 2022: ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರವಾಗಲಿವೆ ಟೂರ್ನಿಯ ಈ ಪ್ರಮುಖ ಅಂಶಗಳು
ಇನ್ನು ಈ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ಮಂಡಳಿಯ ಮುಂದಿನ ಅಧ್ಯಕ್ಷರು, ಮುಖ್ಯ ಕೋಚ್ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ವಿಸ್ತೃತ ಚರ್ಚೆಯನ್ನು ನಡೆಸಬೇಕು ಎಂದಿದ್ದಾರೆ. ಆಶಸ್ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿದ್ದ ಆಟಗಾರರ ಪೈಕಿ 8 ಮಂದಿ ಆಟಗಾರರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಇದರಲ್ಲಿ ಜೇಮ್ಸ್ ಆಂಡರ್ಸನ್, ಡಾಮ್ ಬಿಸ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಹಸೀಬ್ ಹಮೀದ್ ಮತ್ತು ಡೇವಿಡ್ ಮಲನ್ ಕೂಡ ಸೇರಿಕೊಂಡಿದ್ದಾರೆ.
"ನಾನು ನನ್ನು ಟೆಸ್ಟ್ ವೃತ್ತಿ ಜೀವನ ಇಲ್ಲಿಗೆ ಅಂತ್ಯವಾಗದಿರಲಿ ಎಂದು ಪ್ರಾರ್ಥಿಸುತ್ತೇನೆ. ಮತ್ತೊಮ್ಮೆ ಉತ್ತಮ ಪ್ರದರ್ಶನ ನಿಡಲು ನನಗೆ ಮತ್ತೊಂದು ಅವಕಾಶ ಬೇಕಿದೆ. ನನ್ನಲ್ಲಿ ಇನ್ನು ಕೂಡ ಸಾಕಷ್ಟು ಕ್ರಿಕೆಟ್ ಉಳಿದಿದೆ. ನನ್ನಲ್ಲಿ ಇನ್ನೂ ಕೂಡ ಕ್ರಿಕೆಟ್ನ ಹಸಿವು ಹಾಗೂ ಬದ್ಧತೆಯಿದೆ. ಈ ರೀತಿಯ ಕರೆ ಬಂದಾಗ ನಾನು ನಿಜಕ್ಕು ಕೂಡ ಆಘಾತವಾಗಿದ್ದೆ" ಎಂದು ಜೇಮ್ಸ್ ಆಂಡರ್ಸನ್ ಹೇಳಿಕೊಂಡಿದ್ದಾರೆ.
"ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ನೂತನ ನಿರ್ದೇಶಕರು ಹಾಗೂ ಕೋಚ್ ನೇಮಕವಾಗುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಯಾವ ನಿರ್ಧಾರಗಳನ್ನು ಅವರು ತೆಗೆದುಕೊಳ್ಳುತ್ತಾರೋ ಅದನ್ನು ಚರ್ಚಿಸಿ ನಿರ್ಧರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ನನಗೆ ಮತ್ತೊಂದು ಹತಾಶೆಯಾಗಿದ್ದೇನೆಂದರೆ ಅಂದು ನಾನು ಸ್ವೀಕರಿಸಿದ ಆ ಕರೆ ಕೇವಲ ಐದು ನಿಮಿಷದ್ದಾಗಿದ್ದು ಅದರಲ್ಲಿ ಹೆಚ್ಚು ವಿಚಾರಗಳು ನನಗೆ ಸ್ಪಷ್ಟವಾಗಿಲ್ಲ" ಎಂದು ಜೇಮ್ಸ್ ಆಂಡರ್ಸನ್ ಹೇಳಿಕೊಂಡಿದ್ದಾರೆ.
ಇನ್ನು ಇದಕ್ಕೂ ಮುನ್ನ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಕೂಡ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅನುಭವಿ ಆಟಗಾರರನ್ನು ಹೊರಗಿಟ್ಟ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಈ ಆಟಗಾರರು ತಮಡದಲ್ಲಿಲ್ಲದಿರುವುದು ಬೇಸರ ಮೂಡಿಸಿದೆ. ಆದರೆ ಇದು ಅವರ ವೃತ್ತಿ ಜೀವನದ ಅಂತ್ಯ ಖಂಡಿತಾ ಅಲ್ಲ ಎಂದು ಉತ್ತರಿಸಿದ್ದರು.
ಟೆನಿಸ್ ಪಂದ್ಯ ಸೋತ ಕೋಪದಲ್ಲಿ ಅಂಪೈರ್ ಮೇಲೆ ಹಲ್ಲೆ ಮಾಡಿದ ಅಲೆಕ್ಸಾಂಡರ್
"ನಾನು ಜಿಮ್ಮಿ(ಜೇಮ್ಸ್ ಆಂಡರ್ಸನ್) ಹಾಗೂ ಸ್ಟುವರ್ಟ್ ಅವರೊಂದಿಗೆ ಮಾತನಾಡಿದ್ದೇನೆ. ಸಹಜವಾಗಿಯೇ ಅವರು ಬೇಸರ ಹಾಗೂ ಆಕ್ರೋಶಗೊಂಡಿದ್ದಾರೆ. ಸ್ಟುವರ್ಟ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಅದನ್ನ ನೀವು ನಿರೀಕ್ಷಿಸಬಹುದಾಗಿತ್ತು. ಅವರಿಬ್ಬರ ಬಗ್ಗೆಯೂ ನನಗೆ ಸಾಕಷ್ಟು ಗೌರವವಿದೆ.ಒಂದಂತೂ ಸ್ಪಷ್ಟ ಇದು ಅವರ ವೃತ್ತಿ ಜೀವನದ ಅಂತ್ಯ ಎಂದು ಯಾರೂ ಕೂಡ ಹೇಳಿಲ್ಲ" ಎಂದು ಜೋ ರೂಟ್ ಹೇಳಿದ್ದಾರೆ.