ಟೀಮ್ ಇಂಡಿಯಾದ ಆಲ್ ರೌಂಡರ್ ವಿಜಯ್ ಶಂಕರ್ 2019ರ ವಿಶ್ವಕಪ್ ನಂತರ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡೇ ಇಲ್ಲ. 2019ರ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನು ವಿಜಯ್ ಶಂಕರ್ ಪಡೆದುಕೊಂಡರೂ ಸಹ ಕೇವಲ 3 ಪಂದ್ಯಗಳನ್ನಾಡಿ ತದನಂತರ ಗಾಯಕ್ಕೊಳಗಾದ ಕಾರಣ ತಂಡದಿಂದ ಹೊರಗುಳಿದರು. ಇದಾದ ಬಳಿಕ ನಡೆದ 2020 ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ಸಹ ವಿಜಯಶಂಕರ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ.
ಪ್ರಸ್ತುತ ವಿಜಯ್ ಶಂಕರ್ ಟೀಮ್ ಇಂಡಿಯಾಗೆ ಮರಳುತ್ತಾರಾ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಸ್ವತಃ ವಿಜಯ್ ಶಂಕರ್ ಅವರೇ ಟೀಮ್ ಇಂಡಿಯಾಗೆ ಮರಳುವ ಕುರಿತು ಪ್ರತಿಕ್ರಿಯೆಯನ್ನು ನೀಡಿದ್ದಾರೆ. 'ಮೊದಲ ಬಾರಿ ಟೀಮ್ ಇಂಡಿಯಾ ಪರ ಆಡುವ ಅವಕಾಶ ದೊರಕುವ ವೇಳೆಯಲ್ಲೇ ನಾನು ಗಾಯಕ್ಕೊಳಗಾಗಿದ್ದೆ, ಮತ್ತೊಮ್ಮೆ ಟೀಮ್ ಇಂಡಿಯಾದಲ್ಲಿ ಸ್ಥಾನ ದೊರೆತ ಸಮಯದಲ್ಲೂ ಸಹ ಮತ್ತೆ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದೆ, ಹೀಗೆ ನನ್ನ ವೃತ್ತಿಜೀವನದಲ್ಲಿ ಗಾಯದ ಸಮಸ್ಯೆ ದೊಡ್ಡ ಪಾತ್ರವನ್ನೇ ನಿರ್ವಹಿಸಿದೆ' ಎಂದು ವಿಜಯ್ ಶಂಕರ್ ಬೇಸರ ವ್ಯಕ್ತಪಡಿಸಿದರು.
'ಟೀಮ್ ಇಂಡಿಯಾಗೆ ಪುನಃ ಆಯ್ಕೆಯಾಗುವುದು ನನ್ನ ಕೈಯಲ್ಲಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಅನೇಕ ಆಟಗಾರರ ಜತೆ ನನ್ನನ್ನು ಹೋಲಿಕೆ ಮಾಡಿ ಮಾತನಾಡುತ್ತಾರೆ. ಕೆಲವರು ಈ ರೀತಿ ಹೋಲಿಕೆ ಮಾಡಿ ಮಾತನಾಡಿದರೆ ಖಂಡಿತವಾಗಿಯೂ ಆ ಆಟಗಾರರಿಗಿಂತ ನಾನು ಉತ್ತಮ ಆಟವಾಡಿದ್ದೇನೆ ಎಂದರ್ಥ' ಎಂದು ವಿಜಯಶಂಕರ್ ಟೀಕಾಕಾರರಿಗೆ ಕುಟುಕಿದರು.