ಟೀಮ್ ಇಂಡಿಯಾ ಹಾಗೂ ಸನ್ರೈಸರ್ಸ್ ತಂಡದ ವೇಗದ ಬೌಲರ್ ಟಿ ನಟರಾಜನ್ ಈಗ ಗಾಯದಿಂದ ಚೇತರಿಕೆಯ ಹಾದಿಯಲ್ಲಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾದ ನಂತರ ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು. ಹೀಗಾಗಿ ಐಪಿಎಲ್ ಟೂರ್ನಿ ಮುಂದೂಡುವ ಮುನ್ನವೇ ನಟರಾಜನ್ ಟೂರ್ನಿಯಿಂದ ಹೊರಗುಳಿಯಬೇಕಾಯಿತು.
ಸನ್ರೈಸರ್ಸ್ ಹೈದರಾಬಾದ್ ಪರವಾಗಿ ಆರಂಭಿಕ ಎರಡು ಪಂದ್ಯಗಳಲ್ಲಿ ಟಿ ನಟರಾಜನ್ ಕಾಣಿಸಿಕೊಂಡಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಗಾಯದ ಕಾರಣಕ್ಕೆ ಹೊರಗುಳಿದಿದ್ದರು. ಆದರೆ ನಂತರ ನಟರಾಜನ್ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದು ವೈದ್ಯಕೀಯ ತಪಾಸಣೆಯಲ್ಲಿ ತಿಳಿದುಬಂದಿತ್ತು. ಹೀಗಾಗಿ ಟೂರ್ನಿಯಿಂದ ಹೊರಗುಳಿದು ಏಪ್ರಿಲ್ ತಿಂಗಳಿನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಟೆಸ್ಟ್ ವೃತ್ತಿ ಬದುಕಿನ ಗಾಳಿಸುದ್ದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಭುವನೇಶ್ವರ್
ಭಾನುವಾರ ಟಿ ನಟರಾಜನ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯಲ್ಲಿಯೇ ನಟರಾಜನ್ ಫಿಟ್ನೆಸ್ ಗಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. "ಪ್ರತಿ ದಿನವೂ ಹಿಂದಿಗಿಂತ ಬಲಿಷ್ಠನಾಗುತ್ತಿದ್ದೇನೆ" ಎಂದು ಬರಹವನ್ನು ಕೂಡ ನೀಡಿದ್ದಾರೆ.
ಕಳೆದ ತಿಂಗಳು ಐಪಿಎಲ್ ತೊರೆಯುವ ವೇಳೆ ಭಾವನಾತ್ಮಕವಾಗಿ ಮಾತನಾಡಿದ್ದ ನಟರಾಜನ್ ಬಲಿಷ್ಠನಾಗಿ ಹಾಗೂ ಸಮರ್ಥನಾಗಿ ವಾಪಾಸಾಗಲಿದ್ದೇನೆ ಎಂದು ಹೇಳಿಕೊಂಡಿದ್ದರು. ಈಗ ಅದಕ್ಕಾಗಿ ನಟರಾಜನ್ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ.