ಭಾರತ ಹಾಗೂ ವೆಸ್ಟ್ ಇಂಡಿಸ್ ನಡುವಿನ ಟಿ20 ಸರಣಿ ಅಂತ್ಯವಾಗಿದ್ದು 3-0 ಅಂತರದಿಂದ ಸರಣಿಯನ್ನು ವೈಟ್ವಾಶ್ ಮಾಡಿ ಭಾರತ ವಶಕ್ಕೆ ಪಡೆದುಕೊಂಡಿದೆ. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿಯೂ ಭಾರತ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚುಹರಿಸಿದೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪನೆ ಮಾಡಿದ ಯುವ ಆಟಗಾರ ಆವೇಶ್ ಖಾನ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಭಾರತ ಅಂತಿಮ ಟಿ20 ಪಂದ್ಯದಲ್ಲಿ 17 ರನ್ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದರೂ ಆವೇಶ್ ಖಾನ್ ಬೌಲಿಂಗ್ನಲ್ಲಿ ಹೆಚ್ಚಿನ ಪರಿಣಾಮವನ್ನು ಬೀರಲು ಸಾಧ್ಯವಾಗಲಿಲ್ಲ. ಆದರೆ ಈ ಚೊಚ್ಚಲ ಪಂದ್ಯವನ್ನು ನಾನು ಉತ್ತಮ ರೀತಿಯಲ್ಲಿ ಅನುಭವಿಸಿದ್ದೇನೆ ಎಂದು ಆವೇಶ್ ಖಾನ್ ಹೇಳಿಕೊಂಡಿದ್ದಾರೆ.
ವೃದ್ದಿಮಾನ್ ಸಾಹಾಗೆ ಪತ್ರಕರ್ತನಿಂದ ಬೆದರಿಕೆ: BCCI ತುರ್ತಾಗಿ ತನಿಖೆ ನಡೆಸಬೇಕು ಎಂದ ರವಿಶಾಸ್ತ್ರಿ
"ನರ್ವಸ್ನೆಸ್ ಸಹಜವಾಗಿಯೇ ಮೊದಲ ಪಂದ್ಯದಲ್ಲಿ ಆಗುತ್ತದೆ. ನಾನು ಈ ಪಂದ್ಯದಲ್ಲಿ ಆಡಲಿದ್ದೇನೆ ಎಂದು ತಿಳಿದಾಗ ಈ ಪಂದ್ಯದಲ್ಲಿ ನಾನು ಪದಾರ್ಪನೆ ಮಾಡಲಿದ್ದೇನೆ ಎಂದು ಅರಿವಾದಾಗ ನಾನು ಕೂಡ ನರ್ವಸ್ ಆಗಿದ್ದೆ. ಯಾಕೆಂದರೆ ಈ ಹಂತಕ್ಕೆ ಬರಲು ನಾನು ಸಾಕಷ್ಟು ಶ್ರಮವಹಿಸಿದ್ದೆ. ನಾನು ಕಂಡ ಕನಸನ್ನು ಕಡೆಗೂ ನನಸು ಮಾಡುವ ಸಂದರ್ಭ ಅದಾಗಿತ್ತು" ಎಂದು ತಂಡದ ಸಹ ಆಟಗಾರ ವೆಂಕಟೇಶ್ ಐಯ್ಯರ್ ಜೊತೆಗೆ ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
"ನಾಯಕ ರೋಹಿತ್ ಶರ್ಮಾ ನನಗೆ ಬೆಂಬಲ ನೀಡಿದರು. ರಾಹುಲ್ ಸರ್(ರಾಹುಲ್ ದ್ರಾವಿಡ್) ನನಗೆ ಮೊದಲ ಪಂದ್ಯವನ್ನು ಚೆನ್ನಾಗಿ ಆನಂದಿಸಲು ಸಲಹೆ ನೀಡಿದರು. ಈ ದಿನ ಮತ್ತೆ ಬರುವುದಿಲ್ಲ ಇದನ್ನು ಅನುಭವಿಸು ಎಂದಿದ್ದರು" ಎಂದು ಆವೇಶ್ ಖಾನ್ ತಿಳಿಸಿದ್ದಾರೆ.
6 ವರ್ಷಗಳ ಬಳಿಕ ಟಿ20 ಕ್ರಿಕೆಟ್ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದ ಭಾರತ
ಆವೇಶ್ ಖಾನ್ ತಮ್ಮ 25ನೇ ವಯಸ್ಸಿನಲ್ಲಿ ಭಾರತ ತಂಡದ ಪರವಾಗಿ ಆಡುವ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಸಮದರ್ಭದಲ್ಲಿ ಅವರು ಸುದೀರ್ಘ ಕಾಲ ಭಾರತ ತಂಡದ ಪರವಾಗಿ ಆಡುವ ಕನಸನ್ನು ಕೂಡ ವ್ಯಕ್ತಪಡಿಸಿದ್ದಾರೆ. "ಇದೊಂದು ಅದ್ಭುತವಾದ ಅನುಭವ, ಪ್ರತಿಯೊಬ್ಬ ಕ್ರಿಕೆಟ್ ಆಟಗಾರ ಕೂಡ ಭಾರತದ ಪರವಾಗಿ ಕ್ರಿಕೆಟ್ ಆಡುವ ಕನಸನ್ನು ಕಟ್ಟಿಕೊಂಡಿರುತ್ತಾರೆ. ಈ ದಿನ ನನ್ನ ಆ ಕನಸು ಪೂರ್ತಿಯಾಗಿದೆ. ನನಗೆ ಅದ್ಭುತವಾದ ಅನುಭವವಾಗುತ್ತಿದೆ. ನಾನು ಪ್ರತಿ ಕ್ಷಣವನ್ನು ಕೂಡ ಆನಂದಿಸಿದ್ದೇನೆ. ನಾನು ಸಾಧ್ಯವಾದಷ್ಟು ಸುದೀರ್ಘ ಕಾಲ ಭಾರತೀಯ ಕ್ರಿಕೆಟ್ ತಂಡಕ್ಕೆ ಕೊಡುಗೆ ನೀಡುವ ಕನಸು ಹೊಂದಿದ್ದೇನೆ" ಎಂದು ಆವೇಶ್ ಖಾನ್ ಹೇಳಿಕೊಂಡಿದ್ದಾರೆ.
ಆವೇಶ್ ಖಾನ್ ವೆಸ್ಟ್ ಇಂಡಿಸ್ ಸರಣಿಯ ನಂತರ ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಮುಂದಿನ ಗುರುವಾರದಿಮದ ಆರಂಬವಾಗಲಿದ್ದು ಮೊದಲ ಪಮದ್ಯ ಲಕ್ನೋದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತ ತಂಡ ಈಗಾಗಲೇ ಲಕ್ನೋಗೆ ತಲುಪಿದೆ.