ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಆಡುವ ಬಳಗದ ಕುರಿತು ಇನ್ನೂ ಚಿಂತಿಸಿಲ್ಲ
ಕಾನ್ಪುರ ಟೆಸ್ಟ್ ಪಂದ್ಯ ಮುಗಿದ ನಂತರ ಮುಂಬೈ ಟೆಸ್ಟ್ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿರುವ ಭಾರತದ ಪ್ರಮುಖ ತರಬೇತುದಾರ ರಾಹುಲ್ ದ್ರಾವಿಡ್ "ನಾವು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಯಾವ ಯಾವ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂಬುದರ ಕುರಿತು ಇನ್ನೂ ಕೂಡ ನಿರ್ಧರಿಸಿಲ್ಲ ಮತ್ತು ಇಷ್ಟು ಬೇಗ ಚಿಂತನೆ ನಡೆಸುವ ಅಗತ್ಯವೂ ಇಲ್ಲ. ನಾವು ಇಂದು ಇಂದಿನ ಪಂದ್ಯದ ಕುರಿತು ಮಾತ್ರ ಗಮನ ಹರಿಸಿದ್ದೆವು. ಹೀಗಾಗಿ ಮುಂಬೈ ತಲುಪಿದ ನಂತರ ಆಟಗಾರರ ಫಿಟ್ನೆಸ್ ಆಧರಿಸಿ ಮುಂದಿನ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸಲಿದ್ದೇವೆ" ಎಂದು ಮಾತನಾಡಿದರು.
ವಿರಾಟ್ ಕೊಹ್ಲಿ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಿದ್ದೇನೆ ಎಂದ ದ್ರಾವಿಡ್
ಇನ್ನೂ ಮುಂದುವರಿದು ಮಾತನಾಡಿರುವ ರಾಹುಲ್ ದ್ರಾವಿಡ್ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗ ಹೇಗಿರಬೇಕು ಎಂಬುದನ್ನು ವಿರಾಟ್ ಕೊಹ್ಲಿ ಜೊತೆ ಚರ್ಚಿಸಿ ನಂತರ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿ ಮತ್ತು ಮೊದಲನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಹಾಗೂ ಈಗಾಗಲೇ ಮುಂಬೈ ತಲುಪಿರುವ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕಾಗಿ ನಡೆಸುತ್ತಿರುವ ಅಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಯಾವಾಗ?
ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಡಿಸೆಂಬರ್ 3ರಿಂದ ಡಿಸೆಂಬರ್ 7ರವರೆಗೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.