ದುಬೈ, ಮಾ.30: ಐಸಿಸಿ ಚೇರ್ಮನ್ ಎನ್ ಶ್ರೀನಿವಾಸನ್ ಭಾರತೀಯರಿರಬಹುದು. ಭಾರತ ಸತತ 7 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿರಬಹುದು. ಅದರೆ, ಐಸಿಸಿ ಪ್ರಕಟಿಸಿರುವ ವಿಶ್ವಕಪ್ 2015 ಟೂರ್ನಿಯ ಶ್ರೇಷ್ಠ ತಂಡದಲ್ಲಿ ಒಬ್ಬೇ ಒಬ್ಬ ಟೀಂ ಇಂಡಿಯಾ ಆಟಗಾರರನಿಗೂ ಸ್ಥಾನ ನೀಡಿಲ್ಲದಿರುವುದು ಅಭಿಮಾನಿಗಳಿಗೆ ಆಘಾತ ತಂದಿದೆ.
ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್ ತಂಡದಿಂದ ಹೆಚ್ಚಿನ ಆಟಗಾರರನ್ನು ಆಯ್ಕೆ ಮಾಡಲಾಗಿದೆ. [ವಿಶ್ವಕಪ್ 2015 ಸಮರ ಸಂಭ್ರಮ]
ಟೀಂ ಇಂಡಿಯಾದಿಂದ ನಾಯಕ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಆರ್ ಅಶ್ವಿನ್ ಹಾಗೂ ಮಹಮ್ಮದ್ ಶಮಿ ಹೆಸರು ಆಯ್ಕೆ ಸಮಿತಿ ಮುಂದೆ ಬಂದರೂ ಯಾರನ್ನು ಆಯ್ಕೆ ಮಾಡಿಲ್ಲ. ಕಡೆ ಪಕ್ಷ 12ನೇ ಆಟಗಾರನಾಗಲೂ ಟೀಂ ಇಂಡಿಯಾದ ಒಬ್ಬ ಆಟಗಾರನಿಗೂ ಯೋಗ್ಯತೆ ಇಲ್ಲವೇ ಎಂದು ಆಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಆಸೀಸ್ ಗೆ 25 ಕೋಟಿ ರು, ಭಾರತಕ್ಕೆಷ್ಟು?]
ನಿರೀಕ್ಷೆಯಂತೆ ನ್ಯೂಜಿಲೆಂಡ್ ನಾಯಕ ಬ್ರೆಂಡನ್ ಮೆಕ್ಲಮ್ ಅವರು ಐಸಿಸಿ ವಿಶ್ವಕಪ್ 2015 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಭರ್ಜರಿ ದ್ವಿಶತಕ ಹಾಗೂ ಟೂರ್ನಿಯ ಅತ್ಯಧಿಕ ಸ್ಕೋರರ್ (547 ರನ್) ಮಾರ್ಟಿನ್ ಗುಪ್ಟಿಲ್, ವೇಗಿ ಟ್ರೆಂಟ್ ಬೌಲ್ಟ್(22 ವಿಕೆಟ್), ಆಲ್ ರೌಂಡರ್ ಕೋರೆ ಆಂಡರ್ಸನ್, ಹಿರಿಯ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ತಂಡಕ್ಕೆ ಆಯ್ಕೆಯಾಗಿದ್ದಾರೆ. [ಚಿತ್ರಗಳಲ್ಲಿ ಕಾಂಗೂರುಗಳ ಕೇಕೆ, ಕಿವೀಸ್ ಕಂಬನಿ]
ಐಸಿಸಿ ವಿಶ್ವಕಪ್ 2015 ಶ್ರೇಷ್ಠ ತಂಡ ಇಂತಿದೆ:
* ಬ್ರೆಂಡನ್ ಮೆಕ್ಲಮ್ (ನ್ಯೂಜಿಲೆಂಡ್) ನಾಯಕ
* ಮಾರ್ಟಿನ್ ಗುಪ್ಟಿಲ್ (ನ್ಯೂಜಿಲೆಂಡ್)
* ಕುಮಾರ್ ಸಂಗಕ್ಕಾರ (ಶ್ರೀಲಂಕಾ) ವಿಕೆಟ್ ಕೀಪರ್
* ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ)
* ಎಬಿ ಡಿ ವಿಲೆಯರ್ಸ್ (ದಕ್ಷಿಣ ಆಫ್ರಿಕಾ)
* ಗ್ಲೆನ್ ಮ್ಯಾಕ್ಸ್ ವೆಲ್ (ಆಸ್ಟ್ರೇಲಿಯಾ)
* ಕೋರೆ ಆಂಡರ್ಸನ್ (ನ್ಯೂಜಿಲೆಂಡ್)
* ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
* ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
* ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
* ಮಾರ್ನೆ ಮಾರ್ಕೆಲ್ (ದಕ್ಷಿಣ ಆಫ್ರಿಕಾ)
* ಬ್ರೆಂಡನ್ ಟೇಲರ್ (ಜಿಂಬಾಬ್ವೆ) 12ನೇ ಆಟಗಾರ. [ವಿಶ್ವಕಪ್ ಜರ್ನಿ: ಅಡಿಲೇಡ್ ನ ಅಬ್ಬರದಿಂದ ಸಿಡ್ನಿ ಸೋಲಿನ ತನಕ]
ವಿಶ್ವಕಪ್ ಟೂರ್ನಿಯಲ್ಲಿ 2 ದ್ವಿಶತಕ, 38 ಶತಕ, 2 ಬಾರಿ ಹ್ಯಾಟ್ರಿಕ್ ಹಾಗೂ 28 ಬಾರಿ ನಾಲ್ಕು ವಿಕೆಟ್ ಪಡೆದ ಸಾಧನೆ ಜೊತೆಗೆ ಅನೇಕ ದಾಖಲೆಗಳು ಮುರಿಯಲ್ಪಟ್ಟಿವೆ. [ನಿವೃತ್ತಿ ಬಗ್ಗೆ ಗುಟ್ಟು ರಟ್ಟು ಮಾಡಿದ ಧೋನಿ ]
ಮೇಲ್ಕಂಡ ಆಟಗಾರರಲ್ಲದೆ ಬಾಂಗ್ಲಾದೇಶದ ಮಹಮುದ್ದುಲ್ಲಾ, ಭಾರತದ ಮಹಮ್ಮದ್ ಶಮಿ, ಆರ್ ಅಶ್ವಿನ್ ಹಾಗೂ ಉಮೇಶ್ ಯಾದವ್, ಪಾಕಿಸ್ತಾನದ ವಹಾಬ್ ರಿಯಾಜ್, ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಹೆಸರು ಕೂಡಾ ಆಯ್ಕೆ ಸಮಿತಿ ಚರ್ಚೆ ನಡೆಸಿತು ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಜೆಫ್ ಅಲಾರ್ಡೈಸ್ ಹೇಳಿದ್ದಾರೆ. [ಟೀಕೆ ಮಾಡೋದು ಬಿಡಿ, ಧೋನಿ ಪಡೆಗೆ ಬೆನ್ನು ತಟ್ಟಿ]
ಆಯ್ಕೆ ಸಮಿತಿಯಲ್ಲಿ ಭಾರತದ ಕಾಮೆಂಟೇಂಟರ್ ಹರ್ಷ ಬೋಗ್ಲೆ ಕೂಡಾ ಇದ್ದರು ಎಂಬುದನ್ನು ಮರೆಯುವಂತಿಲ್ಲ. ಈ ತಂಡವೇನು ಮ್ಯಾಚ್ ಆಡಿ ಕಪ್ ಗೆಲ್ಲುವುದಿಲ್ಲ ನಿಜ. ಅದರೆ, ಆಟಗಾರರಿಗೆ ವಿಶ್ವಕಪ್ ನಂಥ ಟೂರ್ನಿಯ ಶ್ರೇಷ್ಠ ತಂಡದಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳುವುದು ದೊಡ್ಡ ಗೌರವವಾಗಿರುತ್ತದೆ. ಈ ಗೌರವ ಭಾರತದ ಯಾವೊಬ್ಬ ಆಟಗಾರನಿಗೂ ಸಿಗದಿರುವುದು ದುರಾದೃಷ್ಟ. (ಒನ್ ಇಂಡಿಯಾ ಸುದ್ದಿ)