ನವದೆಹಲಿ, ಮಾರ್ಚ್ 03: ಭಯೋತ್ಪದನಾಗೆ ಕುಮ್ಮಕ್ಕು ನೀಡುತ್ತಿರುವ ರಾಷ್ಟ್ರಗಳ ಜತೆ ಸಂಪರ್ಕ ಕಳೆದುಕೊಳ್ಳುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಸಮಿತಿ(ಬಿಸಿಸಿಐ) ಮಾಡಿದ ಮನವಿ ತಿರಸ್ಕೃತಗೊಂಡಿದೆ.
ಪಾಕಿಸ್ತಾನದೊಂದಿಗೆ ನಂಟು ಕಡಿದುಕೊಳ್ಳುವಂತೆ ಬಿಸಿಸಿಐ ಮಾಡಿದ್ದ ಮನವಿ ತಿರಸ್ಕರಿಸಿರುವ ಐಸಿಸಿ, ಇಂಥ ಕ್ರಮ ಕೈಗೊಳ್ಳುವುದು ತನ್ನ ಕೆಲಸವಲ್ಲ ಎಂದು ಸ್ಪಷ್ಟಪಡಿಸಿದೆ.
2019ರ ವಿಶ್ವಕಪ್ ವೇಳೆ ಭಾರತಕ್ಕೆ ಭದ್ರತೆಯ ಭರವಸೆ ನೀಡಿದ ಐಸಿಸಿ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ಪಿಎಫ್ ಸಿಬ್ಬಂದಿಗಳಿದ್ದ ವಾಹನದ ಮೇಲೆ ಆತ್ಮಾಹುತಿ ದಾಳಿ ನಡೆಸಲಾಗಿತ್ತು. ಈ ದುರ್ಘಟನೆಯಲ್ಲಿ 44 ಸಿಬ್ಬಂದಿ ಹುತಾತ್ಮರಾಗಿದ್ದರು. ಇದು ಪಾಕಿಸ್ತಾನ ಬೆಂಬಲಿತ ಜೈಷ್ ಎ ಮೊಹಮ್ಮದ್ ಸಂಘಟನೆಯ ಕೃತ್ಯ ಎಂದು ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ರಾಷ್ಟ್ರಗಳ ಕ್ರಿಕೆಟ್ ಮಂಡಳಿಗಳು ಹಾಗೂ ಐಸಿಸಿಗೆ ಪತ್ರ ಬರೆದಿದ್ದ ಬಿಸಿಸಿಐ, ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆ, ಭಯೋತ್ಪಾದನಾ ಕೃತ್ಯಗಳಿಗೆ ಕುಮ್ಮಕ್ಕು ಕೊಡುವ ರಾಷ್ಟ್ರದೊಂದಿಗಿನ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳುವಂತೆ ಮನವಿ ಮಾಡಿಕೊಂಡಿತ್ತು.
2019ರ ವಿಶ್ವಕಪ್ನಲ್ಲಿ ಪಾಕಿಸ್ಥಾನ ವಿರುದ್ಧ ಆಡದಿರಲು ಭಾರತ ಸಿದ್ಧ?!
ಈ ರೀತಿಯ ಕ್ರಮ ಕೈಗೊಳ್ಳಲು ಐಸಿಸಿ ಬಳಿ ಯಾವುದೇ ಅವಕಾಶವಿಲ್ಲ. ಯಾವುದಾದರೂ ರಾಷ್ಟ್ರದ ವಿರುದ್ಧ ಆಡದಿರುವ ನಿರ್ಧಾರಗಳನ್ನು ಆಯಾ ರಾಷ್ಟ್ರದ ಸರ್ಕಾರಗಳಿಗೆ ಬಿಟ್ಟ ವಿಷಯ. ಇಂಥ ಕ್ರಮ ಕೈಗೊಳ್ಳಲು ಐಸಿಸಿ ಯಾವುದೇ ನೀತಿನಿಯಮವನ್ನು ಹೊಂದಿಲ್ಲ ಎಂದು ಐಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಜೂನ್ 16ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ವಿಶ್ವಕಪ್ ಪಂದ್ಯ ನಿಗದಿಯಾಗಿದೆ. ಆದರೆ, ಪುಲ್ವಾಮಾ ಘಟನೆ ಬಳಿಕ ಪಂದ್ಯವಾಡದಂತೆ ಭಾರತದಲ್ಲಿ ಒತ್ತಡ ಹೆಚ್ಚಾಗಿದೆ. ಆದರೆ, ಕ್ರಿಕೆಟ್ ಆಡಳಿತಗಾರರ ಸಮಿತಿ(ಸಿಒಎ) ಈ ಬಗ್ಗೆ ಇನ್ನು ತನ್ನ ನಿರ್ಧಾರ ಪ್ರಕಟಿಸಿಲ್ಲ.