ಬರ್ಮಿಂಗ್ಹ್ಯಾಮ್, ಜುಲೈ 3: 'ಒಂದೊಮ್ಮೆ ಲಿಲ್ಲಿ ಬೌಲಿಂಗ್ನಲ್ಲಿ ನೀವು ಔಟಾಗದಿದ್ದರೆ ಮತ್ತೊಮ್ಮೊ ಮಾತ್ರ ನಿಮ್ಮನ್ನು ಬಿಡಲ್ಲ' ಎಂಬ ಮಾತು ಕ್ರಿಕೆಟ್ ಜಗತ್ತಿನಲ್ಲಿ ಜನಜನಿತವಾಗಿತ್ತು. ಅಂದರೆ ಡೆನ್ನಿಸ್ ಲಿಲ್ಲಿ ಬೌಲಿಂಗ್ನಲ್ಲಿ ನೀವು ಉಳಿದುಕೊಂಡರೂ ಜೆಫ್ ಥಾಮ್ಸನ್ ಮಾತ್ರ ನಿಮ್ಮನ್ನು ಔಟ್ ಮಾಡದೆ ಬಿಡಲಾರ ಎಂದು ಅರ್ಥ. ಇದು ಹಳೆಯ ಕ್ರಿಕೆಟ್ ಜಗತ್ತಿನ ಮಾತಾಯಿತು. ಆದರೆ ಈಗ ಭಾರತದ ಬೌಲಿಂಗ್ ಜೋಡಿ ಶಮಿ ಹಾಗೂ ಬುಮ್ರಾ ಅವರ ಫಾರ್ಮ ನೋಡಿದಲ್ಲಿ ಈ ಇಬ್ಬರು ಸಹ ಅದೇ ಹಾದಿಯಲ್ಲಿ ಸಾಗುತ್ತಿರುವ ಲಕ್ಷಣಗಳು ಮಾತ್ರ ಕಾಣುತ್ತಿವೆ. ಇವರಿಬ್ಬರೂ ಈಗಲೇ ಲಿಲ್ಲಿ ಹಾಗೂ ಥಾಮ್ಸನ್ ಮಟ್ಟಕ್ಕೇರಿಲ್ಲವಾದರೂ ಭರವಸೆಯ ಬೌಲರ್ಗಳಾಗಿ ಗುರುತಿಸಿಕೊಂಡಿದ್ದಾರೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮೊಹಮ್ಮದ ಶಮಿ ಭಾರತದ ವಿಶ್ವಕಪ್ ಎಲೆವೆನ್ ತಂಡಕ್ಕೆ ಭುವನೇಶ್ವರ ಕುಮಾರ ಅವರ ನಂತರದ ಆಯ್ಕೆಯಾಗಿ ಸೇರ್ಪಡೆಯಾದರು. ಕೊನೆಯ ಓವರುಗಳಲ್ಲಿ ಒಂದಿಷ್ಟು ಬ್ಯಾಟ್ ಬೀಸಬಲ್ಲ ಭುವನೇಶ್ವರ ಕುಮಾರ ಸಹಜವಾಗಿಯೇ ಆಯ್ಕೆದಾರರ ಪ್ರಥಮ ಆದ್ಯತೆಯಾಗಿದ್ದರು. ಇನ್ನು ಜಸಪ್ರೀತ ಬುಮ್ರಾ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಟಾಪ್ ರ್ಯಾಂರಕಿಂಗ್ ಬೌಲರ್ ಆಗಿ ವಿಶ್ವಕಪ್ಗೆ ಎಂಟ್ರಿ ಪಡೆದಿದ್ದರು. ಇಷ್ಟಕ್ಕೂ ಬುಮ್ರಾ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುತ್ತಲೇ ಸಾಗಿದ್ದನ್ನು ನೋಡಿಯೇ ಇದ್ದೇವೆ.
ಹ್ಯಾಮ್ಸ್ಟ್ರಿಂಗ್ ಸಮಸ್ಯೆಯಿಂದ ಭುವನೇಶ್ವರ ಕುಮಾರ ತಂಡದಿಂದ ಹೊರಗುಳಿದಿದ್ದೇ ತಡ ಆ ಸ್ಥಾನಕ್ಕೆ ಮೊಹಮ್ಮದ ಶಮಿ ಸೇರ್ಪಡೆಯಾದರು. ಆದರೆ ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಒಂದಿಷ್ಟೂ ತಡ ಮಾಡದ ಶಮಿ ಅಫ್ಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತಲಾ ನಾಲ್ಕು ವಿಕೆಟ್ ಕಬಳಿಸಿ ಫಾರ್ಮ ಕಂಡುಕೊಂಡರು. ಇನ್ನು ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ 5 ವಿಕೆಟ್ ಪಡೆದು ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.
ವಿಶ್ವಕಪ್ ಕ್ರಿಕೆಟ್ ಬಳಿಕ ಎಂಎಸ್ ಧೋನಿ ನಿವೃತ್ತಿ ಘೋಷಣೆ?
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ಏರಿಳಿತಗಳನ್ನು ಶಮಿ ನೋಡಬೇಕಾಯಿತು. ಆರಂಭಿಕ ಸ್ಪೆಲ್ನಲ್ಲಿ 7 ಓವರ್ಗಳಲ್ಲಿ 25 ರನ್ ನೀಡಿ 4 ವಿಕೆಟ್ ಪಡೆದಿದ್ದ ಇವರು ಕೊನೆಯ 3 ಓವರ್ ಬೌಲಿಂಗ್ನಲ್ಲಿ 44 ರನ್ ನೀಡಿದ್ದರು. ಆ ಕೊನೆಯ ಓವರುಗಳಲ್ಲಿ ಇಂಗ್ಲೆಂಡಿನ ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಶಮಿ ಎಸೆತಗಳನ್ನು ಎರ್ರಾಬಿರ್ರಿ ಚಚ್ಚಿದರು. ಅವತ್ತು ಇವರ ಯಾರ್ಕರ್ಗಳು ವಿಫಲವಾಗಿದ್ದವು. ನಂತರ ಎಸೆದ ಫುಲ್ ಪಿಚ್ ಎಸೆತಗಳನ್ನು ಇಬ್ಬರು ಶಕ್ತಿಶಾಲಿ ಬ್ಯಾಟ್ಸಮನ್ಗಳು ಲೀಲಾಜಾಲವಾಗಿ ಬೌಂಡರಿ ಗೆರೆ ದಾಟಿಸಿದ್ದರು.
ಮಂಗಳವಾರ ಬಾಂಗ್ಲಾ ದೇಶ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಬ್ಯಾಟ್ಸಮನ್ಗಳಾದ ಸಬೀರ್ ರಹಮಾನ್ ಹಾಗೂ ಮೊಹಮ್ಮದ ಸೈಫುದ್ದೀನ್ ಚೆನ್ನಾಗಿಯೇ ಆಟವಾಡಿದರು. ಇವರೇನೂ ಬೌಲರ್ಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲ ಬ್ಯಾಟ್ಸಮನ್ಗಳಲ್ಲ. ಈ ಪಂದ್ಯದಲ್ಲಿ ಬೌಲ್ ಮಾಡಿದ ಶಮಿ ತಮ್ಮ ಮೊದಲ 6 ಓವರ್ಗಳಲ್ಲಿ ೩೩ ರನ್ ನೀಡಿದ್ದರು. ಆದರೆ ನಂತರ 7ನೇ ಓವರಿನಲ್ಲಿ 17, ೮ನೇ ಓವರಿನಲ್ಲಿ 11 ರನ್ ನೀಡಿದರು. ಅದೇನಾಯಿತೋ ಗೊತ್ತಿಲ್ಲ, ವಿಕೆಟ್ನ ಎರಡು ದಿಕ್ಕುಗಳಲ್ಲಿಯೂ ಇವರ ಬೌಲಿಂಗ್ ಗತಿ ತಪ್ಪಿತ್ತು. ಒಂದೋ ಶಾರ್ಟ್ ಲೆಂಗ್ತ್ ಅಥವಾ ಫುಲ್ ಲೆಂಗ್ತ್ ಎಸೆತಗಳು ಬರಲಾರಂಭಿಸಿದವು. ತುಂಬಾ ಸುಲಭವಾಗಿ ಭಾರತ ಗೆಲ್ಲಬೇಕಿದ್ದ ಪಂದ್ಯ ನಿಧಾನವಾಗಿ ಬಾಂಗ್ಲಾ ಕಡೆಗೆ ವಾಲತೊಡಗಿತು. ಇದು ಸಹಜವಾಗಿಯೇ ಕ್ಯಾಪ್ಟನ್ ಕೊಹ್ಲಿಗೆ ಚಿಂತೆ ಮೂಡಿಸಿತು.
ಈ ವಿಶ್ವಕಪ್ನಲ್ಲಿ ಸರಣಿಶ್ರೇಷ್ಠ ಯಾರೆಂದು ಊಹಿಸಿದ ಯುವರಾಜ್ ಸಿಂಗ್
ಆಗ ಕೊಹ್ಲಿ ಬೌಲ್ ನೀಡಿದ್ದು ಜಸಪ್ರೀತ್ ಬುಮ್ರಾ ಕೈಗೆ. ಬಹುತೇಕ ಕಠಿಣ ಪರಿಸ್ಥಿತಿಗಳಲ್ಲಿ ಭಾರತವನ್ನು ಪಾರು ಮಾಡಿರುವ ಬುಮ್ರಾ ಮೇಲೆ ವಿಶ್ವಾಸವಿಟ್ಟಿದ್ದು ಸರಿಯಾಗಿಯೇ ಇತ್ತು. ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಬುಮ್ರಾ ಅಷ್ಟೇನೂ ಚೆನ್ನಾಗಿ ಪ್ರದರ್ಶನ ನೀಡಿರಲಿಲ್ಲವಾದರೂ ಅವರ ಬೌಲಿಂಗ್ ಸ್ಥಿರತೆ ಮಾತ್ರ ಪ್ರಶ್ನಾತೀತವಾಗಿತ್ತು. ಈ ಪಂದ್ಯಾವಳಿಯಲ್ಲಿ 10 ಕ್ಕೂ ಹೆಚ್ಚು ವಿಕೆಟ್ ಪಡೆದ 19 ಆಟಗಾರರ ಪೈಕಿ ಬುಮ್ರಾ 4.60 ಎಕಾನಮಿಯೊಂದಿಗೆ ಟ್ರೆಂಟ್ ಬೌಲ್ಟ್ (4.55) ಅವರ ನಂತರ ದ್ವಿತೀಯ ಸ್ಥಾನದಲ್ಲಿದ್ದರು. 14 ವಿಕೆಟ್ಗಳೊಂದಿಗೆ ಶಮಿ ಅವರಷ್ಟೇ ವಿಕೆಟ್ ಪಡೆದಿದ್ದ ಜಸಪ್ರೀತ್ ಮಂಗಳವಾರ ಮಾತ್ರ ಅದ್ಭುತವನ್ನು ಸಾಧಿಸಿಯೇ ಬಿಟ್ಟರು. 55 ರನ್ ನೀಡಿ 4 ವಿಕೆಟ್ ಕಬಳಿಸಿ ಬಾಂಗ್ಲಾದೇಶ ಕೈಯಿಂದ ಮ್ಯಾಚ್ ಕಿತ್ತುಕೊಂಡಿದ್ದು ಇತಿಹಾಸ.
ತನ್ನ ಬಗ್ಗೆ ತಾನೇ ಏನನ್ನೂ ಹೇಳಿಕೊಳ್ಳದ, ನಿಗರ್ವಿ ಹುಡುಗ ಜಸಪ್ರೀತ ಬುಮ್ರಾ ಪಕ್ಕದ ಮನೆಯ ಹುಡುಗನಂತೆ ಭಾಸವಾಗುತ್ತಾರೆ. ಈ ಯುವಕನ ಸಾಮರ್ಥ್ಯ ಹಾಗೂ ಉತ್ಸಾಹಕ್ಕೆ ಸಾಟಿಯೇ ಇಲ್ಲ. ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದನ್ನು ಈತ ಮಾತಿನಲ್ಲಿ ಅಲ್ಲ ಕೃತಿಯಲ್ಲಿಯೇ ಮಾಡಿ ತೋರಿಸುವವ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ಅಂಬಾಟಿ ರಾಯುಡು
ಬುಮ್ರಾ ಎಷ್ಟು ಸರಳವಾಗಿ ಕಾಣುತ್ತಾರೋ ಅವರ ಬೌಲಿಂಗ್ ಮಾತ್ರ ಅಷ್ಟೇ ಸಂಕೀರ್ಣ. ಬಾಲ್ನಿಂದ ಬಾಲ್ಗೆ ಬದಲಾಗುವ ಪೇಸ್, ರಾಡಾರ್ ವೇಗದಲ್ಲಿ ಕಾಲಡಿ ನುಗ್ಗುವ ಯಾರ್ಕರ್ಸ್ ಬ್ಯಾಟ್ಸಮನ್ಗಳಲ್ಲಿ ನಡುಕ ಹುಟ್ಟಿಸುತ್ತವೆ. ಮಂಗಳವಾರ ಸಬೀರ್ ಅವರ ಲೆಗ್ ಸ್ಟಂಪ್ ಹಾರಿಸುವ ಮೂಲಕ ಪ್ರಥಮ ವಿಕೆಟ್ ಪಡೆದ ಬುಮ್ರಾ, ನಂತರ ಮೊಸಾಡೆಕ್ ಹೊಸೇನ್ ಅವರನ್ನು ಬೋಲ್ಡ್ ಮಾಡಿದರು. ಆದರೆ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಬಿರುಗಾಳಿಯ ರೀತಿಯಲ್ಲಿ ನುಗ್ಗಿದ ಯಾರ್ಕರ್ಗಳು ರುಬೆಲ್ ಹೋಸೈನ್ ಹಾಗೂ ಮುಸ್ತಫಿಜುರ್ ರಹಮಾನ್ ಅವರ ಸ್ಟಂಪ್ಗಳನ್ನು ಕಿತ್ತೆಸೆದವು. ಅಲ್ಲಿಗೆ ಎರಡೇ ಎಸೆತಗಳಲ್ಲಿ ಇಡೀ ಪಂದ್ಯವನ್ನು ಭಾರತದ ಮಡಿಲಿಗೆ ಹಾಕಿದರು ಬುಮ್ರಾ. ಭಾರತ ವಿಜಯಶಾಲಿಯಾಗಿ ಸೆಮಿ ಫೈನಲ್ಗೆ ವೀರೋಚಿತ ಪ್ರವೇಶ ಪಡೆದುಕೊಂಡಿತು.
ಖಂಡಿತವಾಗಿಯೂ ಭಾರತದ ಈ ಸಾಧನೆ ಐತಿಹಾಸಿಕ. ಮಂಗಳವಾರದ ಪಂದ್ಯದ ನಂತರ ಬುಮ್ರಾ ವಿಶ್ವ ನಂಬರ್ 1 ಬೌಲರ್ ಎಂದು ಹೇಳಲಿಕ್ಕಾಗದೇ ಇರಬಹುದು. ಆದರೆ ತಂಡದ ಹಿರಿಯ ಹಾಗೂ ಅನುಭವಿಕ ಬೌಲರ್ಗಳಾದ ಶಮಿ ಹಾಗೂ ಭುವನೇಶ್ವರ ಕುಮಾರ ಅವರಿಗಿಂತ ಕಿರಿಯ ಬುಮ್ರಾ ಬೌಲಿಂಗ್ ತೀರಾ ಪರಿಣಾಮಕಾರಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಶಮಿ ವಿಕೆಟ್ ಪಡೆಯದಿದ್ದರೇನಾಯಿತು, ಬುಮ್ರಾ ನಿಮ್ಮನ್ನು ಬಿಡಲಾರ ಎಂಬುದು ಸತ್ಯವಲ್ಲವೇ?
ಜಗತ್ತಿನ ಮನಗೆದ್ದ ಈ ಉತ್ಸಾಹಿ 'ಯುವ' ಅಭಿಮಾನಿ ಯಾರು ಗೊತ್ತೇ?
(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)