ಟಿ20 ವಿಶ್ವಕಪ್ ಈ ವರ್ಷದ ಮಹತ್ವದ ಕ್ರಿಕೆಟ್ ಟೂರ್ನಿಯಲ್ಲಿ ಒಂದು. ಭಾರತದಲ್ಲಿ ನಡೆಯಬೇಕಿದ್ದ ಈ ಟೂರ್ನಿಯನ್ನು ಈಗ ಯುಎಇಗೆ ಸ್ಥಳಾಂತರಿಸಲಾಗಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದಲ್ಲಿ ಆಟಗಾರರ ಕ್ರಮಾಂಕದ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ಸರಣಿಯ ಸಂದರ್ಭದಲ್ಲಿ ಚುಟುಕು ಮಾದರಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಸಂಜಯ್ ಮಂಜ್ರೇಕರ್ ತಮ್ಮ ಪೂರಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರೆ ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ ಆಯ್ಕೆಯಾಗಿರಲಿದೆ ಎಂದು ಮಂಜ್ರೇಕರ್ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾ ವಿರುದ್ಧದ ಸರಣಿ ಭಾರತದ ಪಾಲಿಗೆ ಹೆಚ್ಚು ಮಹತ್ವ ಯಾಕೆ ಗೊತ್ತಾ!
"ನನ್ನ ಪ್ರಕಾರ ವಿರಾಟ್ ಕೊಹ್ಲಿ ಆರಂಭಿಕನಾಗಿ ಕಣಕ್ಕಿಳಿದರೆ ಸೂರ್ಯಕುಮಾರ್ ಯಾದವ್ ಮೂರನೇ ಕ್ರಮಾಂಕಕ್ಕೆ ಆಡಲು ಮುಂಚೂಣಿಯಲ್ಲಿರುವ ಆಟಗಾರ. ಆತ ಆ ಕ್ರಮಾಂಕಕ್ಕೆ ಉಳಿದ ಎಲ್ಲಾ ಆಟಗಾರಿಗಿಂತಲೂ ಸೂಕ್ತವೆನಿಸುತ್ತಾರೆ" ಎಂದು ಮಂಜ್ರೇಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಆದರೆ ಕೆಎಲ್ ರಾಹುಲ್ಗೆ ಯಾವ ಕ್ರಮಾಂಕವನ್ನು ನೀಡುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ಮೂರನೇ ಕ್ರಮಾಂಕ ಸೂರ್ಯಕುಮಾರ್ಗೆ ಹೆಚ್ಚು ಸೂಕ್ತವಾಗುತ್ತದೆ. ಐಪಿಎಲ್ ಟೂರ್ನಿಯುದ್ದಕ್ಕೂ ಆ ರೀತಿಯಾಗಿ ಆಟವನ್ನು ಪ್ರದರ್ಶಿಸುವ ಅತ್ಯಂತ ಅಪರೂಪದ ಆಟಗಾರ ಆತ. ಅಂತಾ ಆಟಗಾರನನ್ನು ನಾನು ನೋಡಲು ಬಯಸುತ್ತೇನೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.
ಇನ್ನು ಇದೇ ಸಂದರ್ಭದಲ್ಲಿ ಅವರು ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮಧ್ಯೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದ್ದಾರೆ. ಸ್ಥಿರ ಪ್ರದರ್ಶನದ ದೃಷ್ಟಿಯಲ್ಲಿ ಇಶಾನ್ ಕಿಶನ್ ಹೆಚ್ಚು ಸೂಕ್ತವೆನಿಸಬಲ್ಲ ಆಟಗಾರ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಒಮಾನ್ ಹಾಗೂ ಯುಎಇಗೆ ಸ್ಥಳಾಂತರವಾಗಿದೆ. ಅಕ್ಟೋಬರ್ 17ರಿಂದ ಈ ಟಿ20 ವಿಶ್ವಕಪ್ ಆರಂಭವಾಗಲಿದೆ.