ಕೋವಿಡ್-19 ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದ ರಣಜಿ ಟ್ರೋಫಿಯನ್ನ ಎರಡು ಹಂತಗಳಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಮೊದಲ ಹಂತವು ಇಂಡಿಯನ್ ಪ್ರೀಮಿಯಲ್ ಲೀಗ್ (2022) ಸೀಸನ್ಗೂ ಮೊದಲು ಮತ್ತು ಎರಡನೇ ಹಂತವು ಐಪಿಎಲ್ 15ನೇ ಸೀಸನ್ ನಂತರ ನಡೆಸಲು ತೀರ್ಮಾನಿಸಲಾಗಿದೆ. ರಣಜಿ ಟ್ರೋಫಿಯ ನಾಕೌಟ್ ಪಂದ್ಯಗಳು ಎರಡನೇ ಹಂತದಲ್ಲಿ ನಡೆಯಲಿದೆ.
ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಟ್ವಿಟ್ಟರ್ನಲ್ಲಿ ರಣಜಿ ಟೂರ್ನಿ ಕುರಿತಾಗಿ ಪ್ರತಿಕ್ರಿಯಿಸಿದ್ದು, ರಣಜಿ ಟ್ರೋಫಿಯ ಮಹತ್ವದ ಕುರಿತು ಸಾರಿದ್ದಾರೆ. ಇದು ಭಾರತ ಕ್ರಿಕೆಟ್ನ ಬೆನ್ನುಮೂಳೆಯಿದ್ದಂತೆ, ಒಂದು ವೇಳೆ ನೀವು ರಣಜಿ ಟ್ರೋಫಿಯನ್ನ ನಿರ್ಲಕ್ಷಿಸಿದ್ರೆ, ಭಾರತ ಕ್ರಿಕೆಟ್ನ ಬೆನ್ನುಲುಬು ಇಲ್ಲದಂತಾಗುತ್ತದೆ ಎಂದಿದ್ದಾರೆ.
ರಣಜಿ 2022: ಎರಡು ಹಂತದಲ್ಲಿ ನಡೆಯಲಿದೆ ರಣಜಿ ಟ್ರೋಫಿ: ಐಪಿಎಲ್ ಬಳಿಕ ನಾಕೌಟ್
"ರಣಜಿ ಟ್ರೋಫಿ ಭಾರತೀಯ ಕ್ರಿಕೆಟ್ನ ಬೆನ್ನೆಲುಬು. ನೀವು ಅದನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ ಕ್ಷಣದಲ್ಲಿ ನಮ್ಮ ಕ್ರಿಕೆಟ್ ಬೆನ್ನುಮೂಳೆಯಿಲ್ಲದಾಗುತ್ತದೆ" ಎಂದು ರವಿಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಕೂಡ ರಣಜಿ ಟ್ರೋಫಿಯ ಮಹತ್ವದ ಕುರಿತು ಮಾತನಾಡಿದ್ದಾರೆ. ಹರ್ಷ ಬೋಗ್ಲೆ ಭಾರತೀಯ ಕ್ರಿಕೆಟ್ ಮಂಡಳಿಯನ್ನ (ಬಿಸಿಸಿಐ) ಹೊಗಳಿದ್ದು, ರಣಜಿ ಟ್ರೋಫಿಯನ್ನ ಆಯೋಜಿಸುವ ಮೂಲಕ ಉತ್ತಮ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.
''ರಣಜಿ ಟ್ರೋಫಿಯನ್ನು ಮುನ್ನಡೆಸಲು ಪ್ರಯತ್ನಿಸುತ್ತಿರುವ ಅತ್ಯುತ್ತಮ ಹೆಜ್ಜೆ ಇದಾಗಿದೆ. ಇದು ಪ್ರಥಮ ದರ್ಜೆ ಕ್ರಿಕೆಟಿಗರಿಗೆ ಮತ್ತು ಭಾರತೀಯ ಕ್ರಿಕೆಟ್ಗೆ ತುಂಬಾ ಅಗತ್ಯವಾಗಿತ್ತು" ಎಂದು ಹರ್ಷಾ ಭೋಗ್ಲೆ ಟ್ವೀಟ್ ಮಾಡಿದ್ದಾರೆ.
ಜಯ್ ಶಾ ತಮ್ಮ ಪ್ರಕಟಣೆಯಲ್ಲಿ "ರಣಜಿ ಟ್ರೋಫಿ ನಮಗೆ ಅತ್ಯಂತ ಪ್ರತಿಷ್ಠಿತ ದೇಶೀಯ ಸ್ಪರ್ಧೆಯಾಗಿದೆ. ಇದು ಪ್ರತಿ ವರ್ಷ ಭಾರತೀಯ ಕ್ರಿಕೆಟ್ಗೆ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ನೀಡುತ್ತದೆ. ಈ ಅತ್ಯುನ್ನತ ಟೂರ್ನಿಯ ಹಿತಾಸಕ್ತಿಯನ್ನು ಕಾಪಾಡಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ" ಎಂದು ತಿಳಿಸಿದ್ದಾರೆ.
ಏತನ್ಮಧೆ ಐಪಿಎಲ್ 15ನೇ ಸೀಸನ್ ಮಾರ್ಚ್ 2022ರ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.