ಫಿಟ್ ಆಗಲು ಬುಮ್ರಾ ಕಠಿಣ ಅಭ್ಯಾಸ
2023ರ ಜನವರಿಯ ಆರಂಭದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಬುಮ್ರಾ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು, ಮುಂಬೈನಲ್ಲಿ ಅಭ್ಯಾಸದ ವೇಳೆ ಅವರಿಗೆ ಮತ್ತೆ ಬೆನ್ನಿನಲ್ಲಿ ನೋವು ಕಾಣಿಸಕೊಂಡ ಕಾರಣ ಸರಣಿಯಿಂದ ಹೊರಗಿಡಲಾಯಿತು.
ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಬುಮ್ರಾ ವಿಚಾರದಲ್ಲಿ ಯಾವುದೇ ಅವಸರದ ನಿರ್ಣಯ ತೆಗೆದುಕೊಳ್ಳದಿರಲು ಬಿಸಿಸಿಐ ನಿರ್ಧರಿಸಿದೆ. ಬುಮ್ರಾ ಪುನರ್ವಸತಿಯನ್ನು ಮುಂದುವರೆಸಿದ್ದಾರೆ, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ)ಯಲ್ಲಿ ನೆಟ್ಸ್ನಲ್ಲಿ ಇತ್ತೀಚೆಗೆ ಬೌಲಿಂಗ್ ಅಭ್ಯಾಸ ಮಾಡಿದರು.
ಅವಸರ ಮಾಡಲು ಸಾಧ್ಯವಿಲ್ಲ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಬುಮ್ರಾ ಫಿಟ್ನೆಸ್ ವಿಚಾರದ ಬಗ್ಗೆ ಮಾತನಾಡಿದ್ದರು. ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದ ಬಳಿಕ ಮಾತನಾಡಿದ್ದ ಅವರು, ತಂಡದ ಮ್ಯಾನೇಜ್ಮೆಂಟ್ ಎನ್ಸಿಎ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ಹೇಳಿದ್ದರು.
"ಬುಮ್ರಾ ಫಿಟ್ನೆಸ್ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಪಂದ್ಯಗಳಿಗೆ ಮರಳುವ ಬಗ್ಗೆ ವಿಶ್ವಾಸವಿದೆ. ಆದರೆ, ಬೆನ್ನಿನ ಗಾಯಗಳು ಅಪಾಯಕಾರಿಯಾಗಿದ್ದು, ಈ ವಿಚಾರದಲ್ಲಿ ಅವಸರ ಮಾಡಲಾಗದು. ಬುಮ್ರಾ ಫಿಟ್ ಆಗಲು ಬೇಕಾದಷ್ಟು ಸಮಯವನ್ನು ವೈದ್ಯಕೀಯ ತಂಡ ನೀಡುತ್ತದೆ" ಎಂದು ಹೇಳಿದ್ದರು.
ಸರಣಿ ಗೆಲ್ಲುವುದು ಭಾರತಕ್ಕೆ ಬಹಳ ಮುಖ್ಯ
ಬಾರ್ಡರ್-ಗವಾಸ್ಕರ್ ಟ್ರೋಫಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಾಗಿದೆ. 2004 ರ ನಂತರ ಭಾರತ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಸೋತಿಲ್ಲ, ಅದೇ ದಾಖಲೆಯನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.
ಕಳೆದ ಬಾರಿಯ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ಜಯ ಸಾಧಿಸಿತ್ತು. ಈ ಬಾರಿ ಕೂಡ ಭಾರತ ಟೆಸ್ಟ್ ಸರಣಿಯನ್ನು ಗೆಲ್ಲುವುದು ಮುಖ್ಯವಾಗಿದೆ. ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಬೇಕೆಂದರೆ ಭಾರತ 2-0 ಅಥವಾ 3-1 ರಿಂದ ಸರಣಿಯನ್ನು ಗೆಲ್ಲಬೇಕು.
ಆಸ್ಟ್ರೇಲಿಯಾ ಈಗಾಗಲೇ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಭಾರತದ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವುದು ಅದಕ್ಕೆ ಪ್ರತಿಷ್ಟೆಯಾಗಿದೆ. ಸರಣಿಯ ಮೊದಲ ಟೆಸ್ಟ್ ಫೆಬ್ರವರಿ 9 ರಂದು ನಾಗ್ಪುರದಲ್ಲಿ ಆರಂಭವಾಗಲಿದೆ.
ಮೊದಲ ಎರಡು ಟೆಸ್ಟ್ಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಸೂರ್ಯಕುಮಾರ್ ಯಾದವ್.