ರಿಷಭ್ ಪಂತ್ ಏಕದಿನ ತಂಡದಿಂದ ಬಿಡುಗಡೆ
ರಿಷಭ್ ಪಂತ್ ಏಕೆ ಆಡುವುದಿಲ್ಲ ಎಂಬುದಕ್ಕೆ ರೋಹಿತ್ ಶರ್ಮಾ ಯಾವುದೇ ವಿವರಣೆ ನೀಡಲಿಲ್ಲ. ಆದರೆ ಕೆಲವೇ ಕ್ಷಣಗಳ ನಂತರ ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ನಂತರ ರಿಷಭ್ ಪಂತ್ ಅವರನ್ನು ಏಕದಿನ ತಂಡದಿಂದ ಬಿಡುಗಡೆ ಮಾಡಲಾಗಿದೆ. ಟೆಸ್ಟ್ ಸರಣಿಗೂ ಮುನ್ನ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿತು.
ಇದೀಗ ಭಾರತ ಮತ್ತೊಬ್ಬ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರು ಸಹ ಆಟಗಾರ ಮತ್ತು ಸಹ ವಿಕೆಟ್ ಕೀಪರ್ ರಿಷಭ್ ಪಂತ್ ಬೆಂಬಲಕ್ಕೆ ಧಾವಿಸಿದ್ದು, ಪಂತ್ಗೆ ಪ್ರದರ್ಶನ ನೀಡಲು ಇನ್ನೂ ಅವಕಾಶವನ್ನು ನೀಡಬೇಕಾಗಿದೆ ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಎರಡು ಸರಣಿಗಳಲ್ಲಿ ಕಳಪೆ ಫಾರ್ಮ್
ರಿಷಭ್ ಪಂತ್ ಇತ್ತೀಚೆಗೆ ಬ್ಯಾಟಿಂಗ್ ಫಾರ್ಮ್ಗಾಗಿ ಕಷ್ಟಪಡುತ್ತಿದ್ದಾರೆ. ಅವರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಗಳಲ್ಲಿ ಕಳಪೆ ಫಾರ್ಮ್ ಮುಂದುವರೆಸಿದರು.
ಕ್ರಿಕ್ಬಜ್ನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಟಿ20 ಪಂದ್ಯಗಳಲ್ಲಿನ ಅವರ ಅಂಕಿ-ಸಂಖ್ಯೆಗಳ ಆಧಾರದ ಮೇಲೆ ಏಕದಿನ ಪಂದ್ಯಗಳಲ್ಲಿ ಪಂತ್ ಅವರ ಪ್ರದರ್ಶನವನ್ನು ನಿರ್ಣಯಿಸದಂತೆ ಟೀಕಾಕಾರರಿಗೆ ಒತ್ತಾಯಿಸಿದ್ದು, 50 ಓವರ್ಗಳ ಸ್ವರೂಪದಲ್ಲಿ ರಿಷಭ್ ಪಂತ್ನ ರನ್ಗಳನ್ನು ಎತ್ತಿ ತೋರಿಸಿದ ದಿನೇಶ್ ಕಾರ್ತಿಕ್, ಟೀಕೆಗಳು ಸರಿಯಾಗಿಲ್ಲ ಎಂದು ಹೇಳಿದರು.
ಏಕದಿನ ಮತ್ತು ಟಿ20 ಪಂದ್ಯಗಳನ್ನು ಪ್ರತ್ಯೇಕವಾಗಿ ನೋಡಬೇಕಾಗಿದೆ
"ರಿಷಭ್ ಪಂತ್ ವಿಚಾರವಾಗಿ ಏಕದಿನ ಮತ್ತು ಟಿ20 ಪಂದ್ಯಗಳನ್ನು ಪ್ರತ್ಯೇಕವಾಗಿ ನೋಡಬೇಕಾಗಿದೆ. ಏಕದಿನ ಕ್ರಿಕೆಟ್ನ ಕೊನೆಯ 10 ಇನ್ನಿಂಗ್ಸ್ಗಳಲ್ಲಿ ಅವರು 45-ಪ್ಲಸ್ ಸರಾಸರಿ ಹೊಂದಿದ್ದಾರೆ. ಅವರು ಇಂಗ್ಲೆಂಡ್ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ಅಜೇಯ 125 ರನ್ ಗಳಿಸಿದರು. ಆದ್ದರಿಂದ ಅವನು ತಂಡಕ್ಕಾಗಿ ತುಂಬಾ ಚೆನ್ನಾಗಿ ಆಡಿದ್ದಾನೆ. ಹಾಗಾಗಿ ಏಕದಿನ ಕ್ರಿಕೆಟ್ನಿಂದ ದೂರ ಇರಬೇಕು ಎಂದು ಹೇಳಲು ಸಾಧ್ಯವಿಲ್ಲ," ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟರು.
ಜನರು ರಿಷಭ್ ಪಂತ್ಗೆ ಪ್ರದರ್ಶನ ನೀಡಲು ಇನ್ನೂ ಅವಕಾಶವನ್ನು ನೀಡಬೇಕಾಗಿದೆ. ಯಾವುದೋ ಒಂದು ಮಾದರಿಯಲ್ಲಿ ರಿಷಭ್ ಪಂತ್ ಪ್ರದರ್ಶನ ನೀಡುತ್ತಿಲ್ಲ ಎಂಬ ಕಾರಣಕ್ಕೆ ಅವರಿಂದ ಹಿಂದೆ ಸರಿಯುವುದು ನ್ಯಾಯವಲ್ಲ ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ತಿಳಿಸಿದರು.