ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಟೀಕೆ
ಮುರಿಯದ ಹತ್ತನೇ ವಿಕೆಟ್ಗೆ ಮಿರಾಜ್ ಮತ್ತು ಮುಸ್ತಾಫಿಜುರ್ ರಹಮಾನ್ ಜೊತೆಗೂಡಿ 51 ರನ್ ಗಳಿಸಿದರು. ಒಂದು ಹಂತದಲ್ಲಿ ಭಾರತವು ಮೇಲುಗೈ ಹೊಂದಿದ್ದರೂ ಕೊನೆಯ ವಿಕೆಟ್ ಪಡೆಯಲು ವಿಫಲವಾಯಿತು. ಭಾರತದ ಈ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟಿಗರು ಮತ್ತು ವಿಶ್ಲೇಷಕರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಸ್ಪೋರ್ಟ್ಸ್ಕೀಡಾ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಪೋಸ್ಟ್ ಹಾಕಿದ್ದು, ರೋಹಿತ್ ಶರ್ಮಾ ನಾಯಕತ್ವಕ್ಕೆ ರೇಟಿಂಗ್ ನೀಡಲು ಅಭಿಮಾನಿಗಳನ್ನು ಕೇಳಿದೆ. ಇದೇ ವೇಳೆ ತನ್ನ ಮಾಜಿ ಸಹ ಆಟಗಾರನ ಬೆಂಬಲಕ್ಕೆ ನಿಂತ ಯುವರಾಜ್ ಸಿಂಗ್ ಟ್ವಿಟ್ಟರ್ನಲ್ಲಿ "10ಕ್ಕೆ 10' ಎಂದು ಪ್ರತಿಕ್ರಿಯಿಸಿದ್ದಾರೆ.
ಸೋತಿರುವುದಕ್ಕೆ ಯಾವುದೇ ಕ್ಷಮೆ ಇಲ್ಲ
ರೋಹಿತ್ ಶರ್ಮಾ ನಾಯಕತ್ವದ ಹೊರತಾಗಿ, ಅವರ ಕಳಪೆ ಬ್ಯಾಟಿಂಗ್ ಫಾರ್ಮ್ನಿಂದಲೂ ಟೀಕೆಗೆ ಗುರಿಯಾಗಿದ್ದಾರೆ. ಮೂರು ಮಾದರಿಯ ಕ್ರಿಕೆಟ್ನ ನಾಯಕತ್ವದ ಒತ್ತಡದಿಂದ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಅವರೇ ತಿಳಿಸಬೇಕಿದೆ. ಢಾಕಾದ ಪಂದ್ಯದಲ್ಲಿ 31 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದ ನಂತರ ಅವರ ಕಳಪೆ ಬ್ಯಾಟಿಂಗ್ ಮತ್ತೆ ಮುಂದುವರೆಯಿತು.
ಬಾಂಗ್ಲಾದೇಶದ ವಿರುದ್ಧದ ಮೊದಲ ಏಕದಿನ ಪಂದ್ಯದ ಸೋಲಿನ ನಂತರ ಪ್ರತಿಕ್ರಿಯಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಅಂತಹ ಪರಿಸ್ಥಿತಿಗಳಲ್ಲಿ ಆಡುವ ಅಭ್ಯಾಸವಿದ್ದರೂ, ಸೋತಿರುವುದಕ್ಕೆ ಯಾವುದೇ ಕ್ಷಮೆ ಇಲ್ಲ ಎಂದು ಒಪ್ಪಿಕೊಂಡರು.
30-40 ರನ್ ಗಳಿಸಿದ್ದರೆ ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿತ್ತು
35 ವರ್ಷ ವಯಸ್ಸಿನ ರೋಹಿತ್ ಶರ್ಮಾ ಅವರು ಭಾರತ ತಂಡದ ಬ್ಯಾಟ್ಸ್ಮನ್ಗಳು ಸ್ಕೋರ್ ಬೋರ್ಡ್ನಲ್ಲಿ ರನ್ ಗಳಿಸಲು ವಿಫಲವಾಗಿರುವುದನ್ನು ಒಪ್ಪಿಕೊಂಡರು ಮತ್ತು ಕಳಪೆ ಬ್ಯಾಟಿಂಗ್ ಬಗ್ಗೆ ಕೇಳಿದಾಗ ಅವರು ಹೀಗೆ ಉತ್ತರಿಸಿದರು.
"ಇಷ್ಟು ರನ್ ಸಾಕಾಗಲಿಲ್ಲ. ಇನ್ನು 30-40 ರನ್ ಗಳಿಸಿದ್ದರೆ ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿತ್ತು. ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಜೊತೆಯಾಟದಲ್ಲಿ ನಾವು ಇನ್ನೂ ದೊಡ್ಡ ಮೊತ್ತ ಗಳಿಸಬಹುದಿತ್ತು. ದುರದೃಷ್ಟವಶಾತ್, ನಾವು ಮಧ್ಯಮ ಕ್ರಮಾಂಕದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿದ್ದರಿಂದ ಅದು ಆಗಲಿಲ್ಲ," ಎಂದರು.
ಮೂರು ಪಂದ್ಯಗಳ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ಭಾರತ, ಡಿಸೆಂಬರ್ 7ರಂದು ಬುಧವಾರ ಢಾಕಾದಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.