70 ಎಸೆತಗಳಲ್ಲಿ 73 ರನ್ ಗಳಿಸಿದ ಕೆಎಲ್ ರಾಹುಲ್
ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿದಾಗ ಬಾಂಗ್ಲಾದೇಶದ ಬೌಲರ್ಗಳು ಪ್ರವಾಸಿ ತಂಡದ ಬ್ಯಾಟರ್ಗಳನ್ನು ಕಟ್ಟಿಹಾಕಿದರು ಮತ್ತು ಮೊದಲ ಹತ್ತು ಓವರ್ಳಲ್ಲಿ 49 ರನ್ಗೆ 3 ವಿಕೆಟ್ ಪಡೆದು ನಿಯಂತ್ರಣ ಸಾಧಿಸಿದರು. ಈ ವೇಳೆ ಕೆಎಲ್ ರಾಹುಲ್ ಭಾರತದ ಮೊತ್ತವನ್ನು 152 ರನ್ಗೆ ಏರಿಸಲು ಶ್ರೇಯಸ್ ಅಯ್ಯರ್ ಮತ್ತು ವಾಷಿಂಗ್ಟನ್ ಸುಂದರ್ ಜೊತೆ ಉತ್ತಮ ಜೊತೆಯಾಟವಾಡಿದರು.
ಆದರೆ ಈ ವೇಳೆ ಭಾರತ ತಂಡ ದೊಡ್ಡ ಕುಸಿತ ಕಂಡಿತು. ಕೇವಲ 4 ರನ್ಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿದ್ದು, ಭಾರತದ ರನ್ ಓಟಕ್ಕೆ ಬ್ರೇಕ್ ಬಿತ್ತು. ಈ ವೇಳೆ 70 ಎಸೆತಗಳಲ್ಲಿ 73 ರನ್ ಗಳಿಸಿದ್ದ ಕೆಎಲ್ ರಾಹುಲ್ ಔಟಾಗಿದ್ದು ಭಾರತಕ್ಕೆ ನಷ್ಟ ಉಂಟುಮಾಡಿತು. ಅಂತಿಮವಾಗಿ ಭಾರತ 41.2 ಓವರ್ಗಳಲ್ಲಿ 186 ರನ್ಗಳಿಗೆ ಆಲೌಟ್ ಆಯಿತು.
ಮೆಹಿದಿ ಹಸನ್ ಅವರು 39 ಎಸೆತಗಳಲ್ಲಿ 38 ರನ್
ಬಾಂಗ್ಲಾದೇಶ ಪರ ಶಕೀಬ್ ಅಲ್ ಹಸನ್ ತಮ್ಮ ನಾಲ್ಕನೇ ಏಕದಿನ ಐದು ವಿಕೆಟ್ ಗೊಂಚಲು ಮತ್ತು ಭಾರತದ ವಿರುದ್ಧ ಚೊಚ್ಚಲ ಐದು ವಿಕೆಟ್ ಸಾಧನೆ ಮಾಡಿದರು. ಎಬಾಡೋಟ್ ಹೊಸೈನ್ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಇನ್ನು ಬಾಂಗ್ಲಾದೇಶದ ಬ್ಯಾಟಿಂಗ್ ವೇಳೆ 95 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದರೂ, ಆತಿಥೇಯ ತಂಡ ಗೆಲುವಿನ ಕಡೆಗೆ ಹೋಗುತ್ತಿತ್ತು. ಇನ್ನೂ ಏಳು ವಿಕೆಟ್ಗಳು ಕೈಯಲ್ಲಿದ್ದವು ಮತ್ತು ಗೆಲುವಿಗೆ 92 ರನ್ಗಳ ಅಗತ್ಯವಿತ್ತು. ಆದರೆ 136 ರನ್ಗಳಾಗುವಷ್ಟರಲ್ಲಿ ಮತ್ತೆ 9 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ವೇಳೆ ಮೆಹಿದಿ ಹಸನ್ ಅವರು 39 ಎಸೆತಗಳಲ್ಲಿ 38 ರನ್ ಗಳಿಸಿ ಪಂದ್ಯವನ್ನು ಭಾರತದಿಂದ ಕಿತ್ತುಕೊಂಡರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಬಾಂಗ್ಲಾದೇಶದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋಲಲು ಈ ಮೂರು ಪ್ರಮುಖ ತಪ್ಪುಗಳೇ ಕಾರಣವಾದವು. ಮುಂದೆ ಓದಿ..
ಭಾರತದ ಕಳಪೆ ಕ್ಷೇತ್ರರಕ್ಷಣೆ- ಕ್ಯಾಚ್ ಬಿಟ್ಟು ಪಂದ್ಯ ಸೋತರು
ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನಾಗಿದ್ದಾಗ ಕ್ಷೇತ್ರರಕ್ಷಣೆಯಲ್ಲಿ ವಿಶ್ವದ ಅಗ್ರ ತಂಡವಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಪ್ರತಿ ಪಂದ್ಯದಲ್ಲಿ ಒಂದಿಲ್ಲೊಂದು ಫೀಲ್ಡಿಂಗ್ ಅಚಾತುರ್ಯ ನಡೆಯುತ್ತಲೇ ಇವೆ. ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಅವರು ನೀಡಿದ ಕ್ಯಾಚ್ ಅನ್ನು ಅದ್ಭುತ ಡೈವಿಂಗ್ ಮೂಲಕ ಹಿಡಿದ ವಿರಾಟ್ ಕೊಹ್ಲಿ ಹೊರತುಪಡಿಸಿ, ಭಾರತ ತಂಡದ ಫೀಲ್ಡಿಂಗ್ ತೀರಾ ಕಳಪೆಯಾಗಿತ್ತು.
43ನೇ ಓವರ್ನಲ್ಲಿ ವಿಕೆಟ್ಕೀಪರ್ ಕೆಎಲ್ ರಾಹುಲ್ ಅವರು ಮೆಹಿದಿ ಹಸನ್ ಅವರ ಕ್ಯಾಚ್ ಬಿಟ್ಟಿದ್ದು, ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿತು. ಕೀಪಿಂಗ್ ಗ್ಲೌಸ್ ಇದ್ದರೂ ಕ್ಯಾಚ್ ಜೊತೆಗೆ ಮ್ಯಾಚ್ ಕೂಡ ಕೈಬಿಟ್ಟಂತಾಯಿತು. ನಂತರದ ಎಸೆತದಲ್ಲಿ ಮೆಹಿದಿ ಹಸನ್ ಥರ್ಡ್ ಮ್ಯಾನ್ನಲ್ಲಿ ಹೊಡೆದಾಗ ವಾಷಿಂಗ್ಟನ್ ಸುಂದರ್ ಅವರ ಮುಂದೆ ಪಿಚ್ ಆಯಿತು. ಸ್ವಲ್ಪ ಪ್ರಯತ್ನಪಟ್ಟಿದ್ದರೂ ಸುಲಭ ಕ್ಯಾಚ್ ಆಗುತ್ತಿತ್ತು. ಪಂದ್ಯದ ಸೋಲಿಗೆ ಈ ಎರಡು ಕ್ಯಾಚ್ ಕೈಬಿಟ್ಟಿರುವುದು ಕಾರಣವಾಗಿದೆ.
ಅಂತಿಮ ಓವರ್ಗಳಲ್ಲಿ ನೀರಸ ಬೌಲಿಂಗ್ ಪ್ರದರ್ಶನ
ಭಾರತ ಬ್ಯಾಟಿಂಗ್ನಲ್ಲಿ ಕೇವಲ 187 ರನ್ ಗಳಿಸಿದ್ದರೂ, ಅದನ್ನು ಡಿಫೆಂಡ್ ಮಾಡಿಕೊಳ್ಳಲು ಆರಂಭದಿಂದಲೇ ಬಾಂಗ್ಲಾದೇಶದ ಬ್ಯಾಟರ್ಗಳಿಗೆ ಬ್ರೇಕ್ ಹಾಕಲು ಭಾರತೀಯ ಬೌಲರ್ಗಳು ಪ್ರಯತ್ನಿಸಿದರು. ಆದರೆ ಆತಿಥೇಯ ಬಾಂಗ್ಲಾದೇಶ 136 ರನ್ಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಭಾರತಕ್ಕೆ ಸುಲಭ ಗೆಲುವಿನ ಅವಕಾಶವಿತ್ತು.
ಕೊನೆಯ 10 ಓವರ್ಗಳಲ್ಲಿ ಬಾಂಗ್ಲಾ ತಂಡಕ್ಕೆ 51 ರನ್ಗಳ ಅವಶ್ಯಕತೆ ಇತ್ತು. ಆದರೆ ಭಾರತ ಗೆಲುವಿಗೆ ಕೇವಲ ಒಂದು ವಿಕೆಟ್ ಬೇಕಿತ್ತು. ಅದೂ ಬಾಂಗ್ಲಾದ ಬಾಲಂಗೋಚಿಗಳು ಬ್ಯಾಟಿಂಗ್ ಮಾಡುತ್ತಿದ್ದರು. ಭಾರತದ ಬೌಲರ್ಗಳು ವಿಕೆಟ್ ತೆಗೆಯಲು ವಿಫಲರಾದರು ಮತ್ತು ಸುಲಭವಾಗಿ ರನ್ ಬಿಟ್ಟುಕೊಟ್ಟರು. ಇದು ಭಾರತದ ಸೋಲಿಗೆ ಮತ್ತೊಂದು ಕಾರಣವಾಯಿತು.
ಭಾರತದ ಕಳಪೆ ಬ್ಯಾಟಿಂಗ್ ಪ್ರದರ್ಶನ
ಬಾಂಗ್ಲಾದೇಶದ ಬೌಲಿಂಗ್ಗೆ ಹೋಲಿಸಿದರೆ ಭಾರತದ ಬ್ಯಾಟಿಂಗ್ ಅತ್ಯಂತ ಬಲಿಷ್ಠವಾಗಿತ್ತು. ಆದರೆ ಭಾನುವಾರ ಢಾಕಾದಲ್ಲಿ ನಡೆದ ಪಂದ್ಯ ಮಾತ್ರ ಭಾರತೀಯ ಬ್ಯಾಟಿಂಗ್ಗೆ ಕಳಂಕ ತರುವ ದಿನವಾಗಿತ್ತು.
ಭಾರತವು ಮೊದಲ 11 ಓವರ್ಗಳಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್ಗಳನ್ನು ಕಳೆದುಕೊಂಡಿತು. ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ ಸೇರಿದಂತೆ ಮೂವರೂ ಅನುಭವಿ ಬ್ಯಾಟ್ಸ್ಮನ್ಗಳು ಬಾಂಗ್ಲಾ ಸ್ಪಿನ್ನರ್ಗಳ ಬಲೆಗೆ ಬಿದ್ದರು.
ಇನ್ನು ಫಾರ್ಮ್ನಲ್ಲಿರುವ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 39 ಎಸೆತ ಎದುರಿಸಿ ಅತ್ಯುತ್ತಮವಾಗಿ ಆಡುತ್ತಿದ್ದರು. ಅವರ ವಿಕೆಟ್ ಬೀಳುತ್ತಿದ್ದಂತೆ ಭಾರತದ ಬಲಿಷ್ಠ ಬ್ಯಾಟಿಂಗ್ ವಿಭಾಗ ಪೆವಿಲಿಯನ್ ಸೇರಿತ್ತು. ಕೆಎಲ್ ರಾಹುಲ್ ಮಾತ್ರ ತಂಡದ ಪರ ಗರಿಷ್ಠ ರನ್ ಗಳಿಸಿದರು. 70 ಎಸೆತಗಳಲ್ಲಿ 73 ರನ್ ಗಳಿಸಿಲ್ಲದಿದ್ದರೆ ಭಾರತದ ಸ್ಥಿತಿ ಇನ್ನೂ ಶೋಚನಿಯವಾಗಿರುತ್ತಿತ್ತು.