ಲಂಡನ್, ಸೆಪ್ಟೆಂಬರ್ 1: ನಾಲ್ಕನೇ ಟೆಸ್ಟ್ಗೂ ಮುನ್ನ ಟೀಮ್ ಇಂಡಿಯಾಗೆ ವೇಗಿ ಪ್ರಸಿದ್ಧ್ ಕೃಷ್ಣ ಸೇರ್ಪಡೆಗೊಂಡಿದ್ದಾರೆ. ಬುಧವಾರ ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದ್ದು ತಂಡದ ಮ್ಯಾನೇಜ್ಮೆಂಟ್ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಈ ಸೇರ್ಪಡೆಯನ್ನು ಮಾಡಿದೆ ಎಂದು ತಿಳಿಸಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಮೀಸಲು ಆಟಗಾರನಾಗಿ ತಂಡದ ಜೊತೆಗಿದ್ದ ಕನ್ನಡಿಗ ವೇಗಿ ಈಗ ನಾಲ್ಕನೇ ಟೆಸ್ಟ್ನ ಆಯ್ಕೆಗೆ ಲಭ್ಯವಾಗಿದ್ದಾರೆ. ಈ ಸೇರ್ಪಡೆಯ ಬಗ್ಗೆ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಭರತ್ ಅರುಣ್ ವಿವರಣೆಯನ್ನು ನೀಡಿದ್ದಾರೆ.
ಟೀಮ್ ಇಂಡಿಯಾದ ಸ್ಕ್ವಾಡ್ಗೆ ಪ್ರಸಿದ್ಧ್ ಕೃಷ್ಣ ಸೇರ್ಪಡೆಯಾಗುತ್ತಿದ್ದಂತೆಯೇ ಓವಲ್ನಲ್ಲಿ ಗುರುವಾರದಿಂದ ಆರಂಭವಾಗುವ ಟೆಸ್ಟ್ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಆದರೆ ಸ್ಕ್ವಾಡ್ಗೆ ಪ್ರಸಿದ್ಧ್ ಕೃಷ್ಣ ಸೇರ್ಪೊಡೆಗೆ ಕಾರಣವೇನೆಂಬ ವಿಚಾರವನ್ನು ಕೋಚ್ ಭರತ್ ಅರುಣ್ ಬಿಚ್ಚಿದ್ದಾರೆ.
ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದಾದ ಟೀಮ್ ಇಂಡಿಯಾದ 3 ಆಟಗಾರರು
ತಂಡದಲ್ಲಿರುವ ವೇಗದ ಬೌಲರ್ಗಳ ಕಾರ್ಯ ಒತ್ತಡವನ್ನು ನಿಭಾಯಿಸುವ ನಿಟ್ಟಿನಲ್ಲಿ ತಂಡಕ್ಕೆ ಪ್ರಸಿದ್ಧ್ ಕೃಷ್ಣ ಅವರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಭರತ್ ಅರುಣ್ ಹೇಳಿಕೆ ನೀಡಿದ್ದಾರೆ. ಪ್ರಸಿದ್ಧ್ ಕೃಷ್ಣ ತಂಡಕ್ಕೆ ಸೇರ್ಪಡೆಯಾಗಲು ಇದೇ ಕಾರಣ ಇದಕ್ಕಿಂತ ಹೆಚ್ಚಿನದ್ದೇನು ಎಂದಿದ್ದಾರೆ ಭರತ್ ಅರುಣ್. "ಇಶಾಂತ್ ಶರ್ಮಾ ಫಾರ್ಮ್ ಸ್ವಲ್ಪಮಟ್ಟಿಗೆ ಕಳವಳಕಾರಿಯಾಗಿದೆ. ಆದರೆ ಈ ವಿಚಾರಗಳನ್ನು ನಾವು ಪರಿಹರಿಸಿಕೊಳ್ಳಬಲ್ಲೆವು. ಪ್ರಸಿದ್ಧ್ ಕೃಷ್ಣ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಭರತ್ ಅರುಣ್ ವಿವರಿಸಿದ್ದಾರೆ.
ಈ ಸರಣಿಯಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಮೊದಲ ಮೂರು ಪಂದ್ಯಗಳಲ್ಲಿ ಕೂಡ ಆಡಿದ್ದಾರೆ. ಯುವ ವೇಗಿ ಮೊಹಮ್ಮದ್ ಸಿರಾಜ್ 2 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಮಧ್ಯೆ ಅನುಭವಿ ಇಶಾಂತ್ ಶರ್ಮಾ ಕೂಡ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದು ಮೂರನೇ ಟೆಸ್ಟ್ನಲ್ಲಿ ಮಿಂಚಲು ಸಂಪೂರ್ಣವಾಗಿ ವಿಫಲವಾಗಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ನಲ್ಲಿ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.
ಪ್ರಸಿದ್ಧ್ ಕೃಷ್ಣ ಸೇರ್ಪಡೆಯೊಂದಿಗೆ ಈ ಸರಣಿಯಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗದ ಸದಸ್ಯರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಈಗಾಗಲೇ ತಂಡದಲ್ಲಿರುವ ಇತರ ವೇಗದ ಬೌಲರ್ಗಳಾಗಿದ್ದಾರೆ.
ನಾಲ್ಕನೇ ಟೆಸ್ಟ್ ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ , ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೃದ್ಧಿಮಾನ್ ಸಾಹಾ (ವಿಕೆಟ್ ಕೀಪರ್), ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್
ಭಾರತದ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ /ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ,ಶಾರ್ದೂಲ್ ಠಾಕೂರ್/ಇಶಾಂತ್ ಶರ್ಮಾ,ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ
ಇಂಗ್ಲೆಂಡ್ ಸಂಭಾವ್ಯ ಆಡುವ ಬಳಗ: ಹಸೀಬ್ ಹಮೀದ್, ಡೇವಿಡ್ ಮಲನ್,ರೋರಿ ಬರ್ನ್ಸ್, ಜೋ ರೂಟ್ (ನಾಯಕ), ಜಾನಿ ಬೈರ್ಸ್ಟೊವ್ (ವಿಕೆಟ್ ಕೀಪರ್), ಡೇನಿಯಲ್ ಲಾರೆನ್ಸ್/ ಒಲ್ಲಿ ಪೋಪ್, ಮೊಯೀನ್ ಅಲಿ, ಒಲ್ಲಿ ರಾಬಿನ್ಸನ್, ಕ್ರಿಸ್ ವೋಕ್ಸ್/ಸ್ಯಾಮ್ ಕರನ್, ಕ್ರೇಗ್ ಓವರ್ಟನ್ ಮತ್ತು ಮಾರ್ಕ್ ವುಡ್