ಆಂಗ್ಲರು ಬೇಕಂತಲೇ ಆ ಓರ್ವ ಆಟಗಾರನನ್ನು ಕೆಣಕಿದರು
ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆಂಗ್ಲರು ಬೇಕಂತಲೇ ಜಸ್ ಪ್ರೀತ್ ಬುಮ್ರಾಗೆ ಬೌನ್ಸರ್ಗಳನ್ನು ಎಸೆಯುವುದರ ಮೂಲಕ ಸಾಕಷ್ಟು ಕೆಣಕಿದರು. ಜಸ್ ಪ್ರೀತ್ ಬುಮ್ರಾಗೆ ಬೇಕಂತಲೇ ಪದೇಪದೇ ಬೌನ್ಸ್ ಎಸೆತಗಳನ್ನು ಇಂಗ್ಲೆಂಡ್ ಬೌಲರ್ಗಳು ಹಾಕುತ್ತಿದ್ದರು ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್ ಹೇಳಿದ್ದಾರೆ. ಇನ್ನೂ ಮುಂದುವರೆದು ಈ ಕುರಿತು ಹೇಳಿಕೆ ನೀಡಿರುವ ಮಾಂಟಿ ಪನೇಸರ್ ಜಸ್ ಪ್ರೀತ್ ಬೂಮ್ರಾ ಬ್ಯಾಟಿಂಗ್ ಮಾಡಲು ಬಂದಾಗ ಇಂಗ್ಲೆಂಡ್ ತಂಡದ ಪ್ರಮುಖ ಕೋಚ್ ಕ್ರಿಸ್ ಸಿಲ್ವರ್ವುಡ್ ಬೇಕಂತಲೇ ಬೌನ್ಸರ್ ಎಸೆಯಲು ಆಂಗ್ಲ ಬೌಲರ್ಗಳಿಗೆ ಹೇಳಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಆಂಗ್ಲರು ಹೆಣೆದಿದ್ದ ಈ ಎಲ್ಲಾ ಯೋಜನೆಗಳೂ ಸಹ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಬ್ಯಾಟಿಂಗ್ ಎದುರುಗಡೆ ನೆಲಕಚ್ಚಿದವು. ಆಂಗ್ಲರು ಕೆಣಕಿದ್ದಕ್ಕೆಲ್ಲಾ ತನ್ನ ಬ್ಯಾಟ್ ಮೂಲಕ ಉತ್ತರ ನೀಡಿದ ಜಸ್ ಪ್ರೀತ್ ಬುಮ್ರಾ ಅಜೇಯ 34 ರನ್ ಬಾರಿಸಿದರು. ಹೀಗೆ ಲಾರ್ಡ್ಸ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಒಂಬತ್ತನೇ ವಿಕೆಟ್ಗೆ ಜಸ್ ಪ್ರೀತ್ ಬೂಮ್ರಾ ಜೊತೆ ಸೇರಿಕೊಂಡ ಮೊಹಮ್ಮದ್ ಶಮಿ ಅಜೇಯ ಅರ್ಧಶತಕ ಚಚ್ಚಿದರು. ಹೀಗೆ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಟೀಮ್ ಇಂಡಿಯಾವನ್ನು 89 ರನ್ಗಳ ಜೊತೆಯಾಟ ಆಡುವುದರ ಮೂಲಕ ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ರಕ್ಷಿಸಿದರು.
ಬುಮ್ರಾನನ್ನು ಕೆಣಕಿದ್ದೇ ಕೊಹ್ಲಿ ಕೋಪಕ್ಕೆ ಪ್ರಮುಖ ಕಾರಣ
ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಎರಡನೇ ಇನ್ನಿಂಗ್ಸ್ನಲ್ಲಿ ಜಸ್ ಪ್ರೀತ್ ಬುಮ್ರಾನನ್ನು ಆಂಗ್ಲ ಆಟಗಾರರು ಪದೇ ಪದೇ ಕೆಣಕಿದ್ದೇ ವಿರಾಟ್ ಕೊಹ್ಲಿ ರೋಷಾವೇಶಕ್ಕೆ ಪ್ರಮುಖ ಕಾರಣ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ. ಜಸ್ ಪ್ರೀತ್ ಬುಮ್ರಾನನ್ನು ಆಂಗ್ಲರು ಕೆಣಕುವ ಮುನ್ನ ವಿರಾಟ್ ಕೊಹ್ಲಿ ಮಾತಿನ ಚಕಮಕಿ ನಡೆಸಿದ್ದರೇ ಹೊರತು ಮಿತಿಮೀರಿ ಎಲ್ಲಿಯೂ ವರ್ತಿಸಿರಲಿಲ್ಲ. ಆದರೆ ಬುಮ್ರಾನನ್ನು ಇಂಗ್ಲೆಂಡ್ ಆಟಗಾರರು ಕೆಣಕಿದ ನಂತರ ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ಆಟಗಾರರ ವಿರುದ್ಧ ಹೆಚ್ಚಾಗಿ ರೋಷಾವೇಶವನ್ನು ಹೊರಹಾಕಿದರು ಎಂದು ಮಾಂಟಿ ಪನೇಸರ್ ಹೇಳಿದ್ದಾರೆ. ಹೌದು ಇಂಗ್ಲೆಂಡ್ ವಿರುದ್ಧದ ಎರಡನೆ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಹೆಚ್ಚೇನೂ ರೋಷವನ್ನು ಹೊರ ಹಾಕಿರಲಿಲ್ಲ, ಆದರೆ ಬುಮ್ರಾನನ್ನು ಗುರಿಯನ್ನಾಗಿಸಿ ಕೆಣಕಿದ್ದ ಆಂಗ್ಲರು ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲು ಕ್ರೀಡಾಂಗಣಕ್ಕೆ ಬಂದ ನಂತರ ವಿರಾಟ್ ಕೊಹ್ಲಿ ಹೆಚ್ಚಾಗಿ ರೋಷಾವೇಷವನ್ನು ಹೊರಹಾಕಿದ್ದನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಹೀಗಾಗಿ ಜಸ್ ಪ್ರೀತ್ ಬುಮ್ರಾನನ್ನು ಕೆಣಕಿ ಇಂಗ್ಲೆಂಡ್ ಆಟಗಾರರು ತಪ್ಪು ಮಾಡಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.
ಕೊಹ್ಲಿ ರೋಷಾವೇಶಕ್ಕೆ ವ್ಯಕ್ತವಾಗಿತ್ತು ಮಿಶ್ರ ಪ್ರತಿಕ್ರಿಯೆ!
ವಿರಾಟ್ ಕೊಹ್ಲಿ ಇಂಗ್ಲೆಂಡ್ ಆಟಗಾರರ ವಿರುದ್ಧ ಯಾವ ರೀತಿ ತಮ್ಮ ರೋಷಾವೇಶವನ್ನು ಹೊರಹಾಕಿದ್ದರು ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯವೇ. ಹೀಗೆ ಇಂಗ್ಲೆಂಡ್ ಆಟಗಾರರ ವಿರುದ್ಧ ರೋಷಾವೇಶವನ್ನು ವ್ಯಕ್ತಪಡಿಸಿದ್ದ ವಿರಾಟ್ ಕೊಹ್ಲಿ ಬಗ್ಗೆ ಮಾಜಿ ಕ್ರಿಕೆಟಿಗರು ಹಾಗೂ ಕ್ರೀಡಾ ಪಂಡಿತರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ 'ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿ ಕ್ರಿಕೆಟಿಗ, ಆತ ಬೇಕಂತಲೇ ಎದುರಾಳಿ ಆಟಗಾರನನ್ನು ನಿಂದಿಸುತ್ತಾನೆ, ನನಗೂ ಸಹ ಈ ಹಿಂದೆ ಇದೇ ರೀತಿ ದಿಗ್ಭ್ರಮೆಗೊಳಗಾಗುವ ಮಟ್ಟಿಗೆ ವಿರಾಟ್ ಕೊಹ್ಲಿ ನಿಂದಿಸಿದ್ದರು' ಎಂದು ಕೊಹ್ಲಿ ವಿರುದ್ಧ ಹೇಳಿಕೆ ನೀಡಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರ ನೀಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಷ್ ಕನೇರಿಯಾ 'ಯಾವಾಗಲೂ ಇಂಗ್ಲೆಂಡ್ ಆಟಗಾರರೇ ಅಧಿಕಾರ ಚಲಾಯಿಸಬೇಕಾ? ನಿಮ್ಮ ತಂಡ ಬಲಿಷ್ಠವಾಗಿದ್ದಾಗ ನೀವು ಬೇರೆ ಆಟಗಾರರ ವಿರುದ್ಧ ರೋಷಾವೇಶ ವ್ಯಕ್ತಪಡಿಸಿ ನಿಂದಿಸುತ್ತಾ ಇದ್ರಿ. ಈಗ ನಿಮಗಿಂತ ಬಲಿಷ್ಠವಾಗಿರುವ ಟೀಮ್ ಇಂಡಿಯಾ ಆಟಗಾರರು ನಿಮ್ಮ ವಿರುದ್ಧ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ, ಹೀಗಾಗಿ ಅದರ ವಿರುದ್ಧ ಮಾತನಾಡುವ ಬದಲು ಅವರ ಕೋಪ ತಾಪವನ್ನು ತಡೆದುಕೊಳ್ಳಿ' ಎಂದು ದಾನಿಶ್ ಕನೇರಿಯಾ ಇಂಗ್ಲೆಂಡ್ ಆಟಗಾರರಿಗೆ ಕುಟುಕಿದರು.