ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಿಂದ ಟೀಮ್ ಇಂಡಿಯಾ ಹಿಂದೆ ಸರಿಯಲು ಕಾರಣ ತಿಳಿಸಿದ ಪೌಲ್ ನ್ಯೂಮನ್
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಪೌಲ್ ನ್ಯೂಮನ್ ಪ್ರಕಾರ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯಲು ಕಾರಣ ಇದೇ ಸೆಪ್ಟೆಂಬರ್ 19ರಿಂದ ಮುಂದುವರಿಯಲಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್. ಹೌದು, ಮುಂದುವರಿಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ಅಂತಿಮ ಟೆಸ್ಟ್ ಪಂದ್ಯವನ್ನು ಆಡದೆ ಟೀಮ್ ಇಂಡಿಯಾ ಆಟಗಾರರು ಯುಎಇ ಪ್ರಯಾಣವನ್ನು ತಡಮಾಡದೆ ಕೈಗೊಂಡರು ಎಂದು ಪೌಲ್ ನ್ಯೂಮನ್ ಹೇಳಿದ್ದಾರೆ.
ರಿಸ್ಕ್ ತೆಗೆದುಕೊಳ್ಳಲು ಭಾರತೀಯರು ಸಿದ್ಧರಿರಲಿಲ್ಲ
ಅಂತಿಮ ಟೆಸ್ಟ್ ಪಂದ್ಯದ ಮುನ್ನಾ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ಭಾರತ ತಂಡದ ಆಟಗಾರರ ವರದಿಗಳು ನೆಗೆಟಿವ್ ಬಂದರೂ ಕೂಡ ಟೀಮ್ ಇಂಡಿಯಾ ತನ್ನ ಆಟಗಾರರನ್ನು ಕಣಕ್ಕಿಳಿಸಲು ಮುಂದಾಗಲಿಲ್ಲ. ಐಪಿಎಲ್ ಪುನಾರಂಭಕ್ಕೆ ಕೇವಲ 10 ದಿನಗಳು ಬಾಕಿ ಇದ್ದ ಕಾರಣದಿಂದಲೇ ವರದಿಗಳು ನೆಗೆಟಿವ್ ಬಂದರೂ ಕೂಡ ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನಾಡದೇ ಯುಎಇ ಪ್ರಯಾಣವನ್ನು ಕೈಗೊಂಡರು ಎಂದು ಪೌಲ್ ನ್ಯೂಮನ್ ವ್ಯಂಗ್ಯವಾಡಿದ್ದಾರೆ.
ಕೊರೊನಾ ಬರಲು ಭಾರತೀಯರೇ ಕಾರಣ
ಇನ್ನೂ ಮುಂದುವರೆದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ಪೌಲ್ ನ್ಯೂಮನ್ ಕೊರೊನಾವೈರಸ್ ಬರುವುದಕ್ಕೆ ಟೀಮ್ ಇಂಡಿಯಾವೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. ಅಂತಿಮ ಟೆಸ್ಟ್ ಪಂದ್ಯ ಆರಂಭವಾಗುವುದಕ್ಕೂ ಮುನ್ನ ಲಂಡನ್ ನಗರದಲ್ಲಿ ರವಿಶಾಸ್ತ್ರಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿದ ಕಾರಣದಿಂದಲೇ ಸೋಂಕು ಕಾಣಿಸಿಕೊಂಡಿದೆ ಎಂದು ಪೌಲ್ ನ್ಯೂಮನ್ ಪುಸ್ತಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ ಮತ್ತು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ.