ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆಗಸ್ಟ್ 12ರ ಬುಧವಾರದಂದು ಆರಂಭವಾದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ 3 ದಿನಗಳು ಮುಗಿದಿದ್ದು ಎರಡೂ ತಂಡಗಳು ಸಹ ತಮ್ಮ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ ಮುಗಿಸಿವೆ.
ಇದೇ ಪಂದ್ಯದಲ್ಲಿ ಅಚ್ಚರಿ ಮೂಡಿಸುವಂತಹ ಘಟನೆಯೊಂದು ನಡೆದಿದ್ದು ಇಂಗ್ಲೆಂಡ್ ತಂಡದ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಭಾರತದ ಕ್ರಿಕೆಟ್ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ಕೆಲಕಾಲ ನಾನೂ ಕೂಡ ಕ್ರಿಕೆಟ್ ಆಡಬೇಕು ನಾನೂ ಕೂಡ ಟೀಮ್ ಇಂಡಿಯಾ ಆಟಗಾರ ಎಂದು ಹೇಳಿಕೊಳ್ಳುವುದರ ಮೂಲಕ ಮೈದಾನದಲ್ಲಿ ಓಡಾಡಿದ್ದಾನೆ.
ತಂಡದಿಂದ ಕೈಬಿಟ್ಟಿದ್ದರು, ಅವಕಾಶವಿರಲಿಲ್ಲ; ಲಾರ್ಡ್ಸ್ ಶತಕದ ಬಳಿಕ ಮನಬಿಚ್ಚಿ ಮಾತನಾಡಿದ ಕೆಎಲ್ ರಾಹುಲ್
ಟೀಮ್ ಇಂಡಿಯಾ ಆಟಗಾರರ ರೀತಿಯೇ ಟೆಸ್ಟ್ ಜರ್ಸಿಯನ್ನು ತೊಟ್ಟು ತನ್ನ ಜೆರ್ಸಿಗೆ ತಾನೇ 69 ಎಂದು ಜೆರ್ಸಿ ಸಂಖ್ಯೆಯನ್ನು ಹಾಕಿಕೊಂಡಿದ್ದ ಹಾಗೂ ಟೀಮ್ ಇಂಡಿಯಾ ಆಟಗಾರರ ರೀತಿಯೇ ತನ್ನ ಹೆಸರನ್ನು ತನ್ನ ಜೆರ್ಸಿ ಹಿಂದೆ ಜಾರ್ವೋ ಎಂದು ಬರೆಸಿಕೊಂಡಿದ್ದ. ಈ ವ್ಯಕ್ತಿ ಲಾರ್ಡ್ಸ್ ಅಂಗಳಕ್ಕೆ ಧರಿಸಿಕೊಂಡು ಬಂದಿದ್ದ ಜೆರ್ಸಿಯನ್ನು ನೋಡಿದರೆ ಟೀಮ್ ಇಂಡಿಯಾದ ಆಟಗಾರರ ಅಧಿಕೃತ ಜೆರ್ಸಿಗೂ ಈತನ ಜೆರ್ಸಿಗೂ ಯಾವುದೇ ರೀತಿಯ ದೊಡ್ಡ ವ್ಯತ್ಯಾಸಗಳೂ ಇರಲಿಲ್ಲ. ಥೇಟ್ ಟೀಮ್ ಇಂಡಿಯಾದ ಆಟಗಾರರ ಜೆರ್ಸಿ ಹಾಗೆ ಇರುವಂತಹ ಜೆರ್ಸಿಯನ್ನು ಹಾಕಿಕೊಂಡು ಮೈದಾನಕ್ಕೆ ಧಿಡೀರನೆ ಪ್ರವೇಶಿಸಿದ ಜಾರ್ವೋ ಎಂಬಾತ ನಾನೂ ಕೂಡ ಟೀಮ್ ಇಂಡಿಯಾ ಆಟಗಾರ ನಾನೂ ಸಹ ಪಂದ್ಯವನ್ನಾಡಬೇಕು ಎಂದು ಕೆಲಕಾಲ ಮೈದಾನದಲ್ಲಿ ಪಟ್ಟು ಹಿಡಿದಿದ್ದ.
— Cricket Shithousery (@CricketRustling) August 14, 2021
ತದನಂತರ ಮೈದಾನಕ್ಕೆ ಆಗಮಿಸಿದ ಲಾರ್ಡ್ಸ್ ಅಂಗಳದ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರ ಹಾಕಿದರು. ಸದ್ಯ ಭಾರತ ಕ್ರಿಕೆಟ್ ತಂಡದ ಈ ಅಭಿಮಾನಿ ಮೈದಾನಕ್ಕೆ ನುಗ್ಗಿ ನಾನೂ ಸಹ ಆಟವಾಡಬೇಕು ಎಂದು ಪಟ್ಟು ಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತ ಕ್ರಿಕೆಟ್ ತಂಡದ ಅಭಿಮಾನಿಯೋರ್ವ ಮೈದಾನಕ್ಕೆ ನುಗ್ಗಿ ನಾನೂ ಸಹ ಇಂಗ್ಲೆಂಡ್ ವಿರುದ್ಧ ಆಟವಾಡಬೇಕು ಎಂದಿದ್ದನ್ನು ಕೆಲ ನೆಟ್ಟಿಗರು ಟ್ರೋಲ್ ಮಾಡಿದ್ದು ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆಗೆ ಅವಕಾಶ ನೀಡುವ ಬದಲು ಈತನಿಗೆ ಅವಕಾಶ ನೀಡಿ ಎಂದು ಟೀಕೆಗಳ ಸುರಿಮಳೆ ಸುರಿಸಿದ್ದಾರೆ.
ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾ ಸೇರಿದ ಇಬ್ಬರು ಹೊಸ ಆಟಗಾರರು
ಇತ್ತ ಭಾರತ ಕ್ರಿಕೆಟ್ ತಂಡದ ಅಭಿಮಾನಿಯೋರ್ವ ಟೀಮ್ ಇಂಡಿಯಾದ ಟೆಸ್ಟ್ ಜರ್ಸಿಯನ್ನು ಧರಿಸಿ ನಾನೂ ಸಹ ತಂಡದ ಆಟಗಾರ ನನಗೂ ಕ್ರಿಕೆಟ್ ಆಡಲು ಬಿಡಿ ಎಂದು ಪಟ್ಟು ಹಿಡಿದಿದ್ದರೆ, ಅತ್ತ ಶ್ರೀಲಂಕಾ ಪ್ರವಾಸದಿಂದ ವಾಪಸ್ ಬಂದು ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಕ್ವಾರಂಟೈನ್ ಮುಗಿಸಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಪಂದ್ಯ ನಡೆಯುತ್ತಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಸಿಸಿಐ ಈ ಇಬ್ಬರು ಲಾರ್ಡ್ಸ್ ಕ್ರೀಡಾಂಗಣದಲ್ಲಿ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದು ಲಾರ್ಡ್ಸ್ ಕ್ರೀಡಾಂಗಣಕ್ಕೆ ನಿಮ್ಮಿಬ್ಬರಿಗೂ ಸುಸ್ವಾಗತ ಎಂದು ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿದೆ. ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಆಗಮನದಿಂದ ಭಾರತೀಯ ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು ಮುಂದಿನ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರ ಬದಲು ಈ ಯುವ ಆಟಗಾರರಿಗೆ ಅವಕಾಶ ನೀಡಬೇಕೆಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.