ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಈ ಇಬ್ಬರು ಆಟಗಾರರು ತಂಡದಲ್ಲಿರಬೇಕು
ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾದ ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿ ಇರಲೇಬೇಕು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಸರಣಿ ಇನ್ನೂ ಸಂಪೂರ್ಣವಾಗಿ ಟೀಮ್ ಇಂಡಿಯಾದ ಕೈವಶವಾಗಿಲ್ಲ ಬದಲಾಗಿ 2-1 ಅಂತರದಿಂದ ಟೀಮ್ ಇಂಡಿಯಾ ಮುನ್ನಡೆಯನ್ನು ಕಾಯ್ದುಕೊಂಡಿದೆ ಅಷ್ಟೇ. ಒಂದುವೇಳೆ ಟೀಮ್ ಇಂಡಿಯಾ ಸರಣಿಯಲ್ಲಿ 2-0 ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ ಜಸ್ಪ್ರೀತ್ ಬೂಮ್ರಾರನ್ನು ಅಂತಿಮ ಟೆಸ್ಟ್ ಪಂದ್ಯದಿಂದ ಕೈಬಿಡಬಹುದಾಗಿತ್ತು ಎಂದು ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸಿರಾಜ್ ಬದಲು ಮೊಹಮ್ಮದ್ ಶಮಿ ಆಡಲಿ
ಇನ್ನು ಜಸ್ಪ್ರೀತ್ ಬೂಮ್ರಾ ಜೊತೆ ಮೊಹಮ್ಮದ್ ಶಮಿ ಕೂಡ ಅಂತಿಮ ಟೆಸ್ಟ್ ಪಂದ್ಯವನ್ನು ಆಡಲೇಬೇಕು ಎಂದು ಅಭಿಪ್ರಾಯಪಟ್ಟಿರುವ ಹಿರಿಯ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಅಂತಿಮ ಟೆಸ್ಟ್ ಪಂದ್ಯದಿಂದ ಮೊಹಮ್ಮದ್ ಸಿರಾಜ್ನ್ನು ಕೈಬಿಟ್ಟು ಮೊಹಮ್ಮದ್ ಶಮಿಗೆ ಆಡುವ ಅವಕಾಶ ನೀಡಬಹುದು ಎಂದು ಸಲಹೆಯನ್ನು ನೀಡಿದ್ದಾರೆ.
ಸರಣಿಯಲ್ಲಿ ಬೂಮ್ರಾ, ಸಿರಾಜ್ ಮತ್ತು ಮೊಹಮ್ಮದ್ ಶಮಿ ಪ್ರದರ್ಶನ ಹೀಗಿದೆ
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4 ಪಂದ್ಯಗಳು ಮುಗಿದ ನಂತರ ಜಸ್ಪ್ರೀತ್ ಬೂಮ್ರಾ 18 ವಿಕೆಟ್ಗಳನ್ನು ಪಡೆದು ಉತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇನ್ನುಳಿದಂತೆ ಮೊಹಮ್ಮದ್ ಸಿರಾಜ್ 14 ವಿಕೆಟ್ಗಳನ್ನು ಪಡೆದಿದ್ದರೆ, ಮೊಹಮ್ಮದ್ ಶಮಿ 11 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.