ತಪ್ಪು ಹಾಕೋಕೆ ಕೊಹ್ಲಿ - ರವಿಶಾಸ್ತ್ರಿ ಇಲ್ಲ
ರವಿಚಂದ್ರನ್ ಅಶ್ವಿನ್ ಅವರಿಗೆ ಐದನೇ ಟೆಸ್ಟ್ ಪಂದ್ಯದಲ್ಲಿಯೂ ಅವಕಾಶ ಸಿಗದೇ ಇರುವುದರ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು 'ಸಾಮಾಜಿಕ ಜಾಲತಾಣದಲ್ಲಿ ಯಾಕೆ ಯಾರು ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಮೇಲೆ ತಪ್ಪು ಹಾಕುವ ಯತ್ನ ಮಾಡುತ್ತಿಲ್ಲ? ಓಹ್... ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಸದ್ಯ ಕೋಚ್ ಮತ್ತು ನಾಯಕರಲ್ಲ ಹೀಗಾಗಿ ಅವರ ಮೇಲೆ ಯಾರೂ ಸಹ ತಪ್ಪನ್ನು ಹಾಕುತ್ತಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ರವಿಚಂದ್ರನ್ ಅಶ್ವಿನ್ ಅವರಿಗೆ ಕಳೆದ ವರ್ಷ ಅವಕಾಶ ಸಿಗದೇ ಇದ್ದಾಗ ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ ಅಶ್ವಿನ್ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಮಾತನಾಡಿದ್ದವರಿಗೆ ಈ ಅಭಿಮಾನಿ ತಿರುಗೇಟು ಕೊಟ್ಟಿದ್ದಾರೆ.
ಅಶ್ವಿನ್ ಕುರಿತು ಕೊಹ್ಲಿಗೆ ಹೊಟ್ಟೆಕಿಚ್ಚು ಇರಲಿಲ್ಲ ಎಂಬುದು ಈಗ ಅರ್ಥವಾಗಿರಬೇಕು
ಕಳೆದ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ನಾಯಕನಾಗಿದ್ದಾಗ ಅಶ್ವಿನ್ ಅವರಿಗೆ ಅವಕಾಶ ನೀಡದೇ ಇದ್ದದ್ದು ಹೊಟ್ಟೆಕಿಚ್ಚಿನಿಂದ ಎಂದು ಕೆಲವರು ಕೊಹ್ಲಿ ವಿರುದ್ಧ ಗರಂ ಆಗಿದ್ದರು. ಅದರ ಕುರಿತಾಗಿ ಇದೀಗ ನೆಟ್ಟಿಗನೋರ್ವ ಕಿಡಿಕಾರಿದ್ದು, ಅಂದು ಬಾಯಿಗೆ ಬಂದ ಹಾಗೆ ಮಾತನಾಡಿದ್ದವರಿಗೆ ಈಗ ಕೊಹ್ಲಿ ಅಂದು ಅಶ್ವಿನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದು ಹೊಟ್ಟೆಕಿಚ್ಚಿನಿಂದಲ್ಲ, ಅದೊಂದು ಗೇಮ್ ಪ್ಲಾನ್ ಎಂಬುದು ಈಗ ಅರ್ಥವಾಗಿರಬೇಕು, ಅಂದು ಕೊಹ್ಲಿ ಉಪಯೋಗಿಸಿದ್ದ ತಂತ್ರವನ್ನೇ ಇಂದು ಇತರರು ಉಪಯೋಗಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಸರಣಿ ಪೂರ್ತಿ ಅವಕಾಶವಿಲ್ಲದೇ ಹೊರಗುಳಿದ ಅಶ್ವಿನ್
ಈ ಸರಣಿಯ ಆರಂಭದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ನಂತರ ಚೇತರಿಸಿಕೊಂಡು ತಂಡಕ್ಕೆ ರವಿಚಂದ್ರನ್ ಅಶ್ವಿನ್ ಮರಳಿದರೂ ಸಹ ಆಡುವ ಬಳಗದಲ್ಲಿ ಯಾವ ಪಂದ್ಯದಲ್ಲಿಯೂ ಅವಕಾಶ ದೊರೆತಿರಲಿಲ್ಲ. ಸದ್ಯ ಇಂಗ್ಲೆಂಡ್ ನೆಲದಲ್ಲಿ ನಡೆಯುತ್ತಿರುವ ಐದನೇ ಪಂದ್ಯದಲ್ಲಿ ತಂಡದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಖಡಾಖಂಡಿತವಾಗಿ ಅವಕಾಶ ಸಿಗಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಈ ಪಂದ್ಯದಲ್ಲಿಯೂ ಸಹ ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶ ನೀಡದೇ ತಂಡದಿಂದ ಹೊರಗಿಡಲಾಗಿದೆ.