ಕೊಹ್ಲಿ ನಿರ್ಧಾರದ ವಿರುದ್ಧ ವ್ಯಂಗ್ಯವಾಡಿದ ನಿಕ್ ಕಾಂಪ್ಟನ್
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ನಿಕ್ ಕಾಂಪ್ಟನ್ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ನೀಡದೆ ಇರುವುದರ ಕುರಿತು ಮತ್ತೊಮ್ಮೆ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ. 'ಈ ಪಂದ್ಯ ಡ್ರಾನಲ್ಲಿ ಅಂತ್ಯವಾಗುವುದು ಬಿಟ್ಟರೆ ಬೇರೆ ಯಾವುದೇ ಸಾಧ್ಯತೆಗಳು ಕಾಣಿಸುತ್ತಿಲ್ಲ, ಕೊನೆಯ ದಿನದಾಟದಂದು ಜಸ್ಪ್ರೀತ್ ಬುಮ್ರಾ ಹೊರತುಪಡಿಸಿ ಭಾರತದ ಉಳಿದ ಎಲ್ಲಾ ಬೌಲರ್ಗಳೂ ಸಹ ವಿಕೆಟ್ ಪಡೆಯಲು ಹರಸಾಹಸ ಪಡಲಿದ್ದಾರೆ. ಒಂದುವೇಳೆ ಈ ಸಮಯದಲ್ಲಿ ರವಿಚಂದ್ರನ್ ಅಶ್ವಿನ್ ಇದ್ದಿದ್ದರೆ ಪಂದ್ಯ ಭಾರತದ ಪಾಲಾಗುತ್ತಿತ್ತು, ಆದರೆ ಭಾರತ ತಂಡದಲ್ಲಿ ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳುವ ಆಟಗಾರರಿದ್ದಾಗ ಈ ರೀತಿ ನಡೆಯುವುದು ಸಾಮಾನ್ಯ' ಎಂದು ನಿಕ್ ಕಾಂಪ್ಟನ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದಾರೆ. ವಿರಾಟ್ ಕೊಹ್ಲಿ ತನ್ನ ವೈಯಕ್ತಿಕ ಹಾಗೂ ಸ್ವತಂತ್ರ ನಿರ್ಧಾರದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಹೊರಗಿಟ್ಟಿದ್ದಾರೆ, ಹೀಗಾಗಿಯೇ ನಾಲ್ಕನೇ ಟೆಸ್ಟ್ ಪಂದ್ಯ ಭಾರತದ ಕೈತಪ್ಪಿ ಡ್ರಾ ನಲ್ಲಿ ಅಂತ್ಯಗೊಳ್ಳಲಿದೆ ಎಂದು ನಿಕ್ ಕಾಂಪ್ಟನ್ ವ್ಯಂಗ್ಯವಾಡಿದ್ದಾರೆ.
ಕೊಹ್ಲಿ ಮತ್ತು ಅಶ್ವಿನ್ ನಡುವೆ ವೈಯಕ್ತಿಕ ಮನಸ್ತಾಪವಿದೆ ಎಂದಿದ್ದ ನಿಕ್ ಕಾಂಪ್ಟನ್!
ವಿರಾಟ್ ಕೊಹ್ಲಿ ವಿರುದ್ಧ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ನಿಕ್ ಕಾಂಪ್ಟನ್ ಕಿಡಿಕಾರಿರುವುದು ಇದೇ ಮೊದಲೇನಲ್ಲ. ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಆಡುತ್ತಿಲ್ಲ ಎಂಬ ವಿಷಯ ತಿಳಿದ ಸಮಯದಲ್ಲಿಯೂ ಸಹ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ವಿರುದ್ಧ ಕಿಡಿಕಾರಿದ್ದರು. ರವಿಚಂದ್ರನ್ ಅಶ್ವಿನ್ ಜತೆಗೆ ನಾಯಕ ವಿರಾಟ್ ಕೊಹ್ಲಿಗಿರುವ ವೈಯಕ್ತಿಕ ಮನಸ್ತಾಪದ ಕಾರಣದಿಂದಲೇ ಅಶ್ವಿನ್ ಅವರಿಗೆ ತಂಡದಲ್ಲಿ ಸ್ಥಾನ ನೀಡದೇ ತಂಡದಿಂದ ಹೊರಗಿಡಲಾಗಿದೆ ಎಂದು ವಿರಾಟ್ ಕೊಹ್ಲಿ ವಿರುದ್ಧ ನಿಕ್ ಕಾಂಪ್ಟನ್ ಆರೋಪವನ್ನು ಮಾಡಿದ್ದರು.
ಕೊಹ್ಲಿ ಓರ್ವ ಹೊಲಸು ಬಾಯಿಯ ಕ್ರಿಕೆಟಿಗ ಎಂದಿದ್ದ ನಿಕ್ ಕಾಂಪ್ಟನ್!
ಇನ್ನು ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 151 ರನ್ಗಳ ಭರ್ಜರಿ ಜಯವನ್ನು ದಾಖಲಿಸಿತ್ತು. ಈ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರ ನಡುವೆ ಪಂದ್ಯದುದ್ದಕ್ಕೂ ಮಾತಿನ ಚಕಮಕಿಗಳು ನಡೆದಿದ್ದವು. ವಿರಾಟ್ ಕೊಹ್ಲಿ ಇಂಗ್ಲೆಂಡ್ ತಂಡದ ಕೆಲವು ಆಟಗಾರರ ವಿರುದ್ಧ ಮೈದಾನದಲ್ಲಿಯೇ ರೋಷಾವೇಶವನ್ನು ತೋರಿಸಿದ್ದರು. ಮೈದಾನದಲ್ಲಿ ವಿರಾಟ್ ಕೊಹ್ಲಿಯ ರೋಷಾವೇಶದ ಕುರಿತು ಲಾರ್ಡ್ಸ್ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ನಿಕ್ ಕಾಂಪ್ಟನ್ ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿ ಕ್ರಿಕೆಟಿಗ ಆತ ಕೇನ್ ವಿಲಿಯಮ್ಸನ್ ಮತ್ತು ಸಚಿನ್ ತೆಂಡೂಲ್ಕರ್ ರೀತಿಯ ಉತ್ತಮ ಆಟಗಾರನಲ್ಲ ಎಂದು ಕಿಡಿಕಾರಿದ್ದರು.