ಲಾರ್ಡ್ಸ್ ಪಂದ್ಯವಾಡಲು ಸಿದ್ಧರಾಗಿದ್ದ ಅಶ್ವಿನ್!
ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ನಡೆದು ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ 151 ರನ್ಗಳ ಜಯವನ್ನು ಸಾಧಿಸಿತು. ಆದರೆ ಈ ಪಂದ್ಯದಲ್ಲಿಯೂ ಮೊದಲನೇ ಪಂದ್ಯದ ರೀತಿಯಲ್ಲಿಯೇ ರವಿಚಂದ್ರನ್ ಅಶ್ವಿನ್ಗೆ ತಂಡದ ಆಡುವ ಬಳಗದಲ್ಲಿ ಅವಕಾಶವನ್ನು ನೀಡಿರಲಿಲ್ಲ. ಈ ಕುರಿತು ಮಾತನಾಡಿರುವ ರವಿಚಂದ್ರನ್ ಅಶ್ವಿನ್ 'ಪಂದ್ಯ ಆರಂಭಕ್ಕೂ ಮುನ್ನವೇ ಯಾವುದೇ ಮಳೆಯ ಮುನ್ಸೂಚನೆ ಇರಲಿಲ್ಲ, ಸ್ಪಷ್ಟವಾದ ಆಕಾಶ ಮತ್ತು ಒಣ ಪಿಚ್ ಇದ್ದದ್ದು ನೋಡಿ ಲಾರ್ಡ್ಸ್ ಪಂದ್ಯದಲ್ಲಿ ನನ್ನನ್ನು ಕಣಕ್ಕಿಳಿಯಲು ಸಿದ್ಧನಾಗು ಎಂದು ಹೇಳಿದ್ದರು. ಆದರೆ ಪಂದ್ಯ ಆರಂಭಕ್ಕೆ ಇನ್ನೇನು ಕೆಲ ಕ್ಷಣಗಳಿರುವಾಗ ಮೋಡ ಆವರಿಸಿತು, ಹೀಗಾಗಿ ಈ ಹಿಂದೆ ಇದ್ದ ತಂಡವನ್ನೇ ಎರಡನೇ ಪಂದ್ಯದಲ್ಲಿಯೂ ಮುಂದುವರೆಸಲಾಯಿತು ಮತ್ತು ತಂಡದಿಂದ ನಾನು ಹೊರಗೆ ಉಳಿಯುವುದು ಅನಿವಾರ್ಯವಾಯಿತು' ಎಂದು ರವಿಚಂದ್ರನ್ ಅಶ್ವಿನ್ ತಮಗೆ ತಂಡದಲ್ಲಿ ಸ್ಥಾನ ಸಿಗದಿರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಅಶ್ವಿನ್ಗೆ ಆಡುವ ಅವಕಾಶವನ್ನು ತಪ್ಪಿಸಿದ್ದು ವರುಣ!
ಅಶ್ವಿನ್ ಹೇಳಿದಂತೆ ಲಾರ್ಡ್ಸ್ ಟೆಸ್ಟ್ ಆರಂಭಕ್ಕೂ ಮುನ್ನ ವಾತಾವರಣದಲ್ಲಿ ಯಾವುದೇ ರೀತಿಯ ಮಳೆ ಬರುವಂತಹ ಮುನ್ಸೂಚನೆ ಇರಲಿಲ್ಲ. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರೂ ಸ್ಪಿನ್ ಬೌಲರ್ಗಳಿಗೆ ಅವಕಾಶವನ್ನು ನೀಡುವ ಯೋಚನೆಯಲ್ಲಿತ್ತು ಟೀಮ್ ಇಂಡಿಯಾ. ಹೀಗಾಗಿಯೇ ಪಂದ್ಯ ಆರಂಭಕ್ಕೂ ಮುಂಚಿತವಾಗಿ ರವಿಚಂದ್ರನ್ ಅಶ್ವಿನ್ಗೆ ಪಂದ್ಯವನ್ನಾಡಲು ಸಿದ್ಧನಿರು ಎಂದು ಸೂಚನೆಯನ್ನೂ ಕೂಡ ನೀಡಲಾಗಿತ್ತು. ಇನ್ನೇನು ರವಿಚಂದ್ರನ್ ಅಶ್ವಿನ್ ಲಾರ್ಡ್ಸ್ ಪಂದ್ಯವನ್ನು ಆಡಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಬೇಕು ಎನ್ನುವಷ್ಟರಲ್ಲಿ ವರುಣರಾಯನ ಆಗಮನದ ಸುಳಿವು ಮೋಡ ಕವಿದ ವಾತಾವರಣದ ಮೂಲಕ ಸಿಕ್ಕಿತ್ತು. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿಯೂ ಸಹ ಕೇವಲ ಓರ್ವ ಸ್ಪಿನ್ ಬೌಲರ್ನ್ನು ಕಣಕ್ಕಿಳಿಸಬೇಕಾಗಿ ಬಂತು. ಹೀಗೆ ವರುಣ ಲಾರ್ಡ್ಸ್ ಅಂಗಳದಲ್ಲಿ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದುಕೊಳ್ಳುವುದನ್ನು ತಪ್ಪಿಸಿದ್ದ.
ಮುಂದಿನ ಪಂದ್ಯದಲ್ಲಿ ಅಶ್ವಿನ್ಗೆ ಅವಕಾಶ ಕೊಡಿ ಎಂಬ ಕೂಗು
ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರವಿಚಂದ್ರನ್ ಅಶ್ವಿನ್ಗೆ ಹವಾಮಾನದ ಕಾರಣವನ್ನು ಮುಂದಿಟ್ಟುಕೊಂಡು ಅವಕಾಶವನ್ನು ನೀಡದೇ ಇದ್ದದ್ದು ಅಷ್ಟೇನೂ ಸರಿಯಲ್ಲ ಎಂದು ಕ್ರೀಡಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸ್ಪಿನ್ ಬೌಲರ್ಗಳ ಅಗತ್ಯತೆ ಇಲ್ಲ ಎಂಬ ಕಾರಣಕ್ಕೆ ರವಿಚಂದ್ರನ್ ಅಶ್ವಿನ್ರನ್ನು ತಂಡದಿಂದ ಹೊರಗಿಡಲಾಯಿತು ಆದರೆ ಮೊಯಿನ್ ಅಲಿ ಕೂಡ ಓರ್ವ ಸ್ಪಿನ್ ಬೌಲರ್, ಅವರು ಸಹ ಅದೇ ವಾತಾವರಣದಲ್ಲಿ ಮತ್ತು ಅದೇ ಪಿಚ್ನಲ್ಲಿ ಸ್ಪಿನ್ ಬೌಲಿಂಗ್ ಮಾಡಿ ಪ್ರಮುಖ ವಿಕೆಟ್ಗಳನ್ನು ಪಡೆದು ಮಿಂಚಿದರು. ಹೀಗಿದ್ದ ಮೇಲೆ ರವಿಚಂದ್ರನ್ ಅಶ್ವಿನ್ಗೆ ಮಾತ್ರ ಏಕೆ ಸ್ಪಿನ್ ಬೌಲರ್ ಎಂಬ ಕಾರಣಕ್ಕೆ ಹವಾಮಾನ ಕಾರಣವನ್ನು ನೀಡಿ ತಂಡದಿಂದ ಹೊರಗಿಡುತ್ತಿದ್ದೀರಿ, ಮುಂದಿನ ಪಂದ್ಯದಲ್ಲಾದರೂ ರವಿಚಂದ್ರನ್ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡಲೇಬೇಕು ಎಂಬ ಕೂಗು ಕೇಳಿಬರುತ್ತಿದೆ.