ಜಡೇಜಾ ಜಾಗಕ್ಕೆ ಅಶ್ವಿನ್
ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪ್ರಸ್ತುತ ಭಾರತ ತಂಡದ ಸ್ಟಾರ್ ಆಲ್ರೌಂಡರ್ ಆಟಗಾರರಾಗಿ ಮಿಂಚು ಹರಿಸುತ್ತಿದ್ದಾರೆ. ಈ ಹಿಂದೆ ಇಬ್ಬರೂ ಸಹ ಹಲವಾರು ಪಂದ್ಯಗಳಲ್ಲಿ ಒಟ್ಟಿಗೆ ಆಟವಾಡಿದ್ದಾರೆ. ಆದರೆ ಇಂಗ್ಲೆಂಡ್ ವಾತಾವರಣದಲ್ಲಿ ಓರ್ವ ಸ್ಪಿನ್ ಬೌಲರ್ ತಂಡದಲ್ಲಿದ್ದರೆ ಸಾಕು ಎಂಬ ಕಾರಣಕ್ಕೆ ಮೊದಲೆರಡು ಟೆಸ್ಟ್ ಪಂದ್ಯದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗಿಟ್ಟು ರವೀಂದ್ರ ಜಡೇಜಾಗೆ ಆಡುವ ಅವಕಾಶವನ್ನು ನೀಡಲಾಗಿತ್ತು. ಅದೇ ರೀತಿ ಇದೀಗ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾರನ್ನು ತಂಡದಿಂದ ಹೊರಗಿಟ್ಟು ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶವನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ.
ಜಡೇಜಾರನ್ನು ತಂಡದಿಂದ ಹೊರ ಹಾಕಲು ಇದೆ ಬಲಿಷ್ಠ ಕಾರಣ
ಟೀಮ್ ಇಂಡಿಯಾಗೆ ರವೀಂದ್ರ ಜಡೇಜಾರನ್ನು ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹೊರಗಿಡುವುದಕ್ಕೆ ಬಲಿಷ್ಠ ಕಾರಣವೊಂದಿದೆ. ಇಂಗ್ಲೆಂಡ್ ವಿರುದ್ಧದ ಮೊದಲನೇ ಮತ್ತು ಎರಡನೇ ಟೆಸ್ಟ್ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದ ರವೀಂದ್ರ ಜಡೇಜಾ ಒಂದು ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು ಆದರೆ, ಬೌಲಿಂಗ್ ವಿಭಾಗದಲ್ಲಿ ಜಡೇಜಾ ಅಕ್ಷರಶಃ ಸೋತಿದ್ದಾರೆ. ಹೌದು ಎರಡೂ ಪಂದ್ಯಗಳ ಪೈಕಿ 44 ಓವರ್ ಬೌಲಿಂಗ್ ಮಾಡಿರುವ ರವೀಂದ್ರ ಜಡೇಜಾ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಇದೊಂದು ಕಾರಣವನ್ನಿಟ್ಟುಕೊಂಡು ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಅವರನ್ನು ಕೈಬಿಡುವ ಸಾಧ್ಯತೆಯಿದೆ.
ಅಶ್ವಿನ್ ತಂಡದಲ್ಲಿರಬೇಕು ಎಂಬ ಕೂಗು ಜೋರಾಗಿತ್ತು
ರವಿಚಂದ್ರನ್ ಅಶ್ವಿನ್ ಅವರನ್ನು ಮೊದಲೆರಡು ಪಂದ್ಯಗಳಲ್ಲಿ ತಂಡಕ್ಕೆ ಸೇರಿಸಿಕೊಳ್ಳದೇ ಕೈಬಿಟ್ಟಿದ್ದರ ಕುರಿತು ಭಾರತದ ಕ್ರೀಡಾಭಿಮಾನಿಗಳು ದೊಡ್ಡ ಮಟ್ಟದಲ್ಲಿಯೇ ಬೇಸರವನ್ನು ವ್ಯಕ್ತಪಡಿಸಿದ್ದರು. ಇಂಗ್ಲೆಂಡ್ ಪಿಚ್ಗಳಲ್ಲಿ ರವಿಚಂದ್ರನ್ ಅಶ್ವಿನ್ ವಿಕೆಟ್ ತೆಗೆಯಬಲ್ಲ ಬೌಲರ್ ಆಗಿದ್ದು ಇಂತಹ ಆಟಗಾರನನ್ನು ತಂಡದಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ನೆಟ್ಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳು ವಿರಾಟ್ ಕೊಹ್ಲಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ರವಿಚಂದ್ರನ್ ಅಶ್ವಿನ್ ಅವರಿಗೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಲೇಬೇಕು ಎಂದು ಹಲವಾರು ಕ್ರೀಡಾ ಪಂಡಿತರು ಮತ್ತು ಮಾಜಿ ಆಟಗಾರರೂ ಸಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.