ನಿಲುವು ಬದಲಾಯಿಸುವಂತೆ ರಿಷಭ್ ಪಂತ್ಗೆ ಸಲಹೆ ನೀಡಿದ ಅಂಪೈರ್
ರಿಷಭ್ ಪಂತ್ ಬ್ಯಾಟಿಂಗ್ ವೈಖರಿ ತುಂಬಾ ವಿಭಿನ್ನವಾದದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ರನ್ ಗಳಿಸಲು ಸಾಂಪ್ರದಾಯಿಕ ಹೊಡೆತಗಳು ಮಾತ್ರವಲ್ಲದೇ ತುಂಬಾ ವಿಭಿನ್ನವಾದ ಮತ್ತು ಅಸಂಪ್ರದಾಯಿಕ ಹೊಡೆತಗಳನ್ನೂ ಬಾರಿಸುವ ರಿಷಭ್ ಪಂತ್ ಇತರ ಆಟಗಾರರಿಗೆ ಹೋಲಿಸಿದರೆ ತುಂಬಾ ವಿಭಿನ್ನವಾದ ರೀತಿಯ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದಾರೆ. ಹೀಗೆ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ಸ್ಕ್ರೀಜ಼್ ಬಿಟ್ಟು ಹೆಚ್ಚಿನ ಅಂತರದಲ್ಲಿ ಬ್ಯಾಟಿಂಗ್ ಮಾಡಲು ನಿಂತಿದ್ದರಂತೆ, ಇದನ್ನು ಗಮನಿಸಿದ ಅಂಪೈರ್ ಇಷ್ಟು ಅಂತರವನ್ನು ಬಿಡಬಾರದು ಆದಷ್ಟು ವಿಕೆಟ್ ಸನಿಹದಲ್ಲಿ ನಿಂತು ಆಡುವಂತೆ ರಿಷಬ್ ಪಂತ್ ಅವರಿಗೆ ಸಲಹೆ ನೀಡಿದರಂತೆ. ಅಂಪೈರ್ ಈ ರೀತಿ ಸಲಹೆ ನೀಡಲು ಕಾರಣ ಆಟಗಾರನ ಸುರಕ್ಷತೆ ತಿಂದು ರಿಷಭ್ ಪಂತ್ ತಿಳಿಸಿದ್ದಾರೆ. ಹೌದು, ರಿಷಭ್ ಪಂತ್ ಅಂತರವನ್ನು ಬಿಟ್ಟು ಸ್ಕ್ರೀಜ್ನಿಂದ ಮುಂದೆ ಬಂದು ನಿಂತಿದ್ದದ್ದು ಅಪಾಯಕಾರಿ ಎಂದು ಹೇಳಿದ ಅಂಪೈರ್ ರಿಷಭ್ ಪಂತ್ ಅವರಿಗೆ ತುಸು ಹಿಂದೆ ನಿಲ್ಲುವಂತೆ ಸಲಹೆ ನೀಡಿದರಂತೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯರ ಕಳಪೆಯಾಟ
ಭಾರತ ಮತ್ತು ಇಂಗ್ಲೆಂಡ್ ನಡುವೆ ಲೀಡ್ಸ್ ನಗರದ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮೊದಲನೇ ಇನ್ನಿಂಗ್ಸ್ನಲ್ಲಿಯೇ ಮುಗ್ಗರಿಸಿರುವ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳು 78 ರನ್ಗಳಿಗೆ ಆಲ್ ಔಟ್ ಆಗುವುದರ ಮೂಲಕ ಕಳಪೆ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ಬೌಲಿಂಗ್ ವಿಭಾಗ ಕೂಡ ಈ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡುವಲ್ಲಿ ಸಫಲತೆಯನ್ನು ಕಂಡಿಲ್ಲ. ಮೊದಲನೇ ಇನ್ನಿಂಗ್ಸ್ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಮೊದಲ ದಿನದಾಟದಂತ್ಯಕ್ಕೆ 120 ರನ್ ಗಳಿಸಿದ್ದು ಯಾವುದೇ ವಿಕೆಟ್ ಕಳೆದುಕೊಂಡಿಲ್ಲ.
ಎರಡನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಇಂಡಿಯಾ?
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಕಳಪೆ ಪ್ರದರ್ಶನ ನೀಡಿರುವ ಭಾರತ ತಂಡದ ಆಟಗಾರರು ಎರಡನೇ ದಿನವಾದರೂ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಯಶಸ್ಸಿನ ಹಾದಿಗೆ ಮರಳುತ್ತಾರಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ. ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ವಿಫಲರಾದರೆ ಬೌಲಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿ ಪ್ರದರ್ಶನವನ್ನು ನೀಡುತ್ತಿತ್ತು ಆದರೆ ಈ ಪಂದ್ಯದಲ್ಲಿ ಎರಡರಲ್ಲಿಯೂ ಮುಗ್ಗರಿಸಿರುವುದು ಇದೀಗ ಭಾರತ ಕ್ರಿಕೆಟ್ ಪ್ರೇಕ್ಷಕರ ಚಿಂತೆಗೆ ಕಾರಣವಾಗಿದೆ.