ಶಾರ್ದೂಲ್ ಅಲಭ್ಯತೆಯನ್ನು ಖಚಿತಪಡಿಸಿದ ವಿರಾಟ್ ಕೊಹ್ಲಿ
ಎರಡನೇ ಪಂದ್ಯಕ್ಕೆ ನಡೆಸುತ್ತಿದ್ದ ಅಭ್ಯಾಸದ ವೇಳೆ ಮಂಡಿರಜ್ಜು ಗಾಯಕ್ಕೊಳಗಾದ ಶಾರ್ದೂಲ್ ಠಾಕೂರ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂಬ ಸುದ್ದಿಯಿತ್ತು. ಆದರೆ ಅಧಿಕೃತವಾಗಿ ಟೀಮ್ ಇಂಡಿಯಾದ ಯಾರೂ ಸಹ ಶಾರ್ದೂಲ್ ಠಾಕೂರ್ ಲಭ್ಯತೆಯ ಕುರಿತಾಗಿ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆ ಬಗ್ಗೆ ಮಾತನಾಡಿದ್ದು ಎರಡನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಭಾಗವಹಿಸುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
ಠಾಕೂರ್ ಬದಲು ಯಾರು ಕಣಕ್ಕಿಳಿಯಲಿದ್ದಾರೆ?
ಸದ್ಯ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಅತಿಯಾಗಿ ಚರ್ಚಿಸಲ್ಪಟ್ಟ ವಿಚಾರವೆಂದರೆ ಅದು ಶಾರ್ದೂಲ್ ಠಾಕೂರ್ ಬದಲು ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು. ಶಾರ್ದೂಲ್ ಠಾಕೂರ್ ಪಂದ್ಯದಿಂದ ಹೊರಗುಳಿಯಲಿದ್ದು ಠಾಕೂರ್ ಜಾಗಕ್ಕೆ ರವಿಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಟೀಮ್ ಇಂಡಿಯಾ ವೇಗಿಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ ಠಾಕೂರ್ ಜಾಗಕ್ಕೆ ಇಶಾಂತ್ ಶರ್ಮಾ ಆಯ್ಕೆಯಾಗಲಿದ್ದಾರೆ ಅಥವಾ ರವೀಂದ್ರ ಜಡೇಜಾ ಜತೆ ಮತ್ತೊಬ್ಬ ಸ್ಪಿನ್ನರ್ಗೆ ಆದ್ಯತೆ ನೀಡಿದರೆ ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಖಚಿತ.
ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟವನ್ನಾಡಿದ್ದ ಶಾರ್ದೂಲ್
ಇಂಗ್ಲೆಂಡ್ ವಿರುದ್ಧ ನಾಟಿಂಗ್ ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಮೊದಲ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಪಡೆದು ಮಿಂಚಿದರು. ಹೀಗೆ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟವನ್ನಾಡಿದ್ದ ಶಾರ್ದೂಲ್ ಠಾಕೂರ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಖಚಿತ ಎನ್ನಲಾಗುತ್ತಿತ್ತು. ಆದರೆ ಸದ್ಯ ಗಾಯದ ಸಮಸ್ಯೆಗೆ ಒಳಗಾಗಿರುವ ಠಾಕೂರ್ ಎರಡನೇ ಪಂದ್ಯದಲ್ಲಿ ಆಡುವ ಅವಕಾಶವನ್ನು ಕೈ ತಪ್ಪಿಸಿಕೊಂಡಿದ್ದಾರೆ.