ಶಾರ್ದೂಲ್ ಠಾಕೂರ್ ಫಿಟ್ ಆಗಿದ್ದಾರೆ ಎಂದು ಹೇಳಿಕೆ ನೀಡಿದ ಅಜಿಂಕ್ಯ ರಹಾನೆ
ಮೊದಲನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಾರ್ದೂಲ್ ಠಾಕೂರ್ ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಪಂದ್ಯಕ್ಕೂ ಮುನ್ನ ಗಾಯಕ್ಕೊಳಗಾಗಿದ್ದರು. ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದ ಶಾರ್ದೂಲ್ ಠಾಕೂರ್ ಬದಲು ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗುತ್ತಿತ್ತು. ಆದರೆ ಲಾರ್ಡ್ಸ್ ಅಂಗಳದ ಹವಾಮಾನ ರವಿಚಂದ್ರನ್ ಅಶ್ವಿನ್ ಅವರಿಗೆ ಅವಕಾಶವನ್ನು ಕೈ ತಪ್ಪಿಸಿತ್ತು. ಹೀಗಾಗಿ ಲಾರ್ಡ್ಸ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಬದಲು ಇಶಾಂತ್ ಶರ್ಮಾರಿಗೆ ಆಡುವ ಅವಕಾಶ ಒದಗಿ ಬಂದಿತ್ತು. ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಾದರೂ ರವಿಚಂದ್ರನ್ ಅಶ್ವಿನ್ ಅವರಿಗೆ ಸ್ಥಾನ ಸಿಗಲಿದೆ ಎನ್ನುವಷ್ಟರಲ್ಲಿ ಇದೀಗ ಶಾರ್ದೂಲ್ ಠಾಕೂರ್ ಗಾಯದಿಂದ ಚೇತರಿಸಿಕೊಂಡಿದ್ದು ಮೂರನೇ ಟೆಸ್ಟ್ ಪಂದ್ಯವನ್ನಾಡಲು ಫಿಟ್ ಆಗಿದ್ದಾರೆ ಎಂದು ಅಜಿಂಕ್ಯ ರಹಾನೆ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬದಲು ರವಿಚಂದ್ರನ್ ಅಶ್ವಿನ್ ಅವರಿಗೆ ಆಡುವ ಅವಕಾಶ ಸಿಗಬಹುದು ಎಂದು ಎಣಿಸುತ್ತಿದ್ದವರ ಊಹೆ ಇದೀಗ ತಪ್ಪಾಗಿದೆ.
ಸರಣಿಯಲ್ಲಿ ಇದುವರೆಗೂ ಸ್ಪಿನ್ನರ್ಗಳಿಗೆ ಒಂದೇ ಒಂದು ವಿಕೆಟ್ ಕೂಡ ಇಲ್ಲ
ಅಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧ ಈಗಾಗಲೇ ನಡೆದಿರುವ ಮೊದಲೆರಡು ಪಂದ್ಯಗಳಲ್ಲಿ ಸ್ಪಿನ್ ಬೌಲರ್ಗಳಿಗೆ ಯಾವುದೇ ವಿಕೆಟ್ ಲಭಿಸಿಲ್ಲ. ಒಟ್ಟು 40 ವಿಕೆಟ್ಗಳ ಪೈಕಿ 39 ವಿಕೆಟ್ಗಳನ್ನು ವೇಗಿಗಳೇ ಪಡೆದುಕೊಂಡಿದ್ದು ಮತ್ತೊಂದು ವಿಕೆಟ್ ರನ್ಔಟ್ ಪಾಲು. ಹೀಗೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದ ಓರ್ವ ಸ್ಪಿನ್ನರ್ ರವೀಂದ್ರ ಜಡೇಜಾ 44 ಓವರ್ ಎಸೆದರೂ ಸಹ ಯಾವುದೇ ವಿಕೆಟ್ ಲಭಿಸದೇ ಇರುವುದು ಇದೀಗ ಮುಂದಿನ ಪಂದ್ಯದಲ್ಲಿ ಇಬ್ಬರು ಸ್ಪಿನ್ ಬೌಲರ್ಗಳಿಗೆ ಅವಕಾಶ ನೀಡುವುದರ ಕುರಿತು ದೊಡ್ಡ ಪ್ರಭಾವವನ್ನೇ ಬೀರಿದೆ.
ತಂಡದಲ್ಲಿ ಬದಲಾವಣೆಯ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಮಾಜಿ ಕ್ರಿಕೆಟಿಗರು
ಮತ್ತೊಂದೆಡೆ ಮೂರನೇ ಟೆಸ್ಟ್ ಪಂದ್ಯದ ಕುರಿತು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಳ್ಳುತ್ತಿರುವ ಮಾಜಿ ಕ್ರಿಕೆಟಿಗರು ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಪ್ರಸ್ತುತ ಭಾರತ ತಂಡ ಅತ್ಯುತ್ತಮ ಪ್ರದರ್ಶನವನ್ನೇ ನೀಡಿದ್ದು ಮೂರನೇ ಟೆಸ್ಟ್ ಪಂದ್ಯದಲ್ಲಿ ಈ ತಂಡವನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಕೂಡ ಮೊದಲೆರಡು ಪಂದ್ಯಗಳಲ್ಲಿದ್ದ ತಂಡವನ್ನೇ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಮುಂದುವರಿಸಲಿದ್ದಾರಾ ಎಂಬ ಅನುಮಾನ ಇದೀಗ ಮೂಡಿದೆ.