ವಿರಾಟ್ ಕೊಹ್ಲಿ ತಾಳ್ಮೆಯಿಂದ ಆಟವಾಡಬೇಕು ಎಂದ ಸಂಜಯ್ ಬಂಗಾರ್
ಸರಣಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಫಲತೆಯ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅಪಾಯಕಾರಿ ಎಸೆತಗಳನ್ನು ಎದುರಿಸುವ ವೇಳೆ ವಿರಾಟ್ ಕೊಹ್ಲಿಯವರು ತಾಳ್ಮೆ ವಹಿಸಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ರೋಷಾವೇಶದ ಆಟವನ್ನು ಆಡಲು ಹೋಗಿ ವಿಕೆಟ್ ಒಪ್ಪಿಸುವ ಬದಲು ತಾಳ್ಮೆಯಿಂದ ಆಡಿದರೆ ಮಾತ್ರ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲ್ಲಲು ಸಾಧ್ಯ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ರೋಷಾವೇಶದ ಆಟವನ್ನು ಆಡುತ್ತಿದ್ದ ಇಂಗ್ಲೆಂಡ್ ಬೌಲರ್ಗಳು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ತಾಳ್ಮೆಯ ಆಟವನ್ನು ಆಡಿದ ಸಲುವಾಗಿಯೇ ಅಮೋಘವಾದ ಜಯವನ್ನು ಸಾಧಿಸಿದರು, ಇಂಗ್ಲೆಂಡ್ ಬೌಲರ್ಗಳಿಗಿರುವ ತಾಳ್ಮೆ ವಿರಾಟ್ ಕೊಹ್ಲಿಗೆ ಇಲ್ಲ ಎಂದು ಸಂಜಯ್ ಬಂಗಾರ್ ಅಭಿಪ್ರಾಯಪಟ್ಟಿದ್ದಾರೆ.
ಸಂಜಯ್ ಮಂಜ್ರೇಕರ್ ಕೂಡ ಇದೇ ಎಚ್ಚರಿಕೆಯನ್ನು ನೀಡಿದ್ದರು
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಕುರಿತು ಮಾತನಾಡಿದ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೂಡ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಫಲತೆಯ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ವಿರಾಟ್ ಕೊಹ್ಲಿ ಆಫ್ ಸ್ಟಂಪ್ ಎಸೆತಗಳನ್ನು ಬಿಡದೇ ಹೊಡೆಯುವ ಯತ್ನ ಮಾಡಿದರೆ ಈ ಸರಣಿ ಪೂರ್ತಿ ಕಳಪೆ ಪ್ರದರ್ಶನ ನೀಡುವುದು ಖಚಿತ ಎಂದು ಸಂಜಯ್ ಮಂಜ್ರೇಕರ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬದಲಾವಣೆಯ ಕುರಿತು ಸಲಹೆಯನ್ನು ನೀಡಿದ್ದರು.
ನಾಲ್ಕನೇ ಟೆಸ್ಟ್ ಪಂದ್ಯದ ಮೇಲೆ ಹೆಚ್ಚಿದ ನಿರೀಕ್ಷೆ
ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡರೆ, ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 151 ರನ್ಗಳ ಗೆಲುವನ್ನು ಸಾಧಿಸಿತ್ತು ಮತ್ತು ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ 76 ರನ್ಗಳ ಇನ್ನಿಂಗ್ಸ್ ಗೆಲುವನ್ನು ದಾಖಲಿಸಿತ್ತು. ಹೀಗೆ ಸರಣಿಯಲ್ಲಿ ಸಮಬಲವನ್ನು ಸಾಧಿಸುವುದರ ಮೂಲಕ ಎರಡೂ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದು, ಸೆಪ್ಟೆಂಬರ್ 2 ರಿಂದ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.