ಓವಲ್ ಟೆಸ್ಟ್ ಭಾರತದ ಪಾಲಾಗಲಿದೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕೂ ಮುನ್ನ ಪಂದ್ಯದ ಕುರಿತು ಮಾತನಾಡಿರುವ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೂರನೇ ದಿನದಾಟದಂದು ಭಾರತದ ಬ್ಯಾಟ್ಸ್ಮನ್ಗಳು ಉತ್ತಮ ಆಟವನ್ನು ಆಡಲಿದ್ದಾರೆ, ಸದ್ಯ ಪಿಚ್ ಪರಿಸ್ಥಿತಿಯನ್ನು ಗಮನಿಸಿದರೆ ಈ ಪಂದ್ಯವನ್ನು ಭಾರತ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದ್ವಿತೀಯ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದ ಭಾರತ
ಭಾರತ ಮತ್ತು ಇಂಗ್ಲೆಂಡ್ ನಡುವೆ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತ ತನ್ನ ದ್ವಿತೀಯ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ್ದು ಯಾವುದೇ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಸಿದೆ. ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ಅಜೇಯ 22 ಹಾಗೂ ರೋಹಿತ್ ಶರ್ಮಾ ಅಜೇಯ 20 ರನ್ ಗಳಿಸಿದ್ದಾರೆ.
ಇದಕ್ಕೂ ಮುನ್ನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾ ಮೊದಲನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅರ್ಧಶತಕಗಳ ನೆರವಿನಿಂದ 191 ರನ್ ಗಳಿಸಿ ಆಲ್ ಔಟ್ ಆಗಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಒಲ್ಲಿ ಪೋಪ್ ಹಾಗೂ ಕ್ರಿಸ್ ವೋಕ್ಸ್ ಅರ್ಧಶತಕಗಳ ನೆರವಿನಿಂದ 290 ರನ್ ಗಳಿಸಿ ಆಲ್ ಔಟ್ ಆಗಿ ಮೊದಲನೇ ಇನ್ನಿಂಗ್ಸ್ನಲ್ಲಿ 99 ರನ್ಗಳ ಮುನ್ನಡೆಯನ್ನು ಸಾಧಿಸಿತು. ಸದ್ಯ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೇ 43 ರನ್ ಗಳಿಸಿದ್ದು 56 ರನ್ಗಳ ಹಿನ್ನಡೆಯನ್ನು ಅನುಭವಿಸಿದೆ.
ಮೂರನೇ ದಿನದಾಟ ಎರಡೂ ತಂಡಗಳಿಗೂ ಅತಿ ಮುಖ್ಯ
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಸೆಪ್ಟೆಂಬರ್ 4ರ ಶನಿವಾರದಂದು ನಡೆಯಲಿದ್ದು ಈ ದಿನ ಎರಡೂ ತಂಡಗಳಿಗೂ ಅತಿ ಮುಖ್ಯವಾಗಿದೆ. ಒಂದೆಡೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 43 ರನ್ ಬಾರಿಸಿ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಹೆಚ್ಚು ವಿಕೆಟ್ ಕಳೆದುಕೊಳ್ಳದೇ ಬ್ಯಾಟಿಂಗ್ ಮಾಡಬೇಕಾದ ಅನಿವಾರ್ಯತೆಯಿದೆ. ಮತ್ತೊಂದೆಡೆ 56 ರನ್ ಮುನ್ನಡೆಯಲ್ಲಿರುವ ಇಂಗ್ಲೆಂಡ್ ಆದಷ್ಟು ಬೇಗ ಟೀಮ್ ಇಂಡಿಯಾ ಆಟಗಾರರ ವಿಕೆಟ್ಗಳನ್ನು ಪಡೆದುಕೊಂಡು ಕೊಹ್ಲಿ ಪಡೆಯನ್ನು ಒತ್ತಡಕ್ಕೆ ಸಿಲುಕಿಸುವ ಯೋಜನೆಯಲ್ಲಿದೆ. ಹೀಗಾಗಿ ಮೂರನೇ ದಿನದಾಟ ಅತಿ ಮುಖ್ಯವಾಗಿದ್ದು ಪಂದ್ಯದ ಫಲಿತಾಂಶದಲ್ಲಿ ಈ ದಿನ ದೊಡ್ಡ ಪಾತ್ರವನ್ನು ನಿರ್ವಹಿಸಲಿದೆ.