ರಹಾನೆಯನ್ನು ತಂಡದಿಂದ ಕೈ ಬಿಡಬಾರದು ಎಂದ ಲಕ್ಷ್ಮಣ್
ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅಜಿಂಕ್ಯ ರಹಾನೆ 61 ಗಳಿಸಿದ್ದು ಬಿಟ್ಟರೆ ಇತ್ತೀಚಿನ ಬೇರೆ ಯಾವುದೇ ಪಂದ್ಯಗಳಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಆದರೂ ಸಹ ಅಜಿಂಕ್ಯ ರಹಾನೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಬೆನ್ನಿಗೆ ನಿಂತಿದ್ದಾರೆ.
ಆಸ್ಟ್ರೇಲಿಯಾ ಸರಣಿಯಲ್ಲಿ ರಹಾನೆ ಆಟ ಮರಿಯೋಕಾಗಲ್ಲ
ಇನ್ನೂ ಮುಂದುವರೆದು ಮಾತನಾಡಿದ ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಆಸ್ಟ್ರೇಲಿಯಾ ನೆಲದಲ್ಲಿ ನಾಯಕನಾಗಿ ಟೆಸ್ಟ್ ಸರಣಿ ಗೆಲ್ಲಿಸಿದ್ದರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 36 ರನ್ಗೆ ಆಲ್ ಔಟ್ ಆದ ನಂತರದ ಇನ್ನಿಂಗ್ಸ್ನಲ್ಲಿ ಅಜಿಂಕ್ಯ ರಹಾನೆ ಶತಕ ಬಾರಿಸಿದ್ದನ್ನು ವಿವಿಎಸ್ ಲಕ್ಷ್ಮಣ್ ಶ್ಲಾಘಿಸಿದ್ದಾರೆ. ನಾಯಕನಾಗಿ ಆಸ್ಟ್ರೇಲಿಯಾ ನೆಲದಲ್ಲಿ ಅಜಿಂಕ್ಯ ರಹಾನೆ ಸರಣಿಯನ್ನು ಗೆಲ್ಲಿಸಿದ್ದನ್ನು ಹಾಡಿ ಹೊಗಳಿದ ವಿವಿಎಸ್ ಲಕ್ಷ್ಮಣ್ ಅಜಿಂಕ್ಯ ರಹಾನೆ ಮೇಲೆ ಇನ್ನೂ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಅಧಿಕ ಬ್ಯಾಟ್ಸ್ಮನ್ನ ಅಗತ್ಯತೆಯಿದೆ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದು ಬ್ಯಾಟಿಂಗ್ ವಿಭಾಗ, ಹೀಗಾಗಿ ಮಧ್ಯಮ ಕ್ರಮಾಂಕದ ಜತೆಗೆ ಓರ್ವ ಅಧಿಕ ಬ್ಯಾಟ್ಸ್ಮನ್ನ ಅಗತ್ಯತೆ ತಂಡಕ್ಕಿದೆ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.