ರೋಹಿತ್ ಶರ್ಮಾ ಹೇಳಿದ್ದೇನು?
"ಮೊಹಮ್ಮದ್ ಶಮಿ ಮತ್ತು ಸಿರಾಜ್ ಅತ್ಯುತ್ತಮ ಬೌಲಿಂಗ್ ಕೌಶಲ್ಯಗಳನ್ನು ಹೊಂದಿದ್ದಾರೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಬಹುಮಾನಗಳನ್ನು ಪಡೆಯುವುದನ್ನು ನೋಡಿ ಸಂತೋಷವಾಗುತ್ತದೆ. ಶಮಿ ಮತ್ತು ಸಿರಾಜ್ ದಿರ್ಘ ಬೌಲಿಂಗ್ ಮಾಡುವುದನ್ನು ಮುಂದುವರೆಸಿದರು. ಟೆಸ್ಟ್ ಸರಣಿ ಬರುತ್ತಿದೆ ಎಂದು ನಾನು ಅವರಿಗೆ ನೆನಪಿಸಿದೆ. ನಾವು ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ" ಎಂದು ರೋಹಿತ್ ಶರ್ಮಾ ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ಮುಕ್ತಾಯದ ಬಳಿಕ ಹೇಳಿದ್ದರು.
ಭಾರತ ಈಗಾಗಲೇ ಸರಣಿ ಗೆದ್ದಿರುವುದರಿಂದ ಸೋಲಿನ ಭಯವಿಲ್ಲದೆ ತಂಡದಲ್ಲಿ ಹಲವು ಪ್ರಯೋಗಗಳನ್ನು ಮಾಡಬಹುದಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಬೆಂಚ್ ಕಾದಿದ್ದ ಕೆಲವು ಆಟಗಾರರಿಗೆ ಅವಕಾಶ ನೀಡಬಹುದಾಗಿದೆ.
ಏಕದಿನ ವಿಶ್ವಕಪ್ ದೃಷ್ಟಿಯಿಂದ ಹೊಸ ಪ್ರಯೋಗ?
2023ರಲ್ಲಿ ಏಕದಿನ ವಿಶ್ವಕಪ್ ಬರುತ್ತಿದ್ದು, ಭಾರತ ತಂಡ ಸಿದ್ಧತೆ ಆರಂಭಿಸಿದೆ. ಇದೇ ಕಾರಣಕ್ಕಾಗಿಯಾದರೂ ತಂಡದಲ್ಲಿ ಕೆಲವು ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ. ಉಮ್ರಾನ್ ಮಲಿಕ್ ಜೊತೆಗೆ ಭರವಸೆಯ ಆಲ್ರೌಂಡರ್ ಶಹಬಾಜ್ ಅಹ್ಮದ್ ಕೂಡ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಶ್ರೇಯಸ್ ಅಯ್ಯರ್ ಬದಲಿಗೆ ರಜತ್ ಪಟಿದಾರ್ ಸರಣಿಗೆ ಆಯ್ಕೆಯಾದರೂ ಇದುವರೆಗೂ ಅವಕಾಶ ಪಡೆದಿಲ್ಲ, ನಾಯಕ ರೋಹಿತ್ ಮತ್ತು ಕೋಚ್ ರಾಹುಲ್ ಈ ಬಗ್ಗೆ ಕೂಡ ಯೋಚಿಸಿರಬಹುದು. ಕುಲದೀಪ್ ಯಾದವ್ಗೆ ವಿಶ್ರಾಂತಿ ನೀಡಿದರೆ ಹಿರಿಯ ಸ್ಪಿನ್ನರ್ ಯುಜುವೇಂದ್ರ ಚಹಾಲ್ ಕೂಡ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಇಂದೋರ್ ಬ್ಯಾಟಿಂಗ್ಗೆ ಹೆಚ್ಚು ನೆರವು ನೀಡುವ ಪಿಚ್ ಆಗಿದೆ. ಇದುವರೆಗೂ ಇಲ್ಲಿ ಭಾರತ 5 ಏಕದಿನ ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಪಿಚ್ನಲ್ಲಿ ಒಬ್ಬ ಬ್ಯಾಟರ್ ಹೆಚ್ಚುವರಿಯಾಗಿ ಬೇಕು ಎನಿಸಿದರೆ ರಜತ್ ಪಟಿದಾರ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಜತ್ ಪಾಟಿದಾರ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್/ ಶಹಬಾಜ್ ಅಹ್ಮದ್, ಕುಲದೀಪ್ ಯಾದವ್/ ಯುಜ್ವೇಂದ್ರ ಚಹಾಲ್, ಮೊಹಮ್ಮದ್ ಶಮಿ/ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್.