ಪಿಚ್ ನೋಡಿಕೊಂಡು ತಂಡದಲ್ಲಿ ಬದಲಾವಣೆ
ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಆದರೆ, ತಂಡದಲ್ಲಿ ಬದಲಾವಣೆ ಮಾಡುವುದು ಪಿಚ್ ವರದಿಯನ್ನು ಆಧರಿಸಿರುತ್ತದೆ ಎಂದು ಹೇಳಲಾಗಿದೆ.
ಒಂದು ವೇಳೆ ಅಹಮದಾಬಾದ್ ಪಿಚ್ ಕೂಡ ಬೌಲಿಂಗ್ಗೆ ಹೆಚ್ಚಿನ ನೆರವು ನೀಡಿದರೆ, ಇದೇ ತಂಡವನ್ನು ಮುಂದುವರೆಸುವ ಲೆಕ್ಕಾಚಾರ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರದ್ದಾಗಿದೆ.
ಪೃಥ್ವಿ ಶಾ, ಜಿತೇಶ್ ಶರ್ಮಾಗೆ ಅವಕಾಶ?
ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ರನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ.
ಇಶಾನ್ ಕಿಶನ್ ಬದಲಿಗೆ ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ತಂಡದಲ್ಲಿ ಸ್ಥಾನ ಪಡೆಯುವು ಸಾಧ್ಯತೆ ಇದೆ. ಇನ್ನು ಅವಕಾಶಕ್ಕಾಗಿ ಕಾಯುತ್ತಿರುವ ಸ್ಫೋಟಕ ಬ್ಯಾಟರ್ ಪೃಥ್ವಿ ಶಾ ಕೂಡ ಅಹಮದಾಬಾದ್ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಬೌಲಿಂಗ್ನಲ್ಲಿ ಬದಲಾವಣೆ ಮಾಡುವುದು ಪಿಚ್ನ ವರ್ತನೆಯನ್ನು ಆಧರಿಸಿರುತ್ತದೆ.
11 ಪಿಚ್ಗಳಿರುವ ಕ್ರೀಡಾಂಗಣ!
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಟ್ಟು 11 ಪಿಚ್ಗಳಿದ್ದು, 6 ಕೆಂಪು ಮಣ್ಣಿನ ಪಿಚ್ಗಳಿವೆ ಮತ್ತು ಐದು ಕಪ್ಪು ಮಣ್ಣಿನ ಪಿಚ್ಗಳಿವೆ. ಕೆಂಪು ಮಣ್ಣಿನ ಪಿಚ್ಗಳು ಸ್ಪಿನ್ನರ್ ಮತ್ತು ನಿಧಾನಗತಿಯ ಬೌಲರ್ ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಕಪ್ಪು ಮಣ್ಣಿನ ಪಿಚ್ಗಳು ಬೌನ್ಸ್ ಹೊಂದಿದ್ದು, ಬ್ಯಾಟಿಂಗ್ಗೆ ನೆರವಾಗುತ್ತದೆ. ಭಾರತ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಯಾವ ರೀತಿಯ ಪಿಚ್ ಬಳಸುತ್ತಾರೆ ಎನ್ನುವುದು ಇನ್ನೂ ತಿಳಿದಿಲ್ಲ.
ಅಹಮದಾಬಾದ್ ಟಿ20 ಮಾದರಿಯಲ್ಲಿ ಉತ್ತಮ ಸ್ಕೋರ್ ಮಾಡುವ ಸ್ಥಳವಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಸರಾಸರಿ ಸ್ಕೋರ್ 174 ಆಗಿದ್ದು, ಎರಡನೇ ಇನ್ನಿಂಗ್ಸ್ ಸ್ಕೋರ್ 166 ಆಗಿದೆ.