ಭಾರತ ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಕೊನೆಯ ನಿರ್ಣಾಯಕ ಪಂದ್ಯಕ್ಕೆ ಮುನ್ನವೇ ವೇಗದ ಬೌಲರ್ ಮುಖೇಶ್ ಕುಮಾರ್ ಅವರನ್ನು ತಂಡದಿಂದ ಸದ್ದಿಲ್ಲದೆ ಬಿಡುಗಡೆ ಮಾಡಿದೆ.
ಟಿ20 ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ತಂಡದಲ್ಲಿದ್ದರು ಆಡುವ ಬಳಗದಲ್ಲಿ ಅವಕಾಶ ಪಡೆದಿರಲಿಲ್ಲ, ಮೂರನೇ ಪಂದ್ಯಕ್ಕೆ ಸುಮ್ಮನೆ ಬೆಂಚ್ ಕಾಯುವ ಬದಲು ರಣಜಿ ಪಂದ್ಯವನ್ನಾಡುವ ದೃಷ್ಟಿಯಿಂದ ಅವರು ಕೋಲ್ಕತ್ತಾಗೆ ಮರಳಿದ್ದಾರೆ.
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
ದೇಶೀಯ ಕ್ರಿಕೆಟ್ನಲ್ಲಿ ಬೆಂಗಾಲ್ ತಂಡವನ್ನು ಪ್ರತಿನಿಧಿಸುವ ಅವರು, ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆಯುತ್ತಿರುವ ಜಾರ್ಖಂಡ್ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಡುತ್ತಿದ್ದಾರೆ.
ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲನೇ ದಿನವೇ ಮಿಂಚಿರುವ ಮುಖೇಶ್ ಕುಮಾರ್ ಪ್ರಮುಖ 3 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಬೆಂಗಾಲ್ ಬೌಲಿಂಗ್ ದಾಳಿಗೆ ಸಿಲುಕಿದ ಜಾರ್ಖಂಡ್ ಮೊದಲನೇ ಇನ್ನಿಂಗ್ಸ್ನಲ್ಲಿ 173 ರನ್ಗಳಿಗೆ ಆಲೌಟ್ ಆಗಿದೆ.
ದೇಶೀಯ ಕ್ರಿಕೆಟ್ನಲ್ಲಿ ಮಿಂಚು ಹರಿಸಿದರೂ ಮುಖೇಶ್ ಕುಮಾರ್ ಭಾರತ ತಂಡಕ್ಕಾಗಿ ಆಡಲು ಇನ್ನೂ ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆಯದ ಅವರು, ಮೂರನೇ ಪಂದ್ಯದಲ್ಲಿ ಅವಕಾಶ ಪಡೆಯುತ್ತಾರೆ ಎಂದು ನಂಬಲಾಗಿತ್ತು ಆದರೆ, ಅವರನ್ನು ಮೂರನೇ ಪಂದ್ಯಕ್ಕೆ ಮುನ್ನವೇ ಭಾರತ ತಂಡದಿಂದ ಬಿಡುಗಡೆ ಮಾಡಲಾಯಿತು.
ಲಕ್ನೋದಿಂದ ಕೋಲ್ಕತ್ತಾಗೆ ಪ್ರಯಾಣ
ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ20 ಪಂದ್ಯದ ನಂತರ ಭಾನುವಾರ ರಾತ್ರಿಯೇ ಅವರನ್ನು ಭಾರತ ತಂಡದಿಂದ ಬಿಡುಗಡೆ ಮಾಡಲಾಗಿದೆ. ಅಂದು ರಾತ್ರಿಯೇ ಅಲ್ಲಿಂದ ಹೊರಟ ಮುಖೇಶ್ ಕುಮಾರ್ ಸೋಮವಾರ ಕೋಲ್ಕತ್ತಾದಲ್ಲಿ ತಮ್ಮ ತಂಡವನ್ನು ಸೇರಿಕೊಂಡರು.
ಟೀಂ ಇಂಡಿಯಾದ ಈ ಕ್ರಮಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ತಂಡದಲ್ಲಿ ಇದ್ದಾಗಲೂ ಹಲವು ಪ್ರತಿಭೆಗಳಿಗೆ ಸರಿಯಾದ ಅವಕಾಶ ನೀಡುತ್ತಿಲ್ಲ ಎನ್ನಲಾಗುತ್ತಿದೆ. ಪೃಥ್ವಿ ಶಾ ಕೂಡ ರಣಜಿ ಪಂದ್ಯವನ್ನು ಕಳೆದುಕೊಂಡು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡವನ್ನು ಸೇರಿಕೊಂಡಿದ್ದರು. ಕಳೆದ ಎರಡು ಪಂದ್ಯಗಳಲ್ಲಿ ಅವರು ಬೆಂಚ್ ಕಾದರು ಆಡುವ ಅವಕಾಶ ಸಿಗಲಿಲ್ಲ.
ನಿರ್ಣಾಯಕ ಪಂದ್ಯಕ್ಕೆ ಭಾರತ ತಯಾರಿ
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಿರ್ಣಾಯಕ ಪಂದ್ಯವನ್ನಾಡಲು ಟೀಂ ಇಂಡಿಯಾ ಸಜ್ಜಾಗಿದೆ. 3 ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಗೆಲುವು ಸಾಧಿಸುವ ಮೂಲಕ ಸರಣಿ ಸಮಬಲಗೊಂಡಿದೆ.
ಆರಂಭಿಕ ಬ್ಯಾಟರ್ ಪೃಥ್ವಿ ಶಾ ಮೂರನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕೋಚ್ ರಾಹುಲ್ ದ್ರಾವಿಡ್ ಪಿಚ್ ವರದಿಯ ಆಧಾರದ ಮೇಲೆ ತಂಡದಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ.