ಕೆಲವರಿಗೆ ಅವಕಾಶ ನೀಡದೇ ಇರುವುದರ ಕುರಿತು ಕೇಳಿಬಂತು ಕೂಗು
ಇನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಕೆಲ ಆಟಗಾರರಿಗೆ ಸ್ಥಾನ ನೀಡದೆ ಇರುವುದರ ಕುರಿತು ಈಗಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ ಮತ್ತು ಪ್ರಶ್ನೆಗಳು ಎದುರಾಗುತ್ತಿವೆ. ಅದರಂತೆ ಇದೀಗ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ವರುಣ್ ಚಕ್ರವರ್ತಿ ಮತ್ತು ರಾಹುಲ್ ಅವರಿಗೆ ಯಾಕೆ ಸ್ಥಾನ ನೀಡಿಲ್ಲ ಎಂಬ ಪ್ರಶ್ನೆಯನ್ನು ಹಾಕಿದ್ದಾರೆ.
ರಾಹುಲ್ ಚಹರ್
"ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ರಾಹುಲ್ ಚಹರ್ ಅವರಿಗೆ ಯಾಕೆ ಸ್ಥಾನ ನೀಡಲಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಂತಹ ಮಹತ್ವದ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ರಾಹುಲ್ ಚಾಹರ್ ಪ್ರತಿ ಓವರ್ಗೆ 7.5 ರನ್ ನೀಡಿ ಉತ್ತಮ ಪ್ರದರ್ಶನವನ್ನು ನೀಡಿದರು. ಆದರೂ ಸಹ ಇಂತಹ ಆಟಗಾರನಿಗೆ ತಂಡದಲ್ಲಿ ಸ್ಥಾನ ಯಾಕೆ ನೀಡಿಲ್ಲ ಎಂಬುದು ಮಾತ್ರ ತಿಳಿಯುತ್ತಿಲ್ಲ, ಅಷ್ಟಕ್ಕೂ ರಾಹುಲ್ ಚಹರ್ ತಾನು ಮಾಡಿದ ತಪ್ಪಾದರೂ ಏನು ಎಂದು ಆಶ್ಚರ್ಯ ಪಡುವುದಂತೂ ನಿಜ" ಎಂದು ಸುನಿಲ್ ಗವಾಸ್ಕರ್ ರಾಹುಲ್ ಚಹರ್ ಅವರನ್ನು ಆಯ್ಕೆ ಮಾಡದೇ ಇರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರುಣ್ ಚಕ್ರವರ್ತಿ
"ವರುಣ್ ಚಕ್ರವರ್ತಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಪ್ರಕಟವಾಗಿರುವ ಟೀಮ್ ಇಂಡಿಯಾದಲ್ಲಿ ಸ್ಥಾನ ಯಾಕೆ ನೀಡಿಲ್ಲ ಎಂಬುದಕ್ಕೆ ನಿಖರವಾದ ಕಾರಣವನ್ನು ಯಾರೂ ನೀಡಿಲ್ಲ. ಆತ ಗಾಯಕ್ಕೊಳಗಾಗಿದ್ದಾನೆ ಎನ್ನಲಾಗುತ್ತಿದೆ ಆದರೆ ಅದರ ಕುರಿತಾಗಿ ನಮಗೆ ತಿಳಿದಿಲ್ಲ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದ್ದ ಆತನ ನ್ಯೂನ್ಯತೆಗಳೇನು ಎಂಬುದನ್ನು ಆತನಿಗೆ ತಿಳಿಸಿದರೆ, ಆತ ಆ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಬಲ್ಲ" ಎಂದು ಸುನಿಲ್ ಗವಾಸ್ಕರ್ ವರುಣ್ ಚಕ್ರವರ್ತಿಯನ್ನು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಪರಿಗಣಿಸದೇ ಹೊರಹಾಕಿರುವುದರ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.