ಇಶಾನ್ ಕಿಶನ್
ಇತ್ತೀಚಿನ ದಿನಗಳಲ್ಲಿ ವೈಟ್ಬಾಲ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಆಟಗಾರರ ಪೈಕಿ ಇಶಾನ್ ಕಿಶನ್ ಪ್ರಮುಖರು. ಅದರಲ್ಲೂ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ್ದ ಇಶಾನ್ ಕಿಶನ್ ಬಳಿಕ ತಂಡದಲ್ಲಿನ ಸ್ಪರ್ಧೆಯಿಂದಾಗಿ ಕೆಲ ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯಲು ವಿಫಲವಾದರು. ಆದರೆ ಇದೀಗ ಟಿ20 ಸರಣಿಯಲ್ಲಿ ಇನ್ನಿಂಗ್ಸ್ ಆರಂಭಿಸುವ ಅದ್ಭುತ ಅವಕಾಶ ದೊರೆತಿದ್ದರು ಕೂಡ ಇಶಾನ್ ಕಿಶನ್ ಸತತ ಎರಡು ಪಂದ್ಯಗಳಲ್ಲಿಯೂ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ರಾಂಚಿಯಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 5 ಎಸೆತಗಳಲ್ಲಿ 4 ರನ್ಗಳಿಸಿದ್ದರೆ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ 32 ಎಸೆತಗಳಲ್ಲಿ ಎದುರಿಸಿ 19 ರನ್ಗಳಿಸಿದ್ದಾರೆ. ಈ ಸರಣಿಯಲ್ಲಿ ರನ್ಗಳಿಸುವುದರ ಜೊತೆಗೆ ಸ್ಟ್ರೈಕ್ರೇಟ್ನಲ್ಲಿಯೂ ಇಶಾನ್ ಕಿಶನ್ ಅತ್ಯಂತ ಕಳಪೆಯಾಗಿರುವುದು ಸಹಜವಾಗಿಯೇ ಮ್ಯಾನೇಜ್ಮೆಂಟ್ನ ನಿದ್ದೆಗೆಡಿಸಿದೆ.
ಶುಬ್ಮನ್ ಗಿಲ್
ಏಕದಿನ ಸರಣಿಯಲ್ಲಿ ಅಮೋಘ ಫಾರ್ಮ್ನಲ್ಲಿದ್ದು ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತಿರುವ ಶುಬ್ಮನ್ ಗಿಲ್ ಟಿ20 ಸರಣಿಯಲ್ಲಿ ಮಿಂಚಲು ವಿಫಲವಾಗಿದ್ದಾರೆ. ಈ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದುಕೊಂಡ ಶುಬ್ಮನ್ ಗಿಲ್ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳು ಇದ್ದವು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಗಿಲ್ ದ್ವಿಶತಕವನ್ನು ಕೂಡ ಸಿಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಆದರೆ ಚುಟುಕು ಕ್ರಿಕೆಟ್ನಲ್ಲಿ ಶುಬ್ಮನ್ ಗಿಲ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಇಶಾನ್ ಕಿಶನ್ ರೀತಿಯಲ್ಲೇ ಗಿಲ್ ಕೂಡ ಟಿ20 ಮಾದರಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.
ಅರ್ಷ್ದೀಪ್ ಸಿಂಗ್
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಮ್ಯಾನೇಜ್ಮೆಂಟ್ಗೆ ಕಳವಳ ಮೂಡಿಸಿದ ಪ್ರಮುಖ ಆಟಗಾರನೆಂದರೆ ಅದು ಅರ್ಷ್ದೀಪ್ ಸಿಂಗ್. ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿಯೂ ಅರ್ಷ್ದೀಪ್ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಹಾಗಿದ್ದರೂ ಈ ಸರಣಿಯಲ್ಲಿ ಅರ್ಷ್ದೀಪ್ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದರು. ಲೈನ್ ಹಾಗೂ ಲೆಂತ್ನಲ್ಲಿ ಅರ್ಷ್ದೀಪ್ ಸಿಂಗ್ ಎಡವುದರ ಜೊತೆಗೆ ನೋಬಾಲ್ ಎಸೆಯುತ್ತಿರುವುದು ತಂಡಕ್ಕೆ ಇನ್ನಿಲ್ಲದ ಒತ್ತಡವನ್ನುಂಟು ಮಾಡುತ್ತಿದೆ. ಮೊದಲ ಪಂದ್ಯದ ಅಂತಿಮ ಓವರ್ನಲ್ಲಿ 27 ರನ್ ಬಿಟ್ಟುಕೊಡುವ ಮೂಲಕ ಅರ್ಷ್ದೀಪ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದ್ದರು. ಎರಡನೇ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಬೌಲಿಂಗ್ ದಾಳಿಗಿಳಿದು ಎರಡು ವಿಕೆಟ್ ಪಡೆದರಾದರೂ ಅದು ಬಾಲಂಗೋಚಿಗಳ ವಿಕೆಟ್ ಎಂಬುದು ಗಮನಾರ್ಹ ಅಂಶ.