ಕಳೆದೊಂದು ತಿಂಗಳಿನಿಂದ ಯುಎಇಯಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗೆ ನವೆಂಬರ್ 14ರಂದು ನಡೆದ ಫೈನಲ್ ಪಂದ್ಯದ ಮೂಲಕ ಅಧಿಕೃತವಾಗಿ ತೆರೆಬಿದ್ದಿದೆ. ಈ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಟವನ್ನು ನಡೆಸಿದವು. ಆರನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯವನ್ನು ಸಾಧಿಸುವುದರ ಮೂಲಕ ಇದೇ ಮೊದಲ ಬಾರಿಗೆ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಫೈನಲ್ ಹಂತದವರೆಗೂ ತಲುಪಿದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುವುದರ ಮೂಲಕ ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯುವ ಕನಸನ್ನು ನನಸು ಮಾಡಿಕೊಳ್ಳಲಾಗದೆ ವಿಫಲವಾಗಿದೆ. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಡವಿದ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟ ನಡೆಸಲಿದೆ.
ಭಾರತ vs ನ್ಯೂಜಿಲೆಂಡ್ ಟಿ20: 2-1 ಅಂತರದಲ್ಲಿ ಸರಣಿ ಗೆಲ್ಲಲಿರುವ ತಂಡವನ್ನು ಊಹಿಸಿದ ಹರ್ಭಜನ್ ಸಿಂಗ್
ಇನ್ನು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೆಮಿಫೈನಲ್ ಹಂತವನ್ನು ಪ್ರವೇಶಿಸುವುದರಲ್ಲಿಯೂ ವಿಫಲವಾಗಿ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿತ್ತು. ಹೀಗೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡುವುದರ ಮೂಲಕ ತನ್ನ ಪಯಣವನ್ನು ಲೀಗ್ ಹಂತದಲ್ಲಿಯೇ ಮುಗಿಸಿದ ಟೀಮ್ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯನ್ನಾಡಲು ಸಜ್ಜಾಗಿದೆ. ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದು, ನೂತನ ನಾಯಕನಾಗಿ ರೋಹಿತ್ ಶರ್ಮಾ ನೇಮಕಗೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಹುಲ್ ದ್ರಾವಿಡ್ ಈ ಸರಣಿಯ ಮೂಲಕ ಟೀಮ್ ಇಂಡಿಯಾ ಕೋಚ್ ಆಗಿ ಕೆಲಸ ಆರಂಭಿಸಲಿದ್ದಾರೆ.
ಹೀಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಈ ಟಿ ಟ್ವೆಂಟಿ ಸರಣಿ ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟು ಹಾಕಲು ಕಾರಣವಾಗಿದೆ. ಇನ್ನು ಭಾರತ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ರವೀಂದ್ರ ಜಡೇಜಾ ಮತ್ತು ಜಸ್ ಪ್ರೀತ್ ಬೂಮ್ರಾ ಈ ಸರಣಿಯಿಂದ ಹೊರಗುಳಿದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಹಾಗೂ ಇನ್ನೂ ಕೆಲ ಆಟಗಾರರನ್ನು ಈ ಸರಣಿಯಿಂದ ಹೊರಗಿಡಲಾಗಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಪರ ಆಯ್ಕೆಯಾಗಿರುವ ವೆಂಕಟೇಶ್ ಐಯ್ಯರ್ ಮತ್ತು ಅವೇಶ್ ಖಾನ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಹೌದು, ಭಾರತ ತಂಡದ ಪ್ರಮುಖ ಆಲ್ ರೌಂಡರ್ ಎನಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಇತ್ತೀಚಿನ ಕೆಲ ದಿನಗಳಿಂದ ಗಾಯದ ಸಮಸ್ಯೆಗೊಳಗಾಗಿರುವ ಸಾಲುಸಾಲು ಕಳಪೆ ಪ್ರದರ್ಶನಗಳನ್ನು ನೀಡಿದ್ದರು, ಅಷ್ಟೇ ಅಲ್ಲದೆ ಬೌಲಿಂಗ್ ಮಾಡಲಾಗದಷ್ಟು ಸಮಸ್ಯೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯರನ್ನು ನ್ಯೂಜಿಲೆಂಡ್ ವಿರುದ್ಧದ ಈ ಸರಣಿಯಿಂದ ಹೊರಗಿಡಲಾಗಿದ್ದು ವೆಂಕಟೇಶ್ ಐಯ್ಯರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವೆಂಕಟೇಶ್ ಐಯ್ಯರ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು ಅಬ್ಬರಿಸಿದ್ದು ಎಲ್ಲರಿಗೂ ತಿಳಿದೇ ಇದೆ. 10 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ವೆಂಕಟೇಶ್ ಐಯ್ಯರ್ 370 ರನ್ ಕಲೆ ಹಾಕುವುದರ ಮೂಲಕ 4 ಅರ್ಧಶತಕಗಳನ್ನು ಕೂಡಾ ಸಿಡಿಸಿದ್ದರು. ಅಷ್ಟೇ ಅಲ್ಲದೇ ಬೌಲಿಂಗ್ನಲ್ಲಿ ಕೂಡ ವೆಂಕಟೇಶ್ ಐಯ್ಯರ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹೀಗಾಗಿ ವೆಂಕಟೇಶ್ ಐಯ್ಯರ್ ಹಾರ್ದಿಕ್ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಆಟಗಾರನಾಗಿದ್ದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ತಂಡದಲ್ಲಿ ಈಗಾಗಲೇ ಸ್ಪಿನ್ ಆಲ್ ರೌಂಡರ್ ಆಟಗಾರರು ಇರುವ ಕಾರಣ ವೇಗದ ಬೌಲಿಂಗ್ ಮಾಡಬಲ್ಲ ಆಲ್ ರೌಂಡರ್ ಆಟಗಾರ ನ ಅಗತ್ಯತೆ ಹೆಚ್ಚಿದೆ. ಹೀಗಾಗಿ ಹೊಸದಾಗಿ ತಂಡ ಸೇರ್ಪಡೆಯಾಗಿರುವ ವೆಂಕಟೇಶ್ ಐಯ್ಯರ್ ಈ ಪಂದ್ಯದಲ್ಲಿ ಪದಾರ್ಪಣೆ ಮಾಡುವುದು ಬಹುತೇಕ ಖಚಿತ ಎನ್ನಬಹುದು.
ಕೇನ್ ವಿಲಿಯಮ್ಸನ್ ಬಳಿಕ ಕಿವೀಸ್ ಪಡೆಯ ಮತ್ತೋರ್ವ ಆಟಗಾರ ಟಿ20 ಸರಣಿಯಿಂದ ಹೊರಕ್ಕೆ
ವೆಂಕಟೇಶ್ ಐಯ್ಯರ್ ಜತೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಮತ್ತೋರ್ವ ಕ್ರಿಕೆಟಿಗ ಅವೇಶ್ ಖಾನ್ ಕೂಡ ನ್ಯೂಜಿಲೆಂಡ್ ವಿರುದ್ಧದ ಈ ಟಿ ಟ್ವೆಂಟಿ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಅವೇಶ್ ಖಾನ್ ಒಟ್ಟು 24 ವಿಕೆಟ್ ಪಡೆದು ಮಿಂಚಿದ್ದರು.