ಸಂಕಷ್ಟದಲ್ಲಿದ್ದ ತಂಡಕ್ಕೆ ಶಕ್ತಿ ನೀಡಿದ ಜೋಡಿ
ದಕ್ಷಿಣ ಆಫ್ರಿಕಾ ವಿರುದ್ಧ ಗೆಲ್ಲಲೇ ಬೇಕಾಗಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಆರಂಭಿಕ ಹಂತದಲ್ಲಿ ಭಾರೀ ಹಿನ್ನಡೆ ಅನುಭವಿಸಿತ್ತು. ಅದರಲ್ಲೂ 13 ಓವರ್ಗಳ ಅಂತ್ಯದಲ್ಲಿ ಭಾರತ 81 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಪಂದ್ಯದಲ್ಲಿಯೂ ನಾಯಕ ರಿಷಭ್ ಪಂತ್ ಕೆಟ್ಟ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದ್ದರು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯಗೆ ದಿನೇಶ್ ಕಾರ್ತಿಕ್ ಜೊತೆಯಾದರು. ಈ ಜೋಡಿ ಸ್ಪೋಟಕ 65 ರನ್ಗಳ ಜೊತೆಯಾಟ ನೀಡುವ ಮೂಲಕ ತಂಡ ದೊಡ್ಡ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
ಸ್ಪೋಟಕ ಅರ್ಧ ಶತಕ ಸಿಡಿಸಿದ ಡಿಕೆ
ಈ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕೇವಲ 27 ಎಸೆತಗಳಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದಿಗೆ ಭರ್ಜರಿ 55 ರನ್ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಸಾಥ್ ನೀಡಿದ್ದು 31 ಎಸೆತಗಳಲ್ಲಿ 46 ರನ್ಗಳ ಕೊಡುಗೆ ನೀಡಿದರು.
ಬಹಳ ಜನರಿಗೆ ನೀವು ಸ್ಪೂರ್ತಿಯಾಗಿದ್ದೀರಿ
ಪಂದ್ಯದ ಮುಕ್ತಾಯದ ಬಳಿಕ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ನಡುವಿನ ಸಂವಾದವನ್ನು ಬಿಸಿಸಿಐ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ದಿನೇಶ್ ಕಾರ್ತಿಕ್ ಬಗೆಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ನಾನು ಒಂದು ವಿಚಾರವನ್ನು ಪ್ರಾಂನಿಕವಾಗಿ ಹೇಳಲು ಬಯಸುತ್ತೇನೆ. ನೀವು ಸಾಕಷ್ಟು ಜನರಿಗೆ ಜೀವನದಲ್ಲಿ ಸ್ಪೂರ್ತಿಯನ್ನು ನೀಡಿದ್ದೀರಿ. ನೀವು ಚರ್ಚೆಯಲ್ಲಿಯೇ ಇಲ್ಲದಿದ್ದಾಗ ನಿಮ್ಮ ಸಂಭಾಷಣೆ ನನಗೆ ನೆನಪಿದೆ. ಬಹಳಷ್ಟು ಜನರು ನಿಮ್ಮನ್ನು ಕಡೆಗಣಿಸಿದ್ದರು" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.
ಟಿ20 ಅರ್ಧಶತಕ ಸಿಡಿಸಿದ ಹೆಚ್ಚು ವಯಸ್ಸಾದ ಕ್ರಿಕೆಟಿಗರ ಪಟ್ಟಿ; ಧೋನಿ ಸೇರಿದಂತೆ ಇಬ್ಬರನ್ನು ಹಿಂದಿಕ್ಕಿದ ಡಿಕೆ!
ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ
"ನನಗೆ ಅಂದಿನ ಆ ಸಂಭಾಷಣೆ ನೆನಪಿದೆ. ಭಾರತಕ್ಕೆ ಮತ್ತೊಮ್ಮೆ ಆಡುವುದು ಹಾಗೂ ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಗುರಿ. ಅದಕ್ಕಾಗಿ ನಾನು ಎಲ್ಲಾ ಪ್ರಯತ್ನವನ್ನು ನಡೆಸಲಿದ್ದೇನೆ ಎಂದು ಹೇಳಿದ್ದಿರಿ. ಈಗ ನೀವು ಅದನ್ನು ಸಾಧಿಸುವುದನ್ನು ನೋಡಲು ಬಹಳ ಸ್ಪೂರ್ತಿದಾಯಕವಾಗಿದೆ. ಇದು ಬಹಳಷ್ಟು ಜನರಿಗೆ ಸ್ಪೂರ್ತಿ ನೀಡುತ್ತದೆ. ನಿಮ್ಮ ಬಗ್ಗೆ ಹೆಮ್ಮೆಯೆನಿಸುತ್ತದೆ" ಎಂದು ಹಾರ್ದಿಕ್ ಪಾಂಡ್ಯ ದಿನೇಶ್ ಕಾರ್ತಿಕ್ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ.