ಋತುರಾಜ್ಗೆ ಮತ್ತೊಂದು ಅವಕಾಶ ನೀಡಬೇಕು
ದಕ್ಷಿಣ ಆಫ್ರಿಕಾ ವಿರುದ್ಧಧ ಸರಣಿಗೆ ಮುನ್ನ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದರು. ಹೀಗಾಗಿ ಋತುರಾಜ್ ಗಾಯಕ್ವಾಡ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ಗಳಿಸಿಕೊಂಡರು. ಆದರೆ ಮೊದಲ ಎರಡು ಪಂದ್ಯಗಳಲ್ಲಿಯೂ ಯುವ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ಬೇರೆ ಆಟಗಾರರಿಗೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಆದರೆ ಸಂಜಯ್ ಬಂಗಾರ್ ಗಾಯಕ್ವಾಡ್ಗೆ ಮತ್ತೊಂದು ಅವಕಾಶವವನ್ನು ನೀಡಬೇಕು ಎಂದಿದ್ದಾರೆ. ಆತನಲ್ಲಿ ಸಾಮರ್ಥ್ಯವಿದ್ದು ಅದಕ್ಕಾಗಿ ಅವಕಾಶ ನೀಡಬೇಕು ಎಂದಿದ್ದಾರೆ ಬಂಗಾರ್. "ಋತುರಾಜ್ಗೆ ಮತ್ತೊಂದು ಅವಕಾಶ ನೀಡಬೇಕು. ಆದರೂ ಅವರು ಬ್ಯಾಟಿಂಗ್ ಮಾಡುವ ಅಂತರ ನನಗೆ ಅಚ್ಚರಿ ಮೂಡಿಸಿದೆ. ಅಷ್ಟು ಅಗತ್ಯವಿದೆಯಾ? ನನ್ನ ಪ್ರಕಾರ ಆತ ಮುಂಚಿತವಾಗಿಯೇ ನಿರ್ಧರಿಸಿ ಚೆಂಡನ್ನು ಬಾರಿಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದಿದ್ದಾರೆ ಸಂಜಯ್ ಬಂಗಾರ್.
ಗಾಯಕ್ವಾಡ್ ಮೇಲಿದೆ ಎಲ್ಲರ ನಿರೀಕ್ಷೆ
ಮುಂದುವರಿದು ಮಾತನಾಡಿದ ಸಂಜಯ್ ಬಂಗಾರ್ "ದೊಡ್ಡ ಹೆಚ್ಚು ಮುಂದಿಟ್ಟು ಆಕ್ರಮಣಕಾರಿ ಆಟವಾಡಲು ಸಾಧ್ಯವಿಲ್ಲ. ಯಾಕೆಂದರೆ ನಿಮ್ಮ ಹೆಚ್ಚಿನ ಭಾರ ಹಿಂಗಾಲಿನ ಮೇಲಿರುತ್ತದೆ. ಹಾಗಾಗಿ ಆತ ಪಾಯಿಂಟ್ ಕಡೆಗೆ ತಳ್ಳುತ್ತಿದ್ದಾರೆ. ಋತುರಾಜ್ ಗಾಯಕ್ವಾಡ್ ಮೇಲೆ ಭಾರತೀಯ ತಂಡದಲ್ಲಿ ಭಾರು ದೊಡ್ಡ ನಿರೀಕ್ಷೆಯಿದೆ. ಆತನನ್ನು ಭವಿಷ್ಯದ ಅಗ್ರಕ್ರಮಾಂಕದ ಆಟಗಾರ ಎಂಬ ನಂಬಿಕೆಯಿದೆ. ಹಾಗಾಗಿ ಈ ಸರಣಿಯಲ್ಲಿ ಆತನ ಬ್ಯಾಟಿಂಗ್ಅನ್ನು ದುರ್ಬೀನ್ ಇಟ್ಟು ನೋಡುತ್ತಾರೆ" ಎಂದಿದ್ದಾರೆ ಸಂಜಯ್ ಬಂಗಾರ್.
ಭಾರತದ ಪರ ಋತು ನೀಡಿಲ್ಲ ಭರವಸೆಯ ಪ್ರದರ್ಶನ
ಇನ್ನು ಐಪಿಎಲ್ನಲ್ಲಿ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಕಳೆದ ಎರಡು ಆವೃತ್ತಿಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಋತುರಾಜ್ ಗಾಯಕ್ವಾಡ್ ಭಾರತ ಕ್ರಿಕೆಟ್ ತಂಡದ ಪರವಾಗಿ ಸಿಕ್ಕ ಅವಕಾಶದಲ್ಲಿ ಮಿಂಚಲು ವಿಫಲವಾಗಿದ್ದಾರೆ. ಈವರೆಗೆ ಐದು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತದ ಪರವಾಗಿ ಆಡುವ ಅವಕಾಶ ಪಡೆದುಕೊಂಡಿರುವ ಋತು ಗಳಿಸಿದ್ದು 63 ರನ್ ಮಾತ್ರ. ಇದಕ್ಕಾಗಿ ಅವರು ಎದುರಸಿಇದ್ದು 55 ಎಸೆತ. ಅವರ ಸರಾಸರಿ 12.60 ಇದ್ದರೆ ಸ್ಟ್ರೈಕ್ರೇಟ್ 114.55 ಆಗಿದೆ. ಕೇವಲ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ಗಳು ಮಾತ್ರವೇ ಬಂದಿದೆ. ಹೀಗಾಗಿ ಋತುರಾಜ್ ಗಾಯಕ್ವಾಡ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವ ಅನಿವಾರ್ಯತೆಯಿದೆ.
ಎರಡು ಬದಲಾವಣೆ ಮಾಡಲಿ ಎಂದ ಸಂಜಯ್
ಇನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲು ಅವಕಾಶವಿದೆ ಎಂದಿದ್ದಾರೆ ಸಂಜಯ್ ಬಂಗಾರ್. ಅಕ್ಷರ್ ಪಟೇಲ್ ದುಬಾರಿಯಾಗುತ್ತಿರುವ ಕಾರಣ ಯುವ ಸ್ಪಿನ್ನರ್ ರವಿ ಬಿಷ್ಣೋಯ್ಗೆ ಅವಕಾಶ ನೀಡಬೇಕು ಎಂದ ಬಂಗಾರ್ ವೇಗದ ಬೌಲಿಂಗ್ನಲ್ಲಿಯೂ ಒಂದು ಬದಲಾವಣೆಗೆ ಸೂಚಿದಿದ್ದಾರೆ. ಮೊದಲ ಆರು ಓವರ್ಗಳ ಪವರ್ಪ್ಲೇನಲ್ಲಿ ಹೆಚ್ಚಿನ ಅವಕಾಶಗಳು ಇರುವ ಕಾರಣ ಡೆತ್ ಓವರ್ನಲ್ಲಿ ತಂಡಕ್ಕೆ ನೆರವಾಗಬಲ್ಲ ಬೌಲರ್ ಸೇರ್ಪಡೆಗೊಳಿಸುವ ಅಗತ್ಯವಿದೆ ಎಂದಿದ್ದಾರೆ ಸಂಜಯ್ ಬಂಗಾರ್. ಹಾಗಾಗಿ ಆವೇಶ್ ಖಾನ್ ಬದಲಿಗೆ ಅರ್ಷ್ದೀಪ್ ಸಿಂಗ್ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸಬೇಕು ಎಂದಿದ್ದಾರೆ.