ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೇಲೆ ಇದೀಗ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಸಜ್ಜಾಗಿದ್ದು ಮುಂದಿನ 16ನೇ ತಾರೀಕಿನಂದು ಭಾರತ ತಂಡ ಮುಂಬೈನಿಂದ ಜೊಹನ್ಸ್ಬರ್ಗ್ಗೆ ಹಾರಾಟ ನಡೆಸಲಿದೆ. ಇನ್ನು ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಮಿಂಚಿದ ಶ್ರೇಯಸ್ ಐಯ್ಯರ್ಗಿಂತಲೂ ಮತ್ತೋರ್ವ ಆಟಗಾರ ಹೆಚ್ಚು ಆಡಲು ಅರ್ಹ ಎಂದು ಭಾರತೀಯ ಕ್ರಿಕೆಟ್ನ ಮಾಜಿ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.
ಸಂಜಯ್ ಬಂಗಾರ್ ಶ್ರೇಯಸ್ ಐಯ್ಯರ್ಗಿಂತ ಹೆಚ್ಚು ಅರ್ಹ ಎಂದು ಹೇಳಿದ್ದು ಹನುಮ ವಿಹಾರಿ ಬಗ್ಗೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಹನುಮ ವಿಹಾರಿ ನಂತರ ಆಡುವ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇನ್ನು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯೇ ಆಗಿರಲಿಲ್ಲ ಹನುಮ ವಿಹಾರಿ. ಆದರೆ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ ಭಾರತ ಎ ತಂಡದ ಪರವಾಗಿ ಆಡಿದ ಸರಣಿಯಲ್ಲಿ ಹನುಮ ವಿಹಾರಿ ತಮ್ಮ ಉತ್ತಮ ಫಾರ್ಮ್ ಮುಂದುವರಿಸಿದ್ದರು.
ರೋಹಿತ್ ಶರ್ಮಾ ಟೀಂ ಇಂಡಿಯಾದ ಯಶಸ್ವಿ ನಾಯಕನಾಗಬಹುದು: ಇಲ್ಲಿವೆ 4 ಕಾರಣಗಳು
ಇನ್ನು ಶ್ರೇಯಸ್ ಐಯ್ಯರ್ ಭಾರತದಲ್ಲಿ ನಡೆದ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಟೆಸ್ಟ್ ಮಾದರಿಗೆ ಪದಾರ್ಪನೆ ಮಾಡಿ ಮೊದಲ ಪಂದ್ಯದಲ್ಲಿಯೇ ಒಂದು ಭರ್ಜರಿ ಶತಕ ಹಾಗೂ ಅರ್ಧ ಶತಕವನ್ನು ಸಿಡಿಸಿದ್ದರು. ಈ ಮೂಲಕ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ನಂತರ ಅತಿ ಹೆಚ್ಚು ರನ್ಗಳಿಸಿದ ಎರಡನೇ ಆಟಗಾರ ಎನಿಸಿದರು. ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐಯ್ಯರ್ 202 ರನ್ಗಳಿಸಿದ್ದರು.
ಹಾಗಿದ್ದರೂ ಈ ಹಿಂದಿನ ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಮಡು ವಿದೇಶಿ ನೆಲದಲ್ಲಿ ಶ್ರೇಯಸ್ ಐಯ್ಯರ್ಗಿಂತ ಹನುಮ ವಿಹಾರಿ ಉತ್ತಮ ಆಯ್ಕೆಯಾಗುತ್ತಾರೆ ಎಂಬ ಅಭಿಪ್ರಾಯವನ್ನು ಸಂಜಯ್ ಬಂಗಾರ್ ವ್ಯಕ್ತಪಡಿಸುತ್ತಾರೆ. "ಹನುಮ ವಿಹಾರಿ ಹಾಗೂ ಶ್ರೇಯಸ್ ಐಯ್ಯರ್ ಮಧ್ಯೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದಾದರೆ ನಾನು ಖಂಡಿತವಾಗಿಯೂ ಹನುಮ ವಿಹಾರಿಯನ್ನು ಆಯ್ದುಕೊಳ್ಳುತ್ತೇನೆ. ಅದಕ್ಕೆ ಕಾರಣ ಅವರು ನೀಡಿದ ಪ್ರದರ್ಶನ. ವಿದೇಶಿ ನೆಲದಲ್ಲಿ ಶ್ರೇಯಸ್ ಐಯ್ಯರ್ಗಿಂತ ಹನುಮ ವಿಹಾರಿ ಹೆಚ್ಚು ಅರ್ಹ ಆಟಗಾರ ಎನಿಸಿಕೊಳ್ಳುತ್ತಾರೆ" ಎಂದು ಸಂಜಯ್ ಬಂಗಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಬುಲ್ಸ್ ಪ್ರೊಮೊ ವೀಡಿಯೋ ವೈರಲ್: ಸುದೀಪ್ ಡೈಲಾಗ್ಗೆ ಚಾರ್ಜ್ ಆದ ಬುಲ್ಸ್
ಹನುಮ ವಿಹಾರಿ 12 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದು ಇದರಲ್ಲಿ 32.84ರ ಸರಾಸರಿಯಂತೆ 624 ರನ್ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧ ಶತಕ ಸೇರಿದೆ. 28ರ ಹರೆಯದ ಈ ಆಟಗಾರ ಆಸ್ಟ್ರೇಲಿಯಾದಲ್ಲಿ 6 ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದರೆ ಇಂಗ್ಲೆಂಡ್ನಲ್ಲಿ 1 ನ್ಯೂಜಿಲೆಂಡ್ನಲ್ಲಿ 2 ಹಾಗೂ ವೆಸ್ಟ್ ಇಂಡೀಸ್ನಲ್ಲಿ 2 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಉಳಿದ ಒಂದು ಪಂದ್ಯವನ್ನು ಮಾತ್ರವೇ ಅವರು ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದಾರೆ.
"ಹನುಮ ವಿಹಾರಿ ಬ್ಯಾಟಿಂಗ್ ನೋಡಿದರೆ ನಮಗೆ ತಿಳಿಯುತ್ತದೆ ಆತ ಕಠಿಣವಾದ ಪಿಚ್ಗಳಲ್ಲಿ ಆಡುವ ಸಮರ್ಥ್ಯವನ್ನು ಹೊಂದಿರುವ ಕ್ರಿಕೆಟಿಗ ಎಂಬುದು. ಆತ ವೆಸ್ಟ್ ಇಂಡೀಸ್ನಲ್ಲಿ ಶತಕವನ್ಉ ಸಿಡಿಸಿದ್ದು ಸಿಡ್ನಿ ಟೆಸ್ಟ್ ಪಂದ್ಯವನ್ನು ಉಳಿಸಿದ ಬ್ಯಾಟರ್. ಆತನಲ್ಲಿ ಯಾವಾಗಲಾದರೂ ನೀವು ಇನ್ನಿಂಗ್ಸ್ ಆರಂಭಿಸಲು ಹೇಳಿದರೆ ಆತ ಅದನ್ನು ಮಾಡುತ್ತಾನೆ. ಆತ ಏಕಾಂಗಿಯಾಗಿ ಟೆಸ್ಟ್ ಪಂದ್ಯವನ್ನು ಉಳಿಸಿದ್ದಾನೆ. ಆತಕ ಒಂದು ಶತಕವನ್ನು ಕೂಡ ಬಾರಿಸಿದ್ದಾನೆ" ಎಂದು ಹನುಮ ವಿಹಾರಿ ಬ್ಯಾಟಿಂಗ್ ಬಗ್ಗೆ ಸಂಜಯ್ ಬಂಗಾರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
2011ರಿಂದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ಸ್: ಅಶ್ವಿನ್ ನಂ 1 ಸ್ಪಿನ್ನರ್
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್
ಮೀಸಲು ಆಟಗಾರರು: ನವದೀಪ್ ಸೈನಿ, ದೀಪಕ್ ಚಾಹರ್, ಸೌರಭ್ ಕುಮಾರ್, ಅರ್ಜನ್ ನಾಗ್ವಾಸ್ವಾಲ್ಲಾ