ಮೂರು ವರ್ಷಗಳ ಬಳಿಕ ಭಾರತ ತಂಡದಲ್ಲಿ ಸ್ಥಾನ
ಮೂರು ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ದಿನೇಶ್ ಕಾರ್ತಿಕ್ ಈ ಬಾರಿಯ ಐಪಿಎಲ್ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದಾರೆ. ಹೀಗಾಗಿ ಈ ಬಾರಿಯ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-ಟ್ವೆಂಟಿ ವಿಶ್ವಕಪ್ ಗೆ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಬೇಕು ಅನ್ನುವ ಅಭಿಪ್ರಾಯಗಳು ಜೋರಾಗಿ ವ್ಯಕ್ತವಾಗುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಳಿಕ ಭಾರತದ ರಾಹುಲ್ ದ್ರಾವಿಡ್ ಕೂಡ ದಿನೇಶ್ ಕಾರ್ತಿಕ್ ಬಗ್ಗೆ ವಿಶೇಷ ಪ್ರಶಂಸೆ ಮಾತುಗಳನ್ನಾಡಿದ್ದಾರೆ. ರಾಜಕೋಟ್ ನಲ್ಲಿ ನಡೆದಿದ್ದ ಸರಣಿಯ ನಾಲ್ಕನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ 27 ಎಸೆತಗಳಲ್ಲಿ 50 ರನ್ ಬಾರಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ
ಅದರಲ್ಲೂ ಫಿನಿಶರ್ ಆಗಿ ದಿನೇಶ್ ಕಾರ್ತಿಕ್ ತಮ್ಮ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಈ ಜವಾಬ್ದಾರಿಯುತ ಪ್ರದರ್ಶನಕ್ಕೆ ಕೋಚ್ ರಾಹುಲ್ ದ್ರಾವಿಡ್ ತಲೆದೂಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ದ್ರಾವಿಡ್ ದಿನೇಶ್ ಕಾರ್ತಿಕ್ ಅವರನ್ನು ಅವರಲ್ಲಿರುವ ವಿಶೇಷ ಕೌಶಲ್ಯದ ಕಾರಣದಿಂದಾಗಿ ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ." ಅವರಲ್ಲಿರುವ ವಿಶೇಷ ಕೌಶಲ್ಯದ ಕಾರಣದಿಂದಾಗಿಯೇ ಅವರನ್ನು ತಂಡಕ್ಕೆ ಸೇರಿಕೊಳ್ಳಲಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಅವರು ಅದನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿರುವುದು ಸಂತಸ ಮೂಡಿಸಿದೆ" ಎಂದಿದ್ದಾರೆ ಕೋಚ್ ರಾಹುಲ್ ದ್ರಾವಿಡ್.
ಡೆತ್ ಓವರ್ನಲ್ಲಿ ಅದ್ಭುತ ಪ್ರದರ್ಶನ
"ರಾಜ್ಕೋಟ್ನಲ್ಲಿ ಇದು ಅದ್ಭುತ ರೀತಿಯಲ್ಲಿ ತಂಡಕ್ಕೆ ಉಪಯೋಗಕ್ಕೆ ಬಂದಿದೆ. ಅಲ್ಲಿ ನಮಗೆ ಗೌರವಯುತ ರನ್ ಗಳಿಸಲು ಕೊನೆಯ 5 ಓವರ್ಗಳಲ್ಲಿ ದೊಡ್ಡ ಪ್ರದರ್ಶನದ ಅಗತ್ಯವಿತ್ತು. ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ನೀಡಿದ ಜವಾಬ್ಧಾರಿಯುತ ಪ್ರದರ್ಶನ ತಂಡ ಉತ್ತಮ ಮೊತ್ತ ಗಳಿಸಲು ಸಾಧ್ಯವಾಯಿತು. ಕಾರ್ತಿಕ್ ಮತ್ತು ಪಾಂಡ್ಯ ಇಬ್ಬರೂ ಡೆತ್ ಓವರ್ಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಬಲ್ಲರು. ಕೊನೆಯ 5-6 ಓವರ್ಗಳಲ್ಲಿ ಅವರು ಯಾವುದೇ ತಂಡದ ವಿರುದ್ಧವೂ ಅದ್ಭುತವಾದ ಪ್ರದರ್ಶನ ನೀಡಬಲ್ಲರು" ಎಂದಿದ್ದಾರೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್.
ಬಲವಾಗಿ ಬಾಗಿಲು ಬಡಿಯುತ್ತಿದ್ದಾರೆ ಡಿಕೆ
"ದಿನೇಶ್ ಕಾರ್ತಿಕ್ ಈ ರೀತಿ ಅದ್ಭುತವಾಗಿ ಪ್ರದರ್ಶನ ನೀಡುವುದನ್ನು ನೋಡಲು ಹರ್ಷವಾಗುತ್ತಿದೆ. ಈ ಮೂಲಕ ಅವರು ಮತ್ತೊಂದು ಆಯ್ಕೆಯನ್ನು ಮುಂದಿಡುತ್ತಿದ್ದಾರೆ. ನಾನು ಹುಡುಗರಿಗೆ ನಾವು ಬಾಗಿಲನ್ನು ಜೋರಾಗಿ ಬಡಿಯಬೇಕೆಂದು ಹೇಳುತ್ತೇನೆ. ತಟ್ಟಿದರೆ ಸಾಕಾಗುವುದಿಲ್ಲ ಎಂದು. ರಾಜ್ ಕೋಟ್ನಲ್ಲಿ ದಿನೇಶ್ ಕಾರ್ತಿಕ್ ಅವರ ಪ್ರದರ್ಶನ ಆ ರೀತಿಯಾಗಿತ್ತು. ದಿನೇಶ್ ಕಾರ್ತಿಕ್ ನಿರಂತರವಾಗಿ ಬಲವಾಗಿ ಬಾಗಿಲು ಬಡಿಯುತ್ತಿದ್ದಾರೆ" ಎಂದು ದಿನೇಶ್ ಕಾರ್ತಿಕ್ ಬಗ್ಗೆ ಕೋಚ್ ರಾಹುಲ್ ಡ್ರಾವಿಡ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.