ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯಲ್ಲಿಯೂ ಭಾರತ ಸೋಲು ಅನುಭವಿಸಿದೆ. ಅಂತಿಮ ಹಂತದಲ್ಲಿ ದೀಪಕ್ ಚಾಹರ್ ಅವರ ಕೆಚ್ಚೆದೆಯ ಪ್ರದರ್ಶನದ ಹೊರತಾಗಿಯೂ ಟೀಮ್ ಇಂಡಿಯಾ ಸೋಲು ಕಂಡಿದ್ದು ಏಕದಿನ ಸರಣಿಯಲ್ಲಿ ವೈಟ್ವಾಶ್ ಅವಮಾನಕ್ಕೆ ತುತ್ತಾಗಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡಕ್ಕೆ ಮತ್ತೊಂದು ಆಘಾತ ಕಾದಿದೆ.
ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ನಿಧಾನಗತಿಯ ಬೌಲಿಂಗ್ ಮಾಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ತಂಡಕ್ಕೆ ಪಂದ್ಯದ ಸಂಭಾವನೆಯ ಶೇಕಡಾ 40ರಷ್ಟು ದಂಡ ವಿಧಿಸಲಾಗಿದೆ. ನಿಗದಿತ ಅವಧಿಗಿಂತ ಭಾರತ ಎರಡು ಓವರ್ಗಳಷ್ಟು ತಡವಾಗಿ ಬೌಲಿಂಗ್ ಮುಕ್ತಾಯಗೊಳಿಸಿತ್ತು.
4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು
ಈ ಹಿನ್ನೆಲೆಯಲ್ಲಿ ಐಸಿಸಿ ಎಲೈಟ್ ಪ್ಯಾನೆಲ್ನ ರೆಫ್ರೀ ಆಂಡಿ ಪೇ ಕ್ರಾಫ್ಟ್ ಭಾರತ ತಂಡಕ್ಕೆ ಈ ದಂಡ ವಿಧಿಸಿದ್ದಾರೆ. ಐಸಿಸಿ ನಿಯಮದ ಪ್ರಕಾರ ಯಾವುದೇ ತಂಡ ಬೌಲಿಂಗ್ನಲ್ಲಿ ತಡವಾಗಿ ಇನ್ನಿಂಗ್ಸ್ ಮುಗಿಸಿದರೆ ಪ್ರತ ಓವರ್ಗೆ ಶೇಕಡಾ 20ರಷ್ಟು ದಂಡ ವಿಧಿಸಲು ಅವಕಾಶವಿದೆ. ಭಾರತ ಎರಡು ಓವರ್ಗಳಷ್ಟು ತಡವಾಗಿ ಬೌಲಿಂಗ್ ಮುಗಿಸಿದ್ದರಿಂದಾಗಿ 40 ಶೇಕಡಾ ದಂಡಕ್ಕೆ ಗುರಿಯಾಗಿದೆ.
ಇನ್ನು ಈ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ತಂಡ ಕ್ವಿಂಟನ್ ಡಿಕಾಕ್ ಅವರ ಅಧ್ಭುತ ಶತಕದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿತ್ತು. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. 8 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಹರಿಣಪಡೆ 34 ರನ್ಗಳಿಸಿದ್ದಾಗ ನಾಯಕ ಟೆಂಬಾ ಬವುಮಾ ವಿಕೆಟ್ ಕೂಡ ಕಳೆದುಕೊಂಡಿತು. ನಂತರ ಮರ್ಕ್ರಮ್ ಕೂಡ ತಂಡ 70 ರನ್ಗಳಿಸಿದ್ದಾಗ ಔಟ್ ಆಗುವ ಮೂಲಕ ಮೂರನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಕ್ವಿಂಟನ್ ಡಿಕಾಕ್ ಹಾಗು ವಾನ್ ಡರ್ ಡುಸ್ಸೆನ್ ಶತಕದ ಜೊತೆಯಾಟವನ್ನು ನೀಡಿದರು. ಡೆಸ್ಸಿನ್ ಭರ್ಜರಿ ಅರ್ಧ ಶತಕ ಗಳಿಸಿದರೆ ಅನುಭವಿ ಕ್ವಿಂಟನ್ ಡಿಕಾಕ್ 124 ರನ್ಗಳ ಕೊಡುಗೆ ನೀಡಿದರು. ಡೇವಿಡ್ ಮಿಲ್ಲರ್ 39 ರನ್ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 287 ರನ್ಗಳಿಗೆ ಆಲೌಟ್ ಆಯಿತು.
ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತವನ್ನು ಅನುಭವಿಸಿತು. ನಾಯಕ ಕೆಎಲ್ ರಾಹುಲ್ ಭಾರತ 18 ರನ್ಗಳಿದ್ದಾಗ ವಿಕೆಟ್ ಕಳೆದುಕೊಂಡರು. ನಂತರ ಎರಡನೇ ವಿಕೆಟ್ಗೆ ಜೊತೆಯಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮತ್ತೊಂದು ಅದ್ಭುತ ಜೊತೆಯಾಟವನ್ನಾಡಿದರು. ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 98 ರನ್ಗಳ ಅದ್ಭುತ ಜೊತೆಯಾಟವನ್ನು ನೀಡಿದರು. ಈ ಸಂದರ್ಭದಲ್ಲಿ 61 ರನ್ಗಳಿಸಿದ್ದ ಧವನ್ ವಿಕೆಟ್ ಕಳೆದುಕೊಂಡರು. ನಂತರ ವಿರಾಟ್ ಕೊಹ್ಲಿ ತಮ್ಮ ಎಚ್ಚರಿಕೆಯ ಆಟವನ್ನು ಮುಂದುವರಿಸಿದ್ದರು. ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 84 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಿಂದ 65 ರನ್ಗಳಿಸಿ ಔಟಾದರು.
ನಂತರ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ರಿಷಭ್ ಪಂತ್ ಮೊದಲ ಎಸೆತದಲ್ಲಿಯೇ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರೆ ಶ್ರೇಯಸ್ ಐಯ್ಯರ್ 26 ರನ್ಗಳಿಗೆ ಔಟಾದರು. ಜಯಂತ್ ಯಾದವ್ ಕೂಡ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ 39 ರನ್ಗಳ ಕೊಡುಗೆ ನೀಡಿದರು. ಈ ಹಂತದಲ್ಲಿ ವೇಗಿ ರಾಹುಲ್ ಚಾಹರ್ ಅಮೋಘ ಆಟವನ್ನು ಪ್ರದರ್ಶಿಸಿದರು. 34 ಎಸೆತಗಳನ್ನು ಎದುರಿಸಿದ ಚಾಹರ್ ಭರ್ಜರಿ 54 ರನ್ ಸಿಡಿಸಿದರು. ಚಾಹರ್ ಅವರ ಈ ಪ್ರದರ್ಶನದಿಂದಾಗಿ ಭಾರತ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಅದ್ಭುತ ಪ್ರದರ್ಶನ ನೀಡಿದ ಚಾಹರ್ ತಂಡದ ಗೆಲುವಿಗೆ 9 ರನ್ಗಳಿದ್ದಾಗ ವಿಕೆಟ್ ಕಳೆದುಕೊಂಡರು. ನಂತರ ಜಸ್ಪರೀತ್ ಬೂಮ್ರಾ ಹಾಗೂ ಚಾಹಲ್ ಕೂಡ ಔಟ್ ಆಗುವ ಮೂಲಕ ಭಾರತ ತಂಡ ಕೇವಲ 4 ರನ್ಗಳ ಅಂತರದಿಂದ ಸೋಲು ಅನುಭವಿಸಿದೆ.